For the best experience, open
https://m.samyuktakarnataka.in
on your mobile browser.

ಉಚಿತ ವಿದ್ಯುತ್ ಹೊರೆ ಸರ್ಕಾರವೇ ಭರಿಸಲಿ

02:34 AM Jan 30, 2024 IST | Samyukta Karnataka
ಉಚಿತ ವಿದ್ಯುತ್ ಹೊರೆ ಸರ್ಕಾರವೇ ಭರಿಸಲಿ

ಬೆಂಗಳೂರು: ರಾಜ್ಯ ಸರ್ಕಾರ ೨೦೦೮ ರಿಂದ ೧೦ ಅಶ್ವಶಕ್ತಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡುತ್ತ ಬಂದಿದೆ. ಈಗ ಮಾಸಿಕ ೨೦೦ ಯೂನಿಟ್ ಒಳಗೆ ವಿದ್ಯುತ್ ಬಳಸುವ ಗೃಹ ಬಳಕೆದಾರರಿಗೆ ಉಚಿತ ನೀಡುವುದನ್ನು ಆರಂಭಿಸಿದೆ. ಇದರಿಂದ ಕೈಗಾರಿಕೆ, ವಾಣಿಜ್ಯ ಬಳಕೆದಾರರು ಹಾಗೂ ಗೃಹ ಬಳಕೆಯಲ್ಲಿ ಹೆಚ್ಚಿನ ವಿದ್ಯುತ್ ಬಳಸುವವರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಇದನ್ನು ಕಡಿಮೆ ಮಾಡಬೇಕು ಎಂದರೆ ಸರ್ಕಾರ ಮುಂಬರುವ ಬಜೆಟ್‌ನಲ್ಲಿ ವಿದ್ಯುತ್ ರಂಗಕ್ಕೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸಬೇಕು ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಸರ್ಕಾರಕ್ಕೆ ಪತ್ರ ಬರೆದು ತಿಳಿಸಿದೆ.
ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದ್ದರೂ ಸಂಪೂರ್ಣವಾಗಿ ವಿದ್ಯುತ್ ಶುಲ್ಕವನ್ನು ಭರಿಸುತ್ತಿಲ್ಲ.ಸರ್ಕಾರ ನೀಡುವ ಸಹಾಯಧನ ಸಾಕಾಗುವುದಿಲ್ಲ.ಅದಕ್ಕಾಗಿ ಕೈಗಾರಿಕೆ, ವಾಣಿಜ್ಯ ಮತ್ತು ಕೆಲವು ಗೃಹ ಬಳಕೆದಾರರು ಹೆಚ್ಚಿನ ದರವನ್ನು `ಕ್ರಾಸ್ ಸಬ್ಸಿಡಿ' ರೂಪದಲ್ಲಿ ನೀಡುತ್ತಿದ್ದಾರೆ. ಸರ್ಕಾರದ ತೀರ್ಮಾನಗಳಿಗೆ ನಾವು ಹೆಚ್ಚಿನ ದರ ಪಾವತಿಸುವುದು ಸರಿಯಾದ ಕ್ರಮವಲ್ಲ ಎಂದು ಉದ್ಯಮಿಗಳು ಮೊದಲಿನಿಂದಲೂ ಹೇಳುತ್ತ ಬಂದಿದ್ದಾರೆ. ಅದರಿಂದ ಇದಕ್ಕೆ ಅಂತ್ಯ ಹಾಡಬೇಕು ಎಂದರೆ ಸರ್ಕಾರ ತಾನು ಪ್ರಕಟಿಸಿದಂತೆ ಉಚಿತ ವಿದ್ಯುತ್ ನೀಡಲು ಸಂಪೂರ್ಣ ಹಣವನ್ನು ತನ್ನ ಬಜೆಟ್‌ನಿಂದಲೇ ಭರಿಸಬೇಕು ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ವಿದ್ಯುತ್ ನಿಯಂತ್ರಣ ಪ್ರಾಧಿಕಾರ ಸರಾಸರಿ ವಿದ್ಯುತ್ ದರವನ್ನು ನಿಗದಿಪಡಿಸುತ್ತದೆ. ಉಚಿತ ವಿದ್ಯುತ್ ವಿತರಣೆಗೆ ಸರ್ಕಾರ ಅನುದಾನ ನೀಡುತ್ತದೆ. ಆದರೂ ಇದು ಪರಿಪೂರ್ಣವಾಗುವುದಿಲ್ಲ.