ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕಣಕುಂಬಿ ಅರಣ್ಯದಲ್ಲಿ ಚಾರಣಕ್ಕೆ ತೆರಳಿದ್ದ ವಿದ್ಯಾರ್ಥಿಗಳ ರಕ್ಷಣೆ

02:18 PM Dec 30, 2023 IST | Samyukta Karnataka

ಖಾನಾಪುರ: ಕಣಕುಂಬಿ ಅರಣ್ಯದಲ್ಲಿ ಚಾರಣಕ್ಕೆ ತೆರಳಿ ಹಾದಿ ತಪ್ಪಿಸಿಕೊಂಡ ಒಂಭತ್ತು ವಿದ್ಯಾರ್ಥಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸತತ ೮ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿ ಕರೆತಂದ ಘಟನೆ ಶನಿವಾರ ವರದಿಯಾಗಿದೆ.

ಬೆಳಗಾವಿಯ ಪ್ರತಿಷ್ಠಿತ ಕಾಲೇಜು ಒಂದರಲ್ಲಿ ಬಿಎಸ್ಸಿ ಓದುತ್ತಿದ್ದ 9 ವಿದ್ಯಾರ್ಥಿಗಳು ಶುಕ್ರವಾರ ಮಧ್ಯಾಹ್ನ ನಾಲ್ಕು ಬೈಕ್ ಗಳಲ್ಲಿ ಗೋವಾ-ಕರ್ನಾಟಕ ಗಡಿಯ ಪಾರವಾಡ ಗ್ರಾಮದ ಹೊರವಲಯದ ದಟ್ಟ ಅರಣ್ಯ ದಲ್ಲಿರುವ ಜಾವಾಣಿ ಜಲಪಾತ ವೀಕ್ಷಿಸಲು ತೆರಳಿದ್ದರು.

ಪಾರವಾಡ ಗ್ರಾಮದಿಂದ ೩ ಕಿಮೀ ದೂರದವರೆಗೆ ಕಾಲುದಾರಿಯಲ್ಲಿ ಬೈಕ್ ತೆಗೆದುಕೊಂಡು ಹೋಗಿದ್ದ ಅವರು ಒಂದು ಮರದ ಕೆಳಗೆ ಬೈಕ್ ನಿಲ್ಲಿಸಿ ಅರಣ್ಯದೊಳಗೆ ಹೋಗಿದ್ದರು. ಅರಣ್ಯದ ಕಾಲುದಾರಿಯ ಮೂಲಕ ಜಲಪಾತಕ್ಕೆ ತೆರಳಿ ಪಾರ್ಟಿ ಮಾಡಿದ್ದ ವಿದ್ಯಾರ್ಥಿಗಳು ಸಂಜೆ ಮರಳಿ ಬೈಕ್ ನಿಲ್ಲಿಸಿದ ಸ್ಥಳಕ್ಕೆ ಮರಳುವಾಗ ಹಾದಿ ತಪ್ಪಿದ್ದರು.

ದಟ್ಟ ಅರಣ್ಯದಲ್ಲಿ ಚಾರಣಕ್ಕೆ ತೆರಳಿ ಮರಳಿ ಮುಖ್ಯ ವಾಹಿನಿಗೆ ಬರುವ ಸಂದರ್ಭದಲ್ಲಿ ತಾವು ಹಾದಿ ತಪ್ಪಿಸಿಕೊಂಡಿದ್ದು, ತಮ್ಮ ನೆರವಿಗೆ ಧಾವಿಸುವಂತೆ ಶುಕ್ರವಾರ ರಾತ್ರಿ ತಮ್ಮ ಕಾಲೇಜಿನ ಸ್ನೇಹಿತರಿಗೆ ಚಾರಣಿಗರು ಸಂದೇಶ ಕಳಿಸಿದ್ದರು. ಚಾರಣಿಗರ ಸ್ನೇಹಿತರು ಈ ಸಂಗತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ ಬಳಿಕ ಎಸಿಎಫ್ ಸಂತೋಷ ಚವಾಣ ನೇತೃತ್ವದ ತಂಡ ರಾತ್ರಿ ೧೦ ಗಂಟೆಗೆ ಪಾರವಾಡ ಅರಣ್ಯದಿಂದ ಕಾರ್ಯಾಚರಣೆ ಆರಂಭಿಸಿತು. ಜೊತೆಗೆ ವಿದ್ಯಾರ್ಥಿಗಳ ನಾಪತ್ತೆ ಸಂಗತಿಯನ್ನು ಗೋವಾದ ಅರಣ್ಯ ಇಲಾಖೆಗೂ‌ ಮುಟ್ಟಿಸಿದ್ದರಿಂದ ಅವರೂ ಸಹ ಗೋವಾ ಅರಣ್ಯದಿಂದ ಕಾರ್ಯಾಚರಣೆ ನಡೆಸಿದರು. ಶನಿವಾರ ನಸುಕಿನ ಜಾವ ಗೋವಾ ಅರಣ್ಯದ ಹದ್ದಿಯಲ್ಲಿ ಬಂಡೆ ಕಲ್ಲುಗಳ ನಡುವೆ ಸುಸ್ತಾಗಿ ಕುಳಿತಿದ್ದ ವಿದ್ಯಾರ್ಥಿಗಳು ಪತ್ತೆ ಆಗಿದ್ದು, ಅವರನ್ನು ಕಣಕುಂಬಿ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಗೋವಾ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಅಕ್ರಮ ಅರಣ್ಯ ಪ್ರವೇಶ ಆರೋಪದಡಿ ಎಲ್ಲ ೯ ವಿದ್ಯಾರ್ಥಿಗಳ ವಿರುದ್ಧ ಗೋವಾ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ. ವಿದ್ಯಾರ್ಥಿಗಳ ಪಾಲಕರು ಮತ್ತು ಕಾಲೇಜಿನ ಮುಖ್ಯಸ್ಥರಿಗೆ ವಿಷಯ ಮುಟ್ಟಿಸಿದ್ದು, ಅವರಿಂದ ಮುಚ್ಚಳಿಕೆ ಬರೆಸಿಕೊಂಡು ವಿದ್ಯಾರ್ಥಿಗಳನ್ನು ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾರ್ಯಾಚರಣೆಯಲ್ಲಿ ಕಣಕುಂಬಿ ಆರ್.ಎಫ್.ಒ ಶಿವಕುಮಾರ, ಭೀಮಗಡ ಆರ್.ಎಫ್.ಒ ರಾಕೇಶ ಅರ್ಜುನವಾಡ, ಖಾನಾಪುರ ಆರ್.ಎಫ್.ಒ ನಾಗರಾಜ ಬಾಳೆಹೊಸೂರ, ಡಿ.ಆರ್.ಎಫ್.ಒ ವಿನಾಯಕ ಪಾಟೀಲ, ಗೋವಾ ಡಿಎಫ್ಒ ಆನಂದ ಸೇರಿದಂತೆ ಉಭಯ ರಾಜ್ಯಗಳ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Next Article