For the best experience, open
https://m.samyuktakarnataka.in
on your mobile browser.

ಎಲ್ಲೂ ಹೋಗಲ್ಲ, ಮಾಮಾ ಎಲ್ಲೂ..

04:30 AM Mar 22, 2024 IST | Samyukta Karnataka
ಎಲ್ಲೂ ಹೋಗಲ್ಲ  ಮಾಮಾ ಎಲ್ಲೂ

ನರಸಿಂಹರಾವ್
ಕಳೆದ ಎರಡು ದಿನಗಳಿಂದ ಕಾದು ನೋಡಿ… ಕಾದು ನೋಡಿ… ಅಕ್ಕ ತಂಗಿಯರೇ-ಅಣ್ಣ ತಮ್ಮಂದಿರೇ… ಕಾದು ನೋಡಿ ಎಂದು ಹೇಳಿ ರಾಜ್ಯದ ಜನರ ಕುತೂಹಲ ಕೆರಳಿಸಿದ್ದ ಸದಾ ನಗಾನಂದ ಗೌಡರು… ಇದೀಗ ಎಲ್ಲೋ ಹೋಗಲ್ಲ… ಮಾಮಾ ಎಲ್ಲೂ ಹೋಗಲ್ಲ ಎಂದು ಪ್ರಧಾನಿ ಮೋದಿ ಅವರಿಗೆ ಕೇಳುವ ಹಾಗೆ ಹಾಡು ಹಾಡಿ… ಇದೇ ಶುದ್ಧಿ… ನನಗೇ ಇದೆ ಬುದ್ದಿ ಎಂದು ಹೇಳಿದ ಮಾತಿಗೆ ಅತ್ತ ಕೊಪ್ಪಳದ ಕರಡಿ… ಇಲ್ಲಿ ನಾನು ನಾನೇ… ಅಲ್ಲಿ ನೀನು ನೀನೇ… ಎಂದು ರ‍್ರೆಪ ಎಂದು ಮಂಡಾಳೊಗ್ಗಣ್ಣಿ ಮಿರ್ಚಿ ಮಾಡಿಸಿ ಮೀಟಿಂಗ್ ಕರೆದು… ನಾನೂ ನಿಲ್ಲುತ್ತೇನೆ ಎಂದು ಹೇಳಿ ಮೊಣಕಾಲು ನೀವಿಕೊಂಡಿದ್ದಾರೆಂಬ ಸುದ್ದಿ ಇದೆ. ಶಿವಮೊಗ್ಗದಲ್ಲಿ ಈಶ್ವರಪ್ಪ ಮಾತ್ರ ಹಗಲೆಲ್ಲ ನಾಲಿಗೆ ಹೊರತೆಗೆದು ಮಾತನಾಡುತ್ತಿದ್ದಾರೆ. ಪ್ರತಿ ಮಾತಿಗೂ ಯಡಿಯೂರಪ್ಪ ಅವರನ್ನೇ ಟಾರ್ಗೆಟ್ ಮಾಡಿ…ಮುಂದೇನಾಗುತ್ತದೆ ಎಂದು ನಾನು ನಿಮಗೆ ಹೇಳಬಲ್ಲೆ…. ಎಲೆಕ್ಷನ್ ಮುಗಿದ ಮೇಲೆ ನಾನು ಸೀದಾ ಶ್ರೀರಾಮಮಂದಿರಕ್ಕೆ ಹೋಗಿ ಆಶೀರ್ವಾದ ತೆಗೆದುಕೊಳ್ಳುತ್ತೇನೆ. ಅವರು ಮನೆಯಲ್ಲಿ ಕುಳಿತು ಭಜನೆ ಮಾಡುತ್ತಾರೆ ನೋಡಲೈ ಬಹುಪರಾಕ್ ಎಂದು ಕಣಿ ಹೇಳಿದ ಹಾಗೆ ಹೇಳುತ್ತಿದ್ದಾರೆ. ಇವರೆಲ್ಲದರದ್ದೂ ಹೀಗಾದರೆ..ಅತ್ತ
