For the best experience, open
https://m.samyuktakarnataka.in
on your mobile browser.

ಮಗಳನ್ನು ರಕ್ಷಿಸಲು ಬಾವಿಗೆ ಹಾರಿದ ತಾಯಿ ಸಾವು

09:58 PM Feb 29, 2024 IST | Samyukta Karnataka
ಮಗಳನ್ನು ರಕ್ಷಿಸಲು ಬಾವಿಗೆ ಹಾರಿದ ತಾಯಿ ಸಾವು

ಬೆಳಗಾವಿ: ಹಿತ್ತಲಿಗೆ ಹೋಗುವ ದಾರಿ ಮಧ್ಯೆ ಇದ್ದ ಬಾವಿಗೆ ಬಿದ್ದ ಮಗಳನ್ನು ರಕ್ಷಣೆ ಮಾಡಲು ಬಾವಿಗೆ ಹಾರಿದ ತಾಯಿಯೊಬ್ಬಳು ಪ್ರಾಣ ಕಳೆದುಕೊಂಡ ಘಟನೆ ಇಲ್ಲಿನ ಉಚಗಾಂವ್‌ನ ಚವ್ಹಾಟಗಲ್ಲಿಯಲ್ಲಿ ನಡೆದಿದೆ.
ಮೃತರನ್ನು ಪ್ರಿಯಾಂಕ ಮನೋಹರ ಪಾವಶೆ (೪೦) ಎಂದು ಗುರುತಿಸಲಾಗಿದೆ. ಈಕೆಯ ಪುತ್ರಿ ೭ನೇ ತರಗತಿ ಓದುತ್ತಿರುವ ಅಕ್ಷರಾ ಮನೋಹರ ಪಾವಶೆ(೧೩) ಹಿತ್ತಲಿನ ೪೫ ಅಡಿ ಬಾವಿಗೆ ಬಿದ್ದಿದ್ದಾಳೆ. ಮಗಳನ್ನು ಹೊರತೆಗೆಯಲು ತಾಯಿಯೂ ಬಾವಿಗೆ ಹಾರಿದ್ದು ಈ ವೇಳೆ ಪ್ರಿಯಾಂಕ ತಲೆಗೆ ಬಲವಾದ ಏಟು ಬಿದ್ದಿದ್ದರಿಂದ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಬಾವಿಗೆ ಬಿದ್ದ ಶಬ್ದ ಕೇಳಿ ಅಕ್ಕ-ಪಕ್ಕದವರು ಧಾವಿಸಿ ಇಬ್ಬರನ್ನೂ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಪ್ರಿಯಾಂಕ ಬದುಕುಳಿಯಲಿಲ್ಲ. ಪುತ್ರಿ ಅಕ್ಷರಾ ಅಪಾಯದಿಂದ ಪಾರಾಗಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.