For the best experience, open
https://m.samyuktakarnataka.in
on your mobile browser.

ಕನ್ನಡದ ಹೆಸರಲ್ಲಿ ಬ್ರಾಹ್ಮಣರ ವಿರುದ್ಧ ಹರಿಹಾಯ್ದ ಹಂಸಲೇಖ!

03:06 AM Aug 31, 2024 IST | Samyukta Karnataka
ಕನ್ನಡದ ಹೆಸರಲ್ಲಿ ಬ್ರಾಹ್ಮಣರ ವಿರುದ್ಧ ಹರಿಹಾಯ್ದ ಹಂಸಲೇಖ

ನಾಗರಿಕ ಪ್ರಪಂಚದಲ್ಲಿ ಮಾತು ಮನಸ್ಸಿನ ಕನ್ನಡಿ' ಎಂಬ ಮಾತೊಂದಿದೆ. ನಾವಾಡುವ ಮಾತು ನಮ್ಮ ಮನಸ್ಸಿನ ಭಾವನೆಯ ಪ್ರತೀಕವಾಗಿರುತ್ತದೆ. ಮನಸ್ಸಿನಲ್ಲಿ ಹುದುಗಿರುವ ಭಾವಗಳೇ ಭಾಷೆಯ ರೂಪ ತಳೆದು ಮಾತಾಗಿ ಬಿಂಬಿಸಲ್ಪಡುತ್ತದೆ. ಮಾತಿನ ಕುರಿತು ಇಷ್ಟು ಮಾತು ಈಗ ಏಕೆಂದರೆ ನಾವೆಲ್ಲ ಬಾಲ್ಯದಿಂದ ಒಂದರ್ಥದಲ್ಲಿ ಆರಾಧಿಸುತ್ತ ಬಂದಿರುವ ಅಪರಿಮಿತ ಪ್ರತಿಭಾ ಸಂಪನ್ನರು ಕನ್ನಡ ಸಿನಿಮಾ ಕ್ಷೇತ್ರದ ಸಂಗೀತ ಸಂಯೋಜನೆಯಲ್ಲಿ ಒಂದು ಅಲೆಯನ್ನೇ ಸೃಷ್ಟಿಸಿ ಅದೆಷ್ಟೋ ಅಸಂಖ್ಯಾತ ಗೀತೆಗಳನ್ನು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ನೀಡಿದ ಹಂಸಲೇಖರವರು ಇತ್ತೀಚೆಗೆ ಆಡಿದ ಒಂದು ಮಾತಿನಿಂದಾಗಿ. ಇವರದು ಬಹುಮುಖ ಪ್ರತಿಭೆ ಎಂಬುದು ನಮಗೆಲ್ಲ ಮೊದಲೇ ತಿಳಿದಿದ್ದರೂ ಇತ್ತೀಚಿನ ಕೆಲವು ವರ್ಷಗಳಿಂದ ಈ ಬಹುಮುಖಿತ್ವದ ವಿಸ್ತೃತ ಸ್ವರೂಪವಾದ ಬ್ರಾಹ್ಮಣ ವಿರೋಧಿ ಭಾವ ಅನಾವರಣವಾಗುತ್ತಿರುವುದು ಬೇಸರದ ಜೊತೆ ಸೋಜಿಗ ಕೂಡ ತರಿಸಿದೆ. ಹಂಸಲೇಖ ಹೇಳಿದ್ದೇನು? ಸಂಬಂಧವೇ ಇರದ ವಿಷಯವೊಂದನ್ನು ಸಾರ್ವಜನಿಕವಾಗಿ ಪ್ರಕಟಪಡಿಸಿ ತಮ್ಮ ಮನಸ್ಸಿನ ಮೂಲೆಯಲ್ಲಿದ್ದ ಬ್ರಾಹ್ಮಣ ದ್ವೇಷವನ್ನು ಸಾರಿಕೊಂಡಿದ್ದಕ್ಕಾಗಿ. ಸೋಜಿಗವೇಕೆಂದರೆ ಇಷ್ಟೊಂದು ಅನುಭವವಿದ್ದು, ಇಷ್ಟೊಂದು ಅದ್ಭುತ ಸಾಹಿತ್ಯವನ್ನು ನೀಡಿ, ಇಷ್ಟು ಅಪ್ರಬುದ್ಧ, ಅಸಮಂಜಸ ಹೇಳಿಕೆಯನ್ನು ನೀಡಿಬಿಟ್ಟರಲ್ಲ ಎಂದು. ಅಷ್ಟಕ್ಕೂ ಹಂಸಲೇಖರವರು ಆಡಿದ ಮಾತೇನೆಂದರೆ ``ಕನ್ನಡದ ಪ್ರಾದೇಶಿಕ ಪಕ್ಷ ಕಟ್ಟುವುದು ಅಷ್ಟು ಸುಲಭದ ಕೆಲಸವಲ್ಲ ದೇಶದ ಪ್ರತಿ ಬ್ರಾಹ್ಮಣನ ಮನೆಯಲ್ಲಿಯೂ ಭಗವದ್ಗೀತೆ ಜೊತೆಗೆ ಆರ್‌ಎಸ್‌ಎಸ್‌ನ ಚಿಂತನ ಗಂಗಾ ಪುಸ್ತಕ ಇರುತ್ತದೆ'' ಎಂದು.ಅವರ ಮನೆಯಲ್ಲಿ ಭಗವದ್ಗೀತೆ ಜೊತೆ ಆರ್‌ಎಸ್‌ಎಸ್‌ನ ಚಿಂತನ ಗಂಗಾ ಇರುತ್ತೆ'; ಕನ್ನಡದ ಹೆಸರಲ್ಲಿ ಬ್ರಾಹ್ಮಣರ ವಿರುದ್ಧ ಹರಿಹಾಯ್ದ ಹಂಸಲೇಖ!
