ದೂರದೃಷ್ಟಿ ವ್ಯಕ್ತಿತ್ವದ ಅಟಲ್ ಜಿ
ನಮ್ಮ ಸುತ್ತ್ತಲಿನ ಹಲವು ಕ್ಷೇತ್ರಗಳಲ್ಲಿ ಅಟಲ್ ಜಿ ಅವರ ನಾಯಕತ್ವದ ದೀರ್ಘಕಾಲೀನ ಪ್ರಭಾವವನ್ನು ನಾವು ನೋಡಬಹುದು. ಅವರ ಯುಗವು ಮಾಹಿತಿ ತಂತ್ರಜ್ಞಾನ, ದೂರಸಂಪರ್ಕ ಮತ್ತು ಸಂವಹನ ಜಗತ್ತಿನಲ್ಲಿ ಒಂದು ದೊಡ್ಡ ಜಿಗಿತವನ್ನು ಕಂಡಿತು. ಅತ್ಯಂತ ಶಕ್ತಿಯುತ ಯುವ ಶಕ್ತಿಯನ್ನು ಹೊಂದಿರುವ ರಾಷ್ಟ್ರಕ್ಕೆ ಇದು ವಿಶೇಷವಾಗಿ ಮಹತ್ವದ್ದಾಗಿತ್ತು. ಮೊದಲ ಬಾರಿಗೆ, ಅಟಲ್ ಜಿ ನೇತೃತ್ವದ ಎನ್ಡಿಎ ಸರ್ಕಾರವು ಸಾಮಾನ್ಯ ನಾಗರಿಕರಿಗೆ ತಂತ್ರಜ್ಞಾನವು ಲಭ್ಯವಾಗುವಂತೆ ಮಾಡಲು ಗಂಭೀರ ಪ್ರಯತ್ನ ಮಾಡಿತು. ಅಲ್ಲದೆ, ಭಾರತದ ಸಂಪರ್ಕ ವ್ಯವಸ್ಥೆಯಲ್ಲಿ ದೂರದೃಷ್ಟಿಯನ್ನು ತೋರಿಸಿತು. ಇಂದಿಗೂ, ಬಹುತೇಕ ಜನರು ಭಾರತದ ಮೂಲೆ ಮೂಲೆಯನ್ನು ಸಂಪರ್ಕಿಸುವ ಸುವರ್ಣ ಚತುಷ್ಪಥ ಯೋಜನೆಯನ್ನು ನೆನಪಿಸಿಕೊಳ್ಳುತ್ತಾರೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಂತಹ ಉಪಕ್ರಮಗಳ ಮೂಲಕ ಸ್ಥಳೀಯ ಸಂಪರ್ಕವನ್ನು ಹೆಚ್ಚಿಸಲು ವಾಜಪೇಯಿ ಸರ್ಕಾರದ ಪ್ರಯತ್ನಗಳು ಅಷ್ಟೇ ಗಮನಾರ್ಹವಾಗಿವೆ. ದೆಹಲಿ ಮೆಟ್ರೋಗಾಗಿ ವ್ಯಾಪಕವಾದ ಕೆಲಸವನ್ನು ಮಾಡುವ ಮೂಲಕ ಮೆಟ್ರೋ ಸಂಪರ್ಕವನ್ನು ಉತ್ತೇಜಿಸಿತು, ಇದು ವಿಶ್ವದರ್ಜೆಯ ಮೂಲಸೌಕರ್ಯ ಯೋಜನೆಯಾಗಿ ಹೊರಹೊಮ್ಮಿದೆ. ಹೀಗಾಗಿ, ವಾಜಪೇಯಿ ಸರ್ಕಾರವು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಿದ್ದು ಮಾತ್ರವಲ್ಲದೆ ದೂರದ ಪ್ರದೇಶಗಳನ್ನು ಹತ್ತಿರಕ್ಕೆ ತಂದಿತು, ಆ ಮೂಲಕ ಏಕತೆ ಮತ್ತು ಏಕೀಕರಣವನ್ನು ಉತ್ತೇಜಿಸಿತು.
