ಕೊರೊನಾ ವೈರಸ್ನಿಂದ ಬಚಾವ, ಈಗ ಕಾಂಗ್ರೆಸ್ ವೈರಸ್ನಿಂದ ಮುಕ್ತವಾಗಬೇಕಿದೆ…
ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಿಂದ 322 ನವಜಾತ ಶಿಶುಗಳು, 29 ಬಾಣಂತಿ ಮಹಿಳೆಯರು ಮೃತಪಟ್ಟಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ
ಬೆಂಗಳೂರು: ಅಧಿಕಾರಕ್ಕೆ ಬಂದರೆ ಎನ್ಎಚ್ಎಂ ಅಡಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಹಾಗು ನೌಕರರನ್ನ ಖಾಯಂ ಮಾಡುತ್ತೇವೆ ಎಂದು ಸುಳ್ಳು ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದ ಕರ್ನಾಟಕ ಕಾಂಗ್ರೆಸ್ ಪಕ್ಷ, ಈಗ ಅವರಿಗೆ ವಿಶ್ವಾಸ ದ್ರೋಹ ಬಗೆದಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಒಂದು ಕಡೆ ಆರೋಗ್ಯ ಇಲಾಖೆಯಲ್ಲಿ 35,196 ಹುದ್ದೆಗಳು ಖಾಲಿ ಇವೆ. ಮತ್ತೊಂದು ಕಡೆ ಖಾಯಂ ಹುದ್ದೆ ಬೇಡಿಕೆಗಾಗಿ 30,000 ಗುತ್ತಿಗೆ ವೈದ್ಯರು, ನೌಕರರು ಮುಷ್ಕರಕ್ಕೆ ಸಜ್ಜಾಗುತ್ತಿದ್ದಾರೆ. ಕೊರೊನಾ ವೈರಸ್ ನಿಂದ ಬಚಾವಾದ ಕರ್ನಾಟಕದ ಜನತೆ, ಈಗ ಕಾಂಗ್ರೆಸ್ ವೈರಸ್ ನಿಂದ ಮುಕ್ತವಾಗಬೇಕಿದೆ ಎಂದಿದ್ದಾರೆ.
ಬೆಳಗಾವಿಯಲ್ಲಿ ಬಾಣಂತಿಯರ ಸಾವು: ಬಳ್ಳಾರಿಯಲ್ಲಿ ಸಂಭವಿಸುತ್ತಿರುವ ಬಾಣಂತಿ ಮಹಿಳೆಯರ ಸರಣಿ ಸಾವಿನ ಬೆನ್ನಲ್ಲೇ ಈಗ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಿಂದ 322 ನವಜಾತ ಶಿಶುಗಳು, 29 ಬಾಣಂತಿ ಮಹಿಳೆಯರು ಮೃತಪಟ್ಟಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ನಿರ್ವಹಣೆ ಮಾಡುವಲ್ಲಿ ಈ ಕೊಲೆಗಡುಕ ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಇದರ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದಾರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.