For the best experience, open
https://m.samyuktakarnataka.in
on your mobile browser.

ಪ್ರತೀ ಊರಲ್ಲಿ ರಾಮನವಮಿ ಆಚರಣೆಗೆ ಪೇಜಾವರಶ್ರೀ ಕರೆ

11:05 PM Apr 16, 2024 IST | Samyukta Karnataka
ಪ್ರತೀ ಊರಲ್ಲಿ ರಾಮನವಮಿ ಆಚರಣೆಗೆ ಪೇಜಾವರಶ್ರೀ ಕರೆ

ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣೋತ್ತರ ಪ್ರಥಮ ಶ್ರೀರಾಮ ನವಮಿ ಮಹೋತ್ಸವವನ್ನು ಪ್ರತೀ ಊರಲ್ಲಿ ವಿಶೇಷವಾಗಿ ಆಚರಣೆ ಮಾಡುವಂತೆ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ.
ಈ ಕುರಿತು ಏ.೫ರಂದು ಅಯೋಧ್ಯೆಯಲ್ಲಿ ನಡೆದ ಟ್ರಸ್ಟ್ನ ಸಭೆಯಲ್ಲೂ ಶ್ರೀಗಳು ಸೇರಿದಂತೆ ಎಲ್ಲ ಸದಸ್ಯರು ವಿವರವಾಗಿ ಚರ್ಚಿಸಲಾಗಿದೆ. ಚುನಾವಣೆ ನೀತಿಸಂಹಿತೆ ಉಲ್ಲಂಘನೆಯಾಗದಂತೆ ಪ್ರತಿ ಊರಲ್ಲಿರುವ ದೇವಸ್ಥಾನ ಭಜನಾ ಮಂದಿರ, ಸಮುದಾಯ ಭವನಗಳಲ್ಲಿ ಭಜನೆ, ರಾಮ ತಾರಕ ಮಂತ್ರ ಜಪ ಯಜ್ಞ, ಸಾಲುದೀಪ ಬೆಳಗುವಿಕೆ, ಮಕ್ಕಳಿಗಾಗಿ ರಾಮವೇಷ ಸ್ಪರ್ಧೆ, ರಾಮಾಯಣ ಆಧರಿತ ರಸಪ್ರಶ್ನೆ, ಭಕ್ತರಿಗೆ ಪಾನಕ ಕೋಸಂಬರಿ ಮೊದಲಾದವುಗಳ ವಿತರಣೆ ಇತ್ಯಾದಿಗಳನ್ನು ಸಾಮೂಹಿಕವಾಗಿ ಆಚರಿಸಬೇಕು. ಆದರೆ ಬಹಿರಂಗ ವೇದಿಕೆಯ ಕಾರ್ಯಕ್ರಮಗಳು ಬೇಕಿಲ್ಲ ಎಂದು ಶ್ರೀಗಳು ತಿಳಿಸಿದ್ದಾರೆ.
ಉತ್ಸವ ಆಚರಣೆ ಜೊತೆಗೆ ಸಮಾಜದಲ್ಲಿರುವ ಅಶಕ್ತರಿಗಾಗಿ ಸೇವಾ ಕಾರ್ಯಗಳನ್ನೂ ಸಂಯೋಜಿಸಬೇಕು. ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚ, ಬಡ ರೋಗಿಗಳ ಚಿಕಿತ್ಸಾ ವೆಚ್ಚ, ಮನೆ ಇಲ್ಲದವರಿಗೆ ಮನೆ ನಿರ್ಮಾಣಕ್ಕೆ ಸಹಾಯ, ಊರು ಹಳ್ಳಿಗಳಲ್ಲಿ ಶ್ರಮದಾನಗಳ ಮೂಲಕ ಸ್ವಚ್ಛತಾ ಕಾರ್ಯ, ಕೆರೆಗಳ ಶುದ್ಧೀಕರಣ, ಪ್ರಾಣಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವುದು, ಗೋಶಾಲೆಗಳಿಗೆ ನೆರವು, ಅನಾಥರಿಗೆ ಊಟೋಪಹಾರ ವಿತರಣೆ ಇಷ್ಟು ಮಾತ್ರವಲ್ಲದೇ ಸಮಾಜೋಪಯೋಗಿಯಾದ ಇನ್ನೂ ಹಲವು ಸೇವಾ ಕಾರ್ಯಗಳನ್ನು ಈ ಸಂದರ್ಭದಲ್ಲಿ ಜೋಡಿಸಿಕೊಳ್ಳುವುದು ಒಳ್ಳೆಯದು ಎಂದು ಶ್ರೀಗಳು ಸಲಹೆ ನೀಡಿದ್ದಾರೆ.