ಸಾಮಾಜಿಕ ಕ್ಷೇತ್ರದಲ್ಲಿ, ಸರ್ವಶಿಕ್ಷಾ ಅಭಿಯಾನದಂತಹ ಉಪಕ್ರಮಗಳು ದೇಶಾದ್ಯಂತ ಜನರಿಗೆ, ವಿಶೇಷವಾಗಿ ಬಡವರು ಮತ್ತು ಅಂಚಿನಲ್ಲಿರುವವರಿಗೆ ಆಧುನಿಕ ಶಿಕ್ಷಣವನ್ನು ಪ್ರವೇಶಿಸುವ ಭಾರತವನ್ನು ನಿರ್ಮಿಸುವ ಕನಸನ್ನು ಅಟಲ್ ಜಿ ಕಂಡಿದ್ದರು ಎಂಬುದನ್ನು ಎತ್ತಿ ತೋರಿಸುತ್ತದೆ. ಹಾಗೆಯೇ, ಅವರ ಸರ್ಕಾರವು ಹಲವಾರು ಆರ್ಥಿಕ ಸುಧಾರಣೆಗಳನ್ನು ತಂದಿತು. ಇದು ಸ್ವಜನಪಕ್ಷಪಾತ ಮತ್ತು ನಿಶ್ಚಲತೆಯನ್ನು ಉತ್ತೇಜಿಸುವ ಆರ್ಥಿಕ ತತ್ವವನ್ನು ಅನುಸರಿಸಿದ ದಶಕಗಳ ನಂತರ ಭಾರತದ ಆರ್ಥಿಕ ಉತ್ಕರ್ಷಕ್ಕೆ ವೇದಿಕೆಯಾಯಿತು.
ವಾಜಪೇಯಿ ಅವರ ನಾಯಕತ್ವದ ಅದ್ಭುತ ಉದಾಹರಣೆಯನ್ನು ೧೯೯೮ರ ಬೇಸಿಗೆಯಲ್ಲಿ ಕಾಣಬಹುದು. ಅವರ ಸರ್ಕಾರವು ಆಗತಾನೇ ಅಧಿಕಾರ ವಹಿಸಿಕೊಂಡಿತ್ತು ಮತ್ತು ಮೇ ೧೧ ರಂದು ಭಾರತವು ಆಪರೇಷನ್ ಶಕ್ತಿ ಎಂದು ಕರೆಯಲಾಗುವ ಪೋಖ್ರಾನ್ ಪರೀಕ್ಷೆಗಳನ್ನು ನಡೆಸಿತು. ಈ ಪರೀಕ್ಷೆಗಳು ಭಾರತದ ವೈಜ್ಞಾನಿಕ ಸಮುದಾಯದ ಶಕ್ತಿಗೆ ಉದಾಹರಣೆಯಾದವು. ಭಾರತ ಈ ಪರೀಕ್ಷೆ ನಡೆಸಿದಾಗ ವಿಶ್ವವೇ ಬೆಚ್ಚಿಬಿದ್ದಿತು ಹಾಗೂ ಯಾವುದೇ ಅನುಮಾನಕ್ಕೆ ಆಸ್ಪದವಿಲ್ಲದೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತು. ಯಾವುದೇ ಸಾಮಾನ್ಯ ನಾಯಕರು ತಲೆಬಾಗುತ್ತಿದ್ದರು, ಆದರೆ ಅಟಲ್ ಜಿ ವಿಭಿನ್ನವಾಗಿದ್ದರು. ನಂತರ ಏನಾಯಿತು? ಭಾರತವು ಬಲವಾಗಿ ಮತ್ತು ದೃಢವಾಗಿ ನಿಂತಿತು ಮತ್ತು ಸರ್ಕಾರವು ಎರಡು ದಿನಗಳ ನಂತರ ಮೇ ೧೩ ರಂದು ಮರು ಪರೀಕ್ಷೆಗೆ ಕರೆ ನೀಡಿತು! ಮೇ ೧೧ರ ಪರೀಕ್ಷೆಗಳು ವೈಜ್ಞಾನಿಕ ಪರಾಕ್ರಮವನ್ನು ತೋರಿಸಿದರೆ, ಮೇ ೧೩ರ ಪರೀಕ್ಷೆಗಳು ನಿಜವಾದ ನಾಯಕತ್ವವನ್ನು ತೋರಿಸಿದವು. ಭಾರತವು ಬೆದರಿಕೆ ಅಥವಾ ಒತ್ತಡಕ್ಕೆ ಮಣಿಯುವ ದಿನಗಳು ಮುಗಿದುಹೋದವು ಎಂಬ ಸಂದೇಶವನ್ನು ಜಗತ್ತಿಗೆ ನೀಡಿತ್ತು. ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಎದುರಿಸುತ್ತಿದ್ದರೂ, ವಾಜಪೇಯಿಯವರ ಆಗಿನ ಎನ್ಡಿಎ ಸರ್ಕಾರವು ತನ್ನ ಸಾರ್ವಭೌಮತ್ವವನ್ನು ರಕ್ಷಿಸುವ ಭಾರತದ ಹಕ್ಕನ್ನು ಸ್ಪಷ್ಟಪಡಿಸುವುದರ ಜೊತೆಗೆ ವಿಶ್ವಶಾಂತಿಯ ಪ್ರಬಲ ಪ್ರತಿಪಾದಕವಾಗಿತ್ತು.
