For the best experience, open
https://m.samyuktakarnataka.in
on your mobile browser.

ಚಿತ್ರದುರ್ಗದಲ್ಲಿ ಮಧ್ಯರಾತ್ರಿ ಸ್ಥಳ ಮಹಜರು

01:47 AM Jun 15, 2024 IST | Samyukta Karnataka
ಚಿತ್ರದುರ್ಗದಲ್ಲಿ ಮಧ್ಯರಾತ್ರಿ ಸ್ಥಳ ಮಹಜರು

ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ-೪ ರಾಘವೇಂದ್ರನನ್ನು ಶುಕ್ರವಾರ ಮುಂಜಾನೆ ೧.೩೦ರ ಸುಮಾರಿನಲ್ಲಿ ನಗರಕ್ಕೆ ಕರೆತಂದ ಬೆಂಗಳೂರಿನ ಪೊಲೀಸರು ಸ್ಥಳ ಮಹಜರು ಮಾಡಿದರು.
ಮಧ್ಯಾಹ್ನದಿಂದಲೂ ಚಳ್ಳಕೆರೆ ಗೇಟ್, ಬಾಲಾಜಿ ಬಾರ್ ಅಂಡ್ ರೆಸ್ಟೋರೆಂಟ್ ಬಳಿಗೆ ಬೆಂಗಳೂರಿನ ಪೊಲೀಸರು ಬರುತ್ತಾರೆಂಬ ಮಾಹಿತಿ ಮೇರೆಗೆ ಜನರು ಜಮಾಯಿಸಿದ್ದರು. ಸುಮಾರು ರಾತ್ರಿ ೧೧ ಗಂಟೆಯಾದರೂ ಬರಲಿಲ್ಲ. ನಂತರ ಜನರು ಮನೆ ಕಡೆ ತೆರಳಿದರು. ಶುಕ್ರವಾರ ಮುಂಜಾನೆ ೧.೩೦ರಲ್ಲಿ ಪೊಲೀಸರು ಆರೋಪಿ-೪ ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷ ರಾಘವೇಂದ್ರನೊಂದಿಗೆ ಆಗಮಿಸಿ ಸ್ಥಳ ಮಹಜರು ಮಾಡಿದರು.
ಬೈಕ್ ನಿಲ್ಲಿಸಿದ ಜಾಗ, ರೇಣುಕಾಸ್ವಾಮಿಯನ್ನು ಕಾರಿನಲ್ಲಿ ಕರೆದುಕೊಂಡು ಹೋದ ಸ್ಥಳ, ಪೆಟ್ರೋಲ್ ಬಂಕ್ ಬಳಿ ಪೆಟ್ರೋಲ್ ಹಾಕಿಸಿದ ಸ್ಥಳವನ್ನು ಪಂಚನಾಮೆ ಮಾಡಿದರು.
ಮತ್ತಿಬ್ಬರು ಆರೋಪಿಗಳ ಶರಣು: ತಂದೆ ಸಾವು
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಶುಕ್ರವಾರ ಡಿವೈಎಸ್ಪಿ ಕಚೇರಿಯಲ್ಲಿ ಪೊಲೀಸರಿಗೆ ಶರಣರಾಗಿದ್ದಾರೆ. ಏತನ್ಮಧ್ಯೆ ಶರಣಾರಾಗಿರುವ ಆರೋಪಿ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸುದ್ದಿ ನೋಡಿ ತಂದೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನಗರದ ಸಿಹಿನೀರು ಹೊಂಡ ಬಳಿಯ ವಾಸಿ ಅನುಕುಮಾರ್ ಹಾಗೂ ರೈಲ್ವೆ ಸ್ಟೇಷನ್ ವಾಸಿ ಜಗ್ಗೇಶ್ ಅಲಿಯಾಸ್ ಜಗ್ಗು ಪೊಲೀಸರಿಗೆ ಶರಣಾದವರು. ಇವರಿಬ್ಬರು ಅಟೋ ಚಾಲಕರು. ಇಬ್ಬರನ್ನೂ ಬೆಂಗಳೂರಿನ ಪೊಲೀಸರು ಕರೆದುಕೊಂಡು ಹೋಗಿದ್ದಾರೆ.