ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು
ಸಾಗರದ ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ಎಂ.ಜಿ.ಶಾಂತಕುಮಾರ್ ಅವರು ತಮ್ಮ ಜೀವರಕ್ಷಣೆ ಮಾಡುವಂತೆ ನ್ಯಾಯಮೂರ್ತಿಗಳ ಮುಂದೆ ಅಂಗಲಾಚಿರುವ ಹೃದಯ ವಿದ್ರಾವಕ ಘಟನೆ
ಬೆಂಗಳೂರು: ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು ಸಿಎಂ ಸಿದ್ದರಾಮಯ್ಯನವರೇ? ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ, ಒತ್ತಡ, ಬೆದರಿಕೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾಗರದ ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ಎಂ.ಜಿ.ಶಾಂತಕುಮಾರ್ ಅವರು ತಮ್ಮ ಜೀವರಕ್ಷಣೆ ಮಾಡುವಂತೆ ನ್ಯಾಯಮೂರ್ತಿಗಳ ಮುಂದೆ ಅಂಗಲಾಚಿರುವ ಹೃದಯ ವಿದ್ರಾವಕ ಘಟನೆ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರಕ್ಕೆ ಮತ್ತೊಂದು ನಿದರ್ಶನವಾಗಿದೆ. ಸಿಎಂ ಸಿದ್ದರಾಮಯ್ಯನವರೇ, ಶಿವಮೊಗ್ಗದಲ್ಲಿ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆಗೆ ಶರಣಾದರು. ಗ್ರಾಮೀಣಾಭಿವೃದ್ಧಿ ಇಲಾಖೆಯ ಲಂಚಕೋರತನಕ್ಕೆ ಬೇಸತ್ತು ದಾವಣಗೆರೆಯ ಗುತ್ತಿಗೆದಾರ ಪಿ.ಸಿ.ಗೌಡರ್ ಆತ್ಮಹತ್ಯೆಗೆ ಶರಣಾದರು. ವರ್ಗಾವಣೆ ದಂಧೆಯ ಒತ್ತಡ, ಕಿರುಕುಳ ತಾಳಲಾರದೆ ಯಾದಗಿರಿ ಪಿಎಸ್ ಐ ಪರಶುರಾಮ್ ಹೃದಯಾಘಾತದಿಂದ ಸಾವನ್ನಪ್ಪಿದರು. ರಾಮನಗರದ ಸಿಸಿಬಿ ಇನ್ಸ್ಪೆಕ್ಟರ್ ತಿಮ್ಮೇಗೌಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಸಾಗರದ ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ಶಾಂತಕುಮಾರ್ ಕೋರ್ಟ್ ಮುಂದೆ ಜೀವ ಉಳಿಸಲು ಅಂಗಲಾಚಿದ್ದಾರೆ. ನಿಮ್ಮ ಭ್ರಷ್ಟಾಚಾರದ ದಾಹ ತೀರಲು ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು ಸಿಎಂ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ್ದಾರೆ.