ಬ್ರಾಹ್ಮಣರ ಬಗ್ಗೆ ಎಲ್ಲಿ ತಿಳಿದುಕೊಂಡ್ರಿ ಸನ್ಮಾನ್ಯ ಹಂಸಲೇಖರವರೆ? ಮೊದಲನೆಯದಾಗಿ ನಿಮಗೆ ಕೇಳುವ ಪ್ರಶ್ನೆ ನೀವೆಷ್ಟು ಬ್ರಾಹ್ಮಣರ ಮನೆಗೆ ಹೋಗಿ ಅಲ್ಲಿ ಈ ಪುಸ್ತಕಗಳಿರುತ್ತವೆಯೋ ಇಲ್ಲವೋ ಎಂದು ಸ್ವತಃ ಪರೀಕ್ಷಿಸಿದ್ದೀರಿ?
ಎರಡನೆಯದಾಗಿ ಭಗವದ್ಗೀತೆಯನ್ನು ಮನೆಯಲ್ಲಿಟ್ಟು ಕೊಳ್ಳುವುದು ನಿಮ್ಮ ಪ್ರಕಾರ ಅಪರಾಧವೆ? ಭಗವದ್ಗೀತೆ ಬ್ರಾಹ್ಮಣರ ಗ್ರಂಥವೇ? ಅದನ್ನು ರಚಿಸಿದವರು ಬ್ರಾಹ್ಮಣರೇ?
ಎಷ್ಟು ಬ್ರಾಹ್ಮಣರ ಮನೆಯಲ್ಲಿ ಆರ್‌ಎಸ್‌ಎಸ್‌ನ ಚಿಂತನಗಂಗಾ ಕೃತಿ ಇದ್ದುದನ್ನು ನೋಡಿದ್ದೀರಿ?
ನೀವೇ ನಂಬುವ ಕಮ್ಯುನಿಸ್ಟ್ ಪಕ್ಷದಲ್ಲಿ ಬ್ರಾಹ್ಮಣರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದು ನಿಮ್ಮ ಗಮನಕ್ಕೆ ಬಂದೇ ಇಲ್ಲವೇ?
ಕನ್ನಡ ಭಾಷೆಗೆ ಬ್ರಾಹ್ಮಣರ ಕೊಡುಗೆ ಬಗ್ಗೆ ನಿಮಗೆ ಅರಿವಿಲ್ಲವೇ? ಅಥವಾ ಜಾಣ ಕುರುಡೆ?
ಕನ್ನಡಕ್ಕೆ ಜ್ಞಾನಪೀಠ ತಂದುಕೊಟ್ಟವರಲ್ಲಿದ್ದ ಬ್ರಾಹ್ಮಣರು ನಿಮಗೆ ಕಂಡೇ ಇಲ್ಲವೇ?
ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಬ್ರಾಹ್ಮಣರ ಪಾತ್ರದ ಅರಿವಿಲ್ಲವೇ?
