For the best experience, open
https://m.samyuktakarnataka.in
on your mobile browser.

ಅಡ್ವಾಣಿ ಅವರಿಗೆ ಭಾರತ ರತ್ನ: ಮಂತ್ರಾಲಯ ಶ್ರೀಗಳಿಂದ ಅಭಿನಂದನೆ

07:26 PM Feb 03, 2024 IST | Samyukta Karnataka
ಅಡ್ವಾಣಿ ಅವರಿಗೆ ಭಾರತ ರತ್ನ  ಮಂತ್ರಾಲಯ ಶ್ರೀಗಳಿಂದ ಅಭಿನಂದನೆ

ರಾಯಚೂರು: ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರಿಗೆ ಕೇಂದ್ರ ಸರ್ಕಾರ ದೇಶದ ಪ್ರತಿಷ್ಠಿತ ಪುರಸ್ಕಾರವಾದ ಭಾರತ ರತ್ನವನ್ನು ಘೋಷಿಸಿರುವ ಹಿನ್ನೆಲೆಯಲ್ಲಿ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಅಭಿನಂದಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಸ್ವಾಮೀಜಿಗಳು, ದೇಶದಾದ್ಯಂತ ಬಿಜೆಪಿ, ಹಿಂದೂತ್ವದ ಅಲೆಯನ್ನು ಮೂಡಿಸಿರುವ ಎಲ್.ಕೆ.ಅಡ್ವಾಣಿ ಅವರು ನಿಜವಾಗಿಯೂ ಅಭಿನಂದನಾರ್ಹರು. ಅವರ ಪರಿಶ್ರಮ, ಹೋರಾಟ ಮತ್ತು ಜನ ಜಾಗೃತಿ ಜಾತ್ರೆಯ ಪರಿಣಾಮವಾಗಿ ಇಂದು ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಸ್ಥಳದಲ್ಲಿ ಮಂದಿರ ನಿರ್ಮಾಣವಾಗಿ, ಬಾಲ ಶ್ರೀರಾಮ ದೇವರ ಮೂರ್ತಿಯ ಪ್ರತಿಷ್ಠಾಪನೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂತಹ ಉತ್ತಮ ಸಾಧಕರಿಗೆ ದೇಶದ ಅತ್ಯುನ್ನತ ಗೌರವ ಭಾರತ ರತ್ನ ಲಭಿಸಿರುವುದು ಎಲ್ಲರಿಗೂ ಸಂತಸದ ಮತ್ತು ಹೆಮ್ಮಯ ವಿಷಯವಾಗಿದ್ದು, ಈ ಸಮಯದಲ್ಲಿ ಅವರನ್ನು ನಾವು ಅಭಿನಂದಿಸುತ್ತೇವೆ. ಅವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಅವರಿಗೆ ಭಾರತ ರತ್ನವನ್ನು ನೀಡಿ ಗೌರವಿಸುತ್ತಿರುವುದು ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೂ ಅಭಿನಂದಿಸುತ್ತೇವೆ. ಎಲ್.ಕೆ.ಅಡ್ವಾಣಿ ಅವರಿಗೆ ಭಗವಂತ ದೀರ್ಘಾಯುಷ್ಯ, ಆರೋಗ್ಯ ನೀಡಲಿ, ಅವರ ಮಾರ್ಗದರ್ಶನ ದೇಶಕ್ಕೆ ಹಾಗೂ ಹಿಂದೂ ಸಮಾಜಕ್ಕೆ ಎಂದಿಗೂ ಇರಲಿ ಎಂದು ತಿಳಿಸಿದ್ದಾರೆ.