ಅದಕ್ಕಾಗಿ ಹೆಚ್ಚಿನ ಹೊರೆಯನ್ನು ಕೈಗಾರಿಕೆ, ವಾಣಿಜ್ಯ ಹಾಗೂ ಅತಿ ಹೆಚ್ಚಿನ ದರ ನೀಡುವ ಗೃಹ ಬಳಕೆದಾರರು ಭರಿಸುತ್ತಿದ್ದಾರೆ. ಇದನ್ನು ಕೈಬಿಡಬೇಕು ಎಂದರೆ ಸರ್ಕಾರ ಉಚಿತ ವಿದ್ಯುತ್ ನೀಡುವುದಕ್ಕೆ ಆಗುವ ಎಲ್ಲ ವೆಚ್ಚವನ್ನು ಭರಿಸಬೇಕು ಎಂದು ಪ್ರಾಧಿಕಾರ ತಿಳಿಸಿದೆ.
ಈ ಬಾರಿ ಮಳೆ ಕೈಗೊಟ್ಟಿದ್ದರಿಂದ ನೀರಾವರಿ ಪಂಪ್‌ಸೆಟ್‌ಗಳಿಗೆ ಹೆಚ್ಚಿನ ವಿದ್ಯುತ್ ನೀಡಲಾಗಿದೆ. ಮುಂದಿನ ವರ್ಷವೂ ಮಳೆ ಕೈಕೊಟ್ಟರೆ ಮತ್ತೆ ಹೆಚ್ಚು ವಿದ್ಯುತ್ ಬಳಕೆಗೆ ಹಣ ಒದಗಿಸಬೇಕು.ಪ್ರತಿ ವರ್ಷ ವಿದ್ಯುತ್ ಬಳಕೆ ಶೇ.೮ರಷ್ಟು ಅಧಿಕಗೊಳ್ಳುತ್ತಿದೆ. ಅದರಿಂದ ಸಹಾಯಧನದ ಪ್ರಮಾಣವನ್ನು ಇದಕ್ಕೆ ತಕ್ಕಂತೆ ಹೆಚ್ಚಿಸುವ ಅಗತ್ಯವಿದೆ.
ಅಡ್ಡ ಸಹಾಯಧನ
ಮಾಸಿಕ ೨೦೦ ಯೂನಿಟ್ ಗೃಹ ಬಳಕೆದಾರರಿಗೆ ಉಚಿತ ವಿದ್ಯುತ್ ನೀಡುವುದು ಬಳಕೆದಾರರನ್ನು ಅವಲಂಬಿಸಿರುವುದರಿಂದ ಅದನ್ನು ಲೆಕ್ಕ ಹಾಕುವುದು ಕಷ್ಟ. ಸರಾಸರಿ ವಿದ್ಯುತ್ ದರ ಪ್ರತಿ ವರ್ಷ ಹೆಚ್ಚುತ್ತ ಹೋಗುತ್ತಿದೆ.ಇದರಿಂದ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಅದರೊಂದಿಗೆ ಸರ್ಕಾರ ನೀಡುವ ಉಚಿತ ವಿದ್ಯುತ್ ಪ್ರಮಾಣದವೆಚ್ಚಕ್ಕೂ ಅಡ್ಡ ಸಹಾಯಧನ (ಕ್ರಾಸ್ ಸಬ್ಸಿಡಿ)ನೀಡಬೇಕು ಎಂದರೆ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ಆರ್ಥಿಕ ಹೊರೆ ಅಧಿಕಗೊಳ್ಳುತ್ತಿದೆ. ಇದರಿಂದ ಇಡೀ ಕೈಗಾರಿಕೆ ರಂಗದ ಪ್ರಗತಿ ಕುಂಠಿತಗೊಳ್ಳುವ ಅಪಾಯವಿದೆ ಎಂದು ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅದರಿಂದ ಈ ಹೆಚ್ಚುವರಿ ವೆಚ್ಚವನ್ನು ಸರ್ಕಾರ ತನ್ನ ಬಜೆಟ್ ಮೂಲಕ ಸಂಪೂರ್ಣವಾಗಿ ಭರಿಸಬೇಕು.