For the best experience, open
https://m.samyuktakarnataka.in
on your mobile browser.

ಪಾದಚಾರಿಗಳ ಮೇಲೆ ಮೊಗಚಿ ಬಿದ್ದ ಟಿಪ್ಪರ್: ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವು

09:37 PM Apr 14, 2024 IST | Samyukta Karnataka
ಪಾದಚಾರಿಗಳ ಮೇಲೆ ಮೊಗಚಿ ಬಿದ್ದ ಟಿಪ್ಪರ್  ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವು

ಬಾಗಲಕೋಟೆ: ಕೃಷಿ ಕೆಲಸ ಮುಗಿಸಿ ಮನೆಗೆ ಹೊರಟವರ ಮೇಲೆ ಮಣ್ಣು ತುಂಬಿದ್ದ ಟಿಪ್ಪರ್ ಮೊಗಚಿ ಬಿದ್ದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೀಳಗಿ ತಾಲೂಕಿನ ಹೊನ್ಯಾಳ ಆರ್‌ಸಿ ಬಳಿ ನಡೆದಿದೆ.
ಮೃತಪಟ್ಟಿರನ್ನು ಯಂಕಪ್ಪ ಶಿವಪ್ಪ ತೋಳಮಟ್ಟಿ(೭೦), ಯಂಕಪ್ಪನ ಪತ್ನಿ ಯಲ್ಲವ್ವ ಯಂಕಪ್ಪ ತೋಳಮಟ್ಟಿ(೬೫), ಅವರ ಪುತ್ರ ಪುಂಡಲಿಕ ಯಂಕಪ್ಪ ತೋಳಮಟ್ಟಿ(೩೮), ಪುತ್ರಿ ನಾಗವ್ವ ಅಶೋಕ ಬೊಮ್ಮನ್ನವರ(೪೮), ಆಕೆಯ ಪತಿ ಅಶೋಕ ನಿಂಗಪ್ಪ ಬೊಮ್ಮನವರ(೫೫) ಎಂದು ಗುರುತಿಸಲಾಗಿದ್ದು, ಎಲ್ಲರೂ ಒಂದೇ ಕುಟುಂಬದವರಾಗಿದ್ದಾರೆ. ಮೃತ ದುರ್ದೈವಿಗಳು ತಮ್ಮ ಹೊಲದಲ್ಲಿ ಶೇಂಗಾ ರಾಶಿ ಮುಗಿಸಿಕೊಂಡು ಹೊರಟಾಗ ಮಣ್ಣು ತುಂಬಿದ್ದ ಲಾರಿ ಬರುವುದನ್ನು ಗಮನಿಸಿ ಐವರು ರಸ್ತೆ ಬದಿಯಲ್ಲಿ ನಿಂತಿದ್ದಾರೆ. ದುರದೃಷ್ಟವಶಾತ್ ಜವರಾಯನ ರೂಪದಲ್ಲಿ ಬಂದ ಟಿಪ್ಪರ್ ಐವರ ಮೇಲೆ ಮೊಗಚಿಬಿದ್ದು, ಬಲಿ ಪಡೆದಿದೆ.
ಟಿಪ್ಪರ್‌ನ ಗಾಲಿ ಸ್ಫೋಟಗೊಂಡಿದ್ದರಿಂದಾಗಿ ಘಟನೆ ನಡೆದಿರುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಸ್ಥಳಕ್ಕೆ ಬೀಳಗಿ ಠಾಣೆ ಪೊಲೀಸರು ದೌಡಾಯಿಸಿ ತನಿಖೆ ಕೈಗೊಂಡಿದ್ದಾರೆ. ಎಸ್‌ಪಿ ವೈ.ಅಮರನಾಥ ರೆಡ್ಡಿ ಕೂಡ ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ಕೈಗೊಂಡಿದ್ದಾರೆ. ಹಳೆ ಹೊನ್ನಾಕಟ್ಟಿಯಿಂದ ಮನ್ನಿಕೇರಿಗೆ ಟಿಪ್ಪರ್ ತೆರಳುತಿತ್ತು ಎಂದು ಹೇಳಲಾಗಿದೆ.
ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ನಂತರದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ತೀವ್ರ ಮನಕಲಕುವಂತ್ತಿವೆ. ಟಿಪ್ಪರ್ ಗಮನಿಸಿ ರಸ್ತೆ ಬಿಟ್ಟು ಹೊಲವೊಂದರ ಬದುವಿನಲ್ಲಿ ನಿಂತರೂ ಜವರಾಯ ಹುಡುಕಿಕೊಂಡು ಬಂದು ಅಪ್ಪಳಿಸಿದಂತೆ ಒಂದೇ ಕುಟುಂಬದ ಐವರನ್ನು ಬಲಿಪಡೆದಿದ್ದು, ಹೊನ್ನಾಯಳ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.