ಹಿಂಡಲಗಾ ಜೈಲಲ್ಲಿ ಕೈದಿಗಳಿಗೆ ರಾಜ್ಯಾತಿಥ್ಯ
ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಹಣ ಇಟ್ಟು ಇಸ್ಪೇಟ್ ಆಟ ಆಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆಯೇ? ಇಂತಹ ಭಾರೀ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.
ಇಲ್ಲಿನ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭಗೊಂಡಿರುವ ಹೊತ್ತಿನಲ್ಲಿ ಜೈಲಿನ ಸರ್ಕಲ್ ನಂಬರ್ ೨ರ ಎರಡನೇ ಬ್ಯಾರಕ್ನಲ್ಲಿ ಕೈದಿಗಳು ಐಷಾರಾಮಿ ಜೀವನ ನಡೆಸುತ್ತಿದ್ದು ರಾಜಾರೋಷವಾಗಿ ಹಣವಿಟ್ಟು ಇಸ್ಪೀಟ್ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಹಿಂಡಲಗಾ ಜೈಲಿನಲ್ಲಿ ಕೈದಿಗಳು ಬಿಂದಾಸಾಗಿ ಮೊಬೈಲ್ ಬಳಸುತ್ತಿರುವುದು, ಗಾಂಜಾ ಸೇವಿಸುತ್ತಿರುವುದು, ಸಿಗರೇಟ್ ಸೇದುವುದು ಬೆಳಕಿಗೆ ಬಂದಿದೆ. ಜೈಲಿಗೆ ಬಿಯರ್ ಸೇರಿದಂತೆ ಎಲ್ಲವೂ ಹೊರಗಿನಿಂದ ಪೂರೈಕೆಯಾಗುತ್ತಿರುವುದು ಬಹಿರಂಗಗೊಂಡಿದೆ.
ಇಲ್ಲಿ ಹಣ ಕೊಟ್ಟರೆ ಕೈದಿಗಳಿಗೆ ೨೦ ಸಾವಿರ ರೂ. ಬೆಲೆಯ ಆಂಡ್ರಾಯ್ಡ್ ಮೊಬೈಲ್ ಕೂಡ ಸಿಗುತ್ತದಂತೆ. ಶಿಕ್ಷೆ ಅನುಭವಿಸುತ್ತಿರುವ ಕೈದಿಯಿಂದಲೇ ಐಷಾರಾಮಿ ಜೀವನ ಅನಾವರಣಗೊಂಡಿದೆ. ನೆಲಮಂಗಲ ಮೂಲದ ಮುಬಾರಕ್ ಎಂಬ ಕೈದಿ ಇಸ್ಪೀಟ್ ಆಡುವ ವಿಡಿಯೋ ಮಾಡಿದ್ದಾನೆ ಎನ್ನಲಾಗಿದೆ. ಬೆಳಗಾವಿಯ ಕೈದಿ ಸುರೇಶ್, ಶಾಹಿದ್ ಖುರೇಶಿ, ಆನಂದ್ ನಾಯಕ್ ಸೇರಿ ಹಲವರು ವಿಡಿಯೋದಲ್ಲಿದ್ದಾರೆ. ಹಣ ಕೊಟ್ಟರೆ ಜೈಲು ಅಧೀಕ್ಷಕ ಕೃಷ್ಣಮೂರ್ತಿ ಎಲ್ಲಾ ವ್ಯವಸ್ಥೆ ಮಾಡ್ತಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಹಿಂದೆ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿದ್ದ ವೀಡಿಯೋ ವೈರಲ್ ಆಗಿತ್ತು. ಈಗ ಬೆಳಗಾವಿಯ ಹಿಂಡಲಗಾ ಜೈಲಿನ ವೀಡಿಯೋ ಸದ್ದು ಮಾಡುತ್ತಿದೆ.