ಅಟಲ್ ಜಿ ಭಾರತೀಯ ಪ್ರಜಾಪ್ರಭುತ್ವವನ್ನು ಅರ್ಥಮಾಡಿಕೊಂಡರು ಮತ್ತು ಅದನ್ನು ಬಲಪಡಿಸುವ ಅಗತ್ಯವನ್ನು ಸಹ ಅರ್ಥಮಾಡಿಕೊಂಡರು. ಅಟಲ್ ಜಿ ಅವರು ಎನ್ಡಿಎ ರಚನೆಯ ಅಧ್ಯಕ್ಷತೆ ವಹಿಸಿದ್ದರು, ಇದು ಭಾರತೀಯ ರಾಜಕೀಯದಲ್ಲಿ ಮೈತ್ರಿಗಳನ್ನು ಮರು ವ್ಯಾಖ್ಯಾನಿಸಿತು. ಅವರು ಇತರರನ್ನು ಒಟ್ಟುಗೂಡಿಸಿದರು ಮತ್ತು ಎನ್ಡಿಎಯನ್ನು ಅಭಿವೃದ್ಧಿ, ರಾಷ್ಟ್ರೀಯ ಪ್ರಗತಿ ಮತ್ತು ಪ್ರಾದೇಶಿಕ ಮಹತ್ವಾಕಾಂಕ್ಷೆಗಳಿಗೆ ಶಕ್ತಿಯನ್ನಾಗಿ ಮಾಡಿದರು. ಅಟಲ್ ಜಿ ಅವರ ರಾಜಕೀಯ ಜೀವನದುದ್ದಕ್ಕೂ ಅವರ ಸಂಸದೀಯ ಪ್ರತಿಭೆ ಕಂಡುಬಂದಿದೆ. ಬೆರಳೆಣಿಕೆಯ ಸಂಸದರಿದ್ದ ಪಕ್ಷಕ್ಕೆ ಸೇರಿದ ಅವರು, ಆಗಿನ ಸರ್ವಶಕ್ತ ಕಾಂಗ್ರೆಸ್ ಪಕ್ಷದ ಅಧಿಕಾರವನ್ನೇ ಅಲ್ಲಾಡಿಸಲು ಅವರ ಮಾತು ಸಾಕಾಗಿತ್ತು. ಪ್ರಧಾನಿಯಾಗಿ ಅವರು ಪ್ರತಿಪಕ್ಷಗಳ ಟೀಕೆಗಳನ್ನು ತಮ್ಮ ಶೈಲಿ ಮತ್ತು ವಿಷಯದಿಂದ ಮೊಂಡಾಗಿಸಿದರು. ಅವರ ರಾಜಕೀಯ ಜೀವನವು ಹೆಚ್ಚಾಗಿ ವಿರೋಧ ಪಕ್ಷದಲ್ಲಿಯೇ ಕಳೆಯಿತು, ಆದರೆ ಕಾಂಗ್ರೆಸ್ ಅವರನ್ನು ದೇಶದ್ರೋಹಿ ಎಂದು ಕರೆಯುವ ಕೀಳುಮಟ್ಟಕ್ಕೆ ಇಳಿದಾಗಲೂ ಅವರಲ್ಲಿ ಯಾರ ಬಗ್ಗೆಯೂ ಕಹಿಯ ಕುರುಹು ಸಹ ಇರಲಿಲ್ಲ!
