For the best experience, open
https://m.samyuktakarnataka.in
on your mobile browser.

ಪಾಗಲ್ ಪ್ರೇಮಿಗೆ ಜೀವಾವಧಿ ಶಿಕ್ಷೆ

01:17 AM Feb 02, 2024 IST | Samyukta Karnataka
ಪಾಗಲ್ ಪ್ರೇಮಿಗೆ ಜೀವಾವಧಿ ಶಿಕ್ಷೆ

ಕೂಡ್ಲಿಗಿ: ಪ್ರೀತಿಸಿದ ಯುವತಿಯ ರುಂಡವನ್ನು ಮಚ್ಚಿನಿಂದ ಕಡಿದು ಬೈಕ್‌ನ ಸೈಡ್ ಬ್ಯಾಗ್‌ನಲ್ಲಿಟ್ಟುಕೊಂಡು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ ಕನ್ನಿಬೋರಯ್ಯನಹಟ್ಟಿಯ ಭೋಜರಾಜ ಎಂಬ ಹುಚ್ಚು ಪ್ರೇಮಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಕಳೆದ ವರ್ಷ ಜು. ೨೧ರಂದು ನಡೆದ ಈ ಪ್ರಕರಣದಲ್ಲಿ ಭೋಜರಾಜ ತಾನು ಪ್ರೀತಿಸುತ್ತಿದ್ದ ನಿರ್ಮಲಾ(೨೩) ಎಂಬ ಯುವತಿಯ ರುಂಡವನ್ನು ಕಡಿದು ಹೊಸಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ. ಹೊಸಪೇಟೆ ನ್ಯಾಯಾಲಯ ಅಪರಾಧಿ ಭೋಜರಾಜನಿಗೆ ಜೀವಾವಧಿ ಶಿಕ್ಷೆ ಹಾಗೂ ೧.೨೫ ಲಕ್ಷ ದಂಡ ವಿಧಿಸಿ ಆದೇಶ ನೀಡಿದೆ. ಸರ್ಕಾರಿ ಅಭಿಯೋಜಕ ಟಿ. ಅಂಬಣ್ಣ ಸರ್ಕಾರದ ಪರ ವಾದ ಮಂಡಿಸಿದ್ದರು.
ಘಟನೆ ಹಿನ್ನೆಲೆ: ಆರೋಪಿ ಭೋಜರಾಜ ತನ್ನದೇ ಗ್ರಾಮದ ನಿರ್ಮಲ ಎಂಬ ಯುವತಿಯನ್ನು ಪ್ರೀತಿಸಿದ್ದು, ಯುವತಿಯ ಮನೆಯವರು ಆಕೆಯ ಓದು ಮುಗಿಯುವವರೆಗೆ ಲಗ್ನ ಮಾಡುವುದಿಲ್ಲ ಎಂದು ಹೇಳಿದ್ದರು. ಆಗ ಆತ ತನ್ನ ತಂದೆ ಬಸವರಾಜ ಜತೆ ಸೇರಿ ಯುವತಿಯ ಮನೆಯವರಿಗೆ ಬೆದರಿಕೆ ಹಾಕಿದ್ದ. ನಿರ್ಮಲಳ ತಂದೆ, ತಾಯಿ ಮದುವೆಗೆ ಒಪ್ಪದೇ ಹೋದ ಕಾರಣ ೨೦೨೨ರ ಜು. ೨೧ರಂದು ಬೆಳಿಗ್ಗೆ ೧೧.೩೦ಕ್ಕೆ ನಿರ್ಮಲಾಳ ಮನೆಗೆ ನುಗ್ಗಿ ಮಚ್ಚಿನಿಂದ ಆಕೆಯ ರುಂಡವನ್ನು ಬೇರ್ಪಡಿಸಿದ್ದ.