ಕನ್ನಡದ ಸೇವೆ ಮಾಡುತ್ತಿರುವ ಆಟೋ ಕನ್ನಡಿಗನಿಗೆ ಅಭಿನಂದನೆ…
ಬೆಂಗಳೂರು: ಯಾವುದೇ ಭಾಷೆಯು ಕೇವಲ ಸಂವಹನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ, ಅಸ್ಮಿತೆ, ಬಾಂಧವ್ಯ, ಸಂಸ್ಕೃತಿ, ಪರಂಪರೆ, ವ್ಯಾಪಾರ ಎಲ್ಲದರಲ್ಲೂ ಭಾಷೆಯ ಪ್ರಭಾವ ಅತಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಭಾಷೆ ಬಾಂಧವ್ಯವನ್ನು ಬೆಸೆಯುವುದಕ್ಕಿರುವುದೇ ಹೊರತು ಸಂಘರ್ಷಕ್ಕಿರುವುದಲ್ಲ, ಕರ್ನಾಟಕದಲ್ಲಿ ಇತ್ತೀಚಿಗೆ ಭಾಷೆಯ ಕಾರಣಕ್ಕೆ ಆಟೋ ಚಾಲಕರೊಂದಿಗೆ ಪರಭಾಷಿಕರ ಸಂಘರ್ಷದ ಘಟನೆಗಳು ನಡೆದಿದ್ದವು.
ಇದನ್ನು ಗಮನದಲ್ಲಿರಿಸಿಕೊಂಡು ಆಟೋ ಚಾಲಕರೊಬ್ಬರು ತಂತ್ರಜ್ಞಾನವನ್ನು ಬಳಸಿ ಕನ್ನಡ ಕಲಿಕೆಯನ್ನು ಹಾಗೂ ಭಾಷಾ ಸಾಮರಸ್ಯವನ್ನು ಉತ್ತೇಜಿಸಲು ಕೈಗೊಂಡಿರುವ ಪ್ರಯತ್ನವು ಅಭಿನಂದನಾರ್ಹ. ಪರಭಾಷಿಕರಿಗೆ ಕನ್ನಡ ಕಲಿಸುವ ಈ ಪ್ರಯತ್ನವು ಸಣ್ಣದಾಗಿ ಕಂಡರೂ ಇದರ ಪರಿಣಾಮ ಆಘಾದವಾಗಿರುತ್ತದೆ. ಕನ್ನಡದ ಸೇವೆ ಮಾಡುತ್ತಿರುವ ಆಟೋ ಕನ್ನಡಿಗನಿಗೆ ಅಭಿನಂದನೆಗಳು, ಬೆಂಗಳೂರು “ಗ್ಲೋಬಲ್ ಸಿಟಿ“ ಎಂಬ ಹೆಸರು ಪಡೆದಿದ್ದರೂ ಸಹ ಇಲ್ಲಿ ನಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ.
ದೀಕ್ಷೆಯ ತೊಡು ಇಂದೇ;
ಕಂಕಣ ಕಟ್ಟಿಂದೇ!
ಕನ್ನಡ ನಾಡೊಂದೇ;
ಇನ್ನೆಂದೂ ತಾನೊಂದೆ!
ಕನ್ನಡ ಜನರೆಲ್ಲರ ಮೇಲಾಣೆ
ಕನ್ನಡ ನಾಡೊಂದಾಗದೆ ಮಾಣೆ
ತೊಡು ದೀಕ್ಷೆಯ! ಇಡು ರಕ್ಷೆಯ
ಕಂಕಣ ಕಟ್ಟಿಂದೇ!
ಕುವೆಂಪುರವರ ಈ ಕವಿವಾಣಿಯ ಪ್ರೇರಣೆಯೊಂದಿಗೆ ಎಲ್ಲಾ ಕನ್ನಡಿಗರೂ ಈ ಕನ್ನಡದ ಕಾಯಕಕ್ಕೆ ಕೈಜೋಡಿಸಿದರೆ ಉತ್ತಮ ಫಲಿತಾಂಶವನ್ನು ಕಾಣುವುದು ನಿಶ್ಚಿತ ಎಂದಿದ್ದಾರೆ.