ಅವರು ಅವಕಾಶವಾದಿ ಮಾರ್ಗಗಳ ಮೂಲಕ ಅಧಿಕಾರಕ್ಕೆ ಅಂಟಿಕೊಂಡವರಲ್ಲ. ೧೯೯೬ರಲ್ಲಿ, ಕುದುರೆ ವ್ಯಾಪಾರ ಮತ್ತು ಕೊಳಕು ರಾಜಕೀಯದ ಹಾದಿಯನ್ನು ಅನುಸರಿಸುವುದಕ್ಕಿಂತ ರಾಜೀನಾಮೆ ನೀಡುವುದು ಉತ್ತಮ ಎಂದು ಅವರು ಭಾವಿಸಿದರು. ೧೯೯೯ರಲ್ಲಿ ಅವರ ಸರ್ಕಾರ ೧ ಮತದಿಂದ ಸೋತಿತು. ಆ ಸಮಯದಲ್ಲಿ ನಡೆಯುತ್ತಿದ್ದ ಅನೈತಿಕ ರಾಜಕಾರಣವನ್ನು ಪ್ರಶ್ನಿಸುವಂತೆ ಅನೇಕರು ಕೇಳಿಕೊಂಡರು, ಆದರೆ ಅವರು ನಿಯಮಗಳನ್ನು ಅನುಸರಿಸಲು ಆದ್ಯತೆ ನೀಡಿದರು. ಅಂತಿಮವಾಗಿ, ಅವರು ಜನರಿಂದ ಮತ್ತೊಂದು ಪ್ರಬಲ ಜನಾದೇಶದೊಂದಿಗೆ ಮರಳಿದರು. ಸಂವಿಧಾನವನ್ನು ರಕ್ಷಿಸುವ ಬದ್ಧತೆಯ ವಿಷಯಕ್ಕೆ ಬಂದಾಗ, ಅಟಲ್ ಜಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ಹುತಾತ್ಮತೆಯಿಂದ ಅವರು ಆಳವಾಗಿ ಪ್ರಭಾವಿತರಾಗಿದ್ದರು. ವರ್ಷಗಳ ನಂತರ, ಅವರು ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯ ಆಧಾರಸ್ತಂಭವಾಗಿದ್ದರು. ತುರ್ತು ಪರಿಸ್ಥಿತಿಯ ನಂತರ ೧೯೭೭ರ ಚುನಾವಣೆಯ ಸಮಯದಲ್ಲಿ, ಅವರು ತಮ್ಮ ಪಕ್ಷವನ್ನು(ಜನಸಂಘ) ಜನತಾ ಪಕ್ಷದೊಂದಿಗೆ ವಿಲೀನಗೊಳಿಸಲು ಒಪ್ಪಿಕೊಂಡರು. ಇದು ಅವರಿಗೆ ಮತ್ತು ಇತರರಿಗೆ ನೋವಿನ ನಿರ್ಧಾರವಾಗಿತ್ತೆಂದು ನನಗೆ ಖಾತ್ರಿಯಿದೆ, ಆದರೆ ಸಂವಿಧಾನವನ್ನು ರಕ್ಷಿಸುವುದು ಅತ್ಯಂತ ಮುಖ್ಯವಾಗಿತ್ತು. ಭಾರತೀಯ ಸಂಸ್ಕೃತಿಯಲ್ಲಿ ಅಟಲ್ ಜಿ ಎಷ್ಟು ಆಳವಾಗಿ ಬೇರೂರಿದ್ದರು ಎಂಬುದು ಕೂಡ ಗಮನಾರ್ಹವಾಗಿದೆ. ಭಾರತದ ವಿದೇಶಾಂಗ ಸಚಿವರಾದ ನಂತರ, ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಮಾತನಾಡಿದ ಮೊದಲ ಭಾರತೀಯ ನಾಯಕರಾದರು. ಇದು ಭಾರತದ ಪರಂಪರೆ ಮತ್ತು ಅಸ್ಮಿತೆಯ ಬಗ್ಗೆ ಅವರಿಗಿದ್ದ ಅಪಾರ ಹೆಮ್ಮೆಯನ್ನು ಪ್ರದರ್ಶಿಸಿತು, ಜಾಗತಿಕ ವೇದಿಕೆಯಲ್ಲಿ ಅಳಿಸಲಾಗದ ಗುರುತು ಮೂಡಿಸಿತು. ಅಟಲ್ ಜಿ ಅವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದ್ದರು ಮತ್ತು ಅವರ ಸಾಹಿತ್ಯ ಮತ್ತು ಅಭಿವ್ಯಕ್ತಿಯ ಮೇಲಿನ ಪ್ರೀತಿಯಿಂದ ಅವರ ಜೀವನವು ಶ್ರೀಮಂತವಾಗಿತ್ತು.