ಅಕ್ಕ ಅಕ್ಕಾ ಸುಮಕ್ಕ ಡೆಲ್ಲಿಗೆ ನೀನು ಬಾರಕ್ಕ
ಎಂದು ಆಕಾಶವಾಣಿ ಆದಂತಾಗಿ ಡೆಲ್ಲಿಗೆ ಹಾರಿದ್ದರು. ಅಲ್ಲಿ ನಡ್ಡಾ-ಗಿಡ್ಡಾ ಎಲ್ಲ ಸೇರಿ ನೋಡೋಣ ನೋಡೋಣ ಎಂದು ಹೇಳಿದಾಗ… ಮತ್ತೆ ವಾಪಸ್ ಬಂದು.. ಮಂಡ್ಯನೇ ನನ್ನ ಇಂಡಿಯಾ..ಇಂಡಿಯಾ ಅಂದರೆ ಮಾತೃ…ಅದಕ್ಕಾಗಿ ಮಂಡ್ಯ ಬಿಟ್ಟು ಹೋಗಲ್ಲ.. ನಾನು ಹೋಗಲ್ಲ ಎಂದು ಹೇಳಿದಾಗ. ಕುಮಾರಸ್ವಾಮಿ ಅವರು… ಮೊದ್ಲೇ ನನಗೆ ಅರಾಮಿಲ್ಲ… ಆಪರೇಶನ್ ಇದೆ.. ಸುಮಕ್ಕ ಅಂದರೆ ನನಕ್ಕ… ಮಂಡ್ಯ ಅಂದರೆ ನನ್ನದು… ನನ್ನ ಕಂದ ನಿಖಿಲ್‌ದು… ಆವಾಗ ನಾನು ಅಲ್ಲಿಂದಲೇ ಎಲ್ಲಿದ್ದೀಯಪ್ಪ ಎಂದು ಕೂಗಿದ್ದು ಇಡೀ ದೇಶಕ್ಕೆ ದೇಶವೇ ಕೇಳಿದೆ… ಅಕ್ಕಾ ನೀ ಸುಮ್ನಿದ್ದು ಬಿಡಕ್ಕಾ ಎಂದು ಎಂದು ಕಣ್ಣುಮುಚ್ಚಿ ಬಾಯಿ ತೆಗೆದು ಹೇಳಿದ್ದಾರೆ. ಈ ಮಧ್ಯೆ ಬಿಜೆಪಿ ಅಭ್ಯರ್ಥಿಗಳು.. ಓಣಿ ಓಣಿ ತಿರುಗಿ… ಅಕ್ಕಾ… ಅಣ್ಣಾ… ದೊಡಪ್ಪಾ… ಎಂದು ಕೈ ಮುಗಿಯುತ್ತಿದ್ದಾರೆ. ಕೈನ ಕೆಲವರು ಒಲ್ಲೇ… ನಾನೊಲ್ಲೇ ಅಂದ ಮೇಲೆ ಅಲ್ಲಿ ಯಾರು.. ಅಲ್ಲಿ ಯಾರು ಎಂದು ಅಳೆದೂ ತೂಗಿ… ಕೊನೆಗೆ ನೀನೇ ಹೋಗಪ್ಪ ಅಂದ ಮೇಲೆ… ಇಲ್ಲಿ ನಾನು ನಾನೇ… ಅಲ್ಲಿ ನೀನು ನೀನೇ ಅಂದಾಗ ಡೆಲ್ಲಿಯಲ್ಲಿ ಕುಳಿತ ರಾಹುಲ್‌ಗಾಂಧಿ… ಅರೆ ವ್ಹಾ… ಕ್ಯಾ ಗನಾ ಹೈ…ಎಂದು ಹೊಗಳಿದ ಸುದ್ದಿ ಇನ್ನೂ ವೈರಲ್ ಆಗಿಲ್ಲ ಅಷ್ಟೆ.