ಸೃಜನಶೀಲ ಬರಹಗಾರ ಮತ್ತು ಕವಿಯಾಗಿ ಅವರು ಸ್ಫೂರ್ತಿ ನೀಡಲು, ಆಲೋಚನೆಯನ್ನು ಪ್ರಚೋದಿಸಲು ಮತ್ತು ಸಾಂತ್ವನ ಹೇಳಲು ಪದಗಳನ್ನು ಬಳಸಿದರು. ರಾಷ್ಟ್ರಕ್ಕಾಗಿ ಅವರ ಆಂತರಿಕ ಹೋರಾಟಗಳು ಮತ್ತು ಭರವಸೆಗಳನ್ನು ಪ್ರತಿಬಿಂಬಿಸುವ ಅವರ ಕವಿತೆಗಳು ಎಲ್ಲಾ ವಯೋಮಾನದ ಜನರಲ್ಲಿ ಅನುರಣಿಸುತ್ತಲೇ ಇವೆ. ಅಟಲ್ ಜಿ ಅವರಂತಹ ವ್ಯಕ್ತಿಯೊಂದಿಗೆ ಕಲಿಯಲು ಮತ್ತು ಅವರೊಂದಿಗೆ ಸಂವಹನ ನಡೆಸಲು ನನ್ನಂತಹ ಅನೇಕ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಸಿಕ್ಕಿದ್ದು ಅದೃಷ್ಟದ ಸಂಗತಿಯಾಗಿದೆ. ಬಿಜೆಪಿಗೆ ಅವರ ಕೊಡುಗೆ ಮೂಲಭೂತವಾದುದು. ಆ ದಿನಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯವನ್ನು ಕೊನೆಗೊಳಿಸಲು ಪರ್ಯಾಯ ನಿರೂಪಣೆಯನ್ನು ಮುನ್ನಡೆಸಿದ್ದು ಅವರ ಹಿರಿಮೆಯನ್ನು ತೋರಿಸುತ್ತದೆ. ಅವರ ೧೦೦ನೇ ಜನ್ಮ ವಾರ್ಷಿಕೋತ್ಸವದಂದು, ಅವರ ಆದರ್ಶಗಳನ್ನು ಸಾಕಾರಗೊಳಿಸಲು ಮತ್ತು ಭಾರತಕ್ಕಾಗಿ ಅವರ ಕನಸನ್ನು ನನಸಾಗಿಸಲು ನಮ್ಮನ್ನು ಸಮರ್ಪಿಸಿಕೊಳ್ಳೋಣ. ಅವರ ಉತ್ತಮ ಆಡಳಿತ, ಏಕತೆ ಮತ್ತು ಪ್ರಗತಿಯ ತತ್ವಗಳನ್ನು ಒಳಗೊಂಡ ಭಾರತವನ್ನು ನಿರ್ಮಿಸಲು ನಾವು ಶ್ರಮಿಸೋಣ. ನಮ್ಮ ರಾಷ್ಟ್ರದ ಸಾಮರ್ಥ್ಯದ ಬಗ್ಗೆ ಅಟಲ್ ಜಿ ಅವರ ಅಚಲವಾದ ನಂಬಿಕೆಯು ಉನ್ನತ ಗುರಿಗಾಗಿ ಹೆಚ್ಚು ಶ್ರಮಿಸಲು ನಮ್ಮನ್ನು ಪ್ರೇರೇಪಿಸುತ್ತಿದೆ.