ಹೀಗೆ ನಿಮ್ಮ ಈ ಅಪ್ರಬುದ್ಧ ಹೇಳಿಕೆಯ ವಿರುದ್ಧ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಬಹುದು. ಸಾಹಿತಿಗಳು, ಕಲಾವಿದರು, ಸಾಧಕರಿಗೆಲ್ಲ ಜಾತಿಯ ಪರಿಮಿತಿಯೇ ಇರುವುದಿಲ್ಲ, ಇವರೆಲ್ಲ ಸಮುದಾಯ, ಜಾತಿ, ಧರ್ಮಗಳನ್ನು ಮೀರಿದವರಾಗಿರುತ್ತಾರೆ. ಜಾತಿ, ಧರ್ಮ, ಸಮುದಾಯಗಳೆಲ್ಲ ಮನುಷ್ಯನ ಸೃಷ್ಟಿ ಎಂಬ ಅರಿವು ಎಲ್ಲರಿಗೂ ಇದೆ.
ನಿಜವಾಗಿ ಜಾತಿಮುಖವಾಗಿ, ಧರ್ಮಮುಖಿಯಾಗಿ ಸಮಸ್ಯೆಗಳು ಆದಾಗ ಆ ಕುರಿತು ಚರ್ಚೆಯೋ, ವಿಮರ್ಶೆಯೋ ನಡೆದರೆ ಅದಕ್ಕೊಂದು ಅರ್ಥವಿರುತ್ತದೆ, ಹೀಗೆ ಯಾವುದೋ ಒಂದು ಪಕ್ಷದ ಸಂಘಟನೆಗೆ ಸಂಬಂಧಿಸಿದ ವೇದಿಕೆಯಲ್ಲಿ ಬ್ರಾಹ್ಮಣರ ಕುರಿತಾದ ಪೂರ್ವಾಗ್ರಹದಿಂದ ಕನ್ನಡ ಭಾಷೆಗೆ ಅಥವಾ ಕನ್ನಡತನದ ಕುರಿತು ಬ್ರಾಹ್ಮಣರ ಪ್ರೀತಿ ಅಭಿಮಾನವನ್ನು ಪ್ರಶ್ನಿಸುವ ಅಥವಾ ಕೆಣಕುವುದರ ಹಿಂದೆ ಹಂಸಲೇಖರವರಿಗೆ ಯಾವ ಹಿಡನ್ ಅಜೆಂಡಾ ಇದೆ ಎಂಬುದು ಅರ್ಥವಾಗುತ್ತಿದೆ.
ಶೋಭೆ ತರುವಂತದಲ್ಲಾ ಆದರೆ, ನಿಮ್ಮ ಅಜೆಂಡಾ ಏನೇ ಇರಲಿ ಅದಕ್ಕೆಲ್ಲ ವಿನಾಕಾರಣ ಬ್ರಾಹ್ಮಣರು ಆಹಾರವಾಗುತ್ತಾರೆ ಎಂದು ನೀವು ಭಾವಿಸಿದಲ್ಲಿ ಅದು ನಿಮ್ಮ ಮೂರ್ಖತನವಾದೀತು. ನಿಮ್ಮ ಅದೆಷ್ಟೋ ಹಾಡುಗಳನ್ನು ಆರಾಧಿಸಿದವರಲ್ಲಿ ಸಂಭ್ರಮಿಸಿದವರಲ್ಲಿ ಬ್ರಾಹ್ಮಣರು ಇದ್ದಾರಲ್ವಾ? ಹಾಗಾದರೆ ಅವರೆಲ್ಲರೂ ನಿಮ್ಮ ಸಮುದಾಯ ಯಾವುದೆಂದು ನೋಡಿದ್ದಾರಾ? ಈ ರೀತಿಯ ಯೋಚನೆ ಎಷ್ಟು ಕೆಳಹಂತದ್ದು ಅನಿಸುತ್ತದೆ ಎಂದರೆ ನಿಮ್ಮಂತಹ ಹಿರಿಯ ಸಾಧಕರಿಗೆ ಶೋಭೆ ತರುವ ಯೋಚನೆ ಇದಲ್ಲ.
ಕನ್ನಡ ಆರಾಧಿಸೋ ಬ್ರಾಹ್ಮಣರೂ ಕನ್ನಡಿಗರಲ್ಲವೇ?
ನಾವು ಇತಿಹಾಸದಲ್ಲಿ ತುಂಬ ಹಿಂದೆ ಹೋಗೋದು ಬೇಡ, ಕಳೆದ ೧೦೦-೧೫೦ ವರ್ಷಗಳ ಇತಿಹಾಸ ತಿಳಿದುಕೊಂಡರೂ ಸಾಕು ಕನ್ನಡಕ್ಕೆ ಬ್ರಾಹ್ಮಣರ ಕೊಡುಗೆ ಇದೆಯೋ ಇಲ್ಲವೋ ತಿಳಿದುಬಿಡುತ್ತದೆ. ಇನ್ಫಾಯಕ್ಟ್ ಕನ್ನಡ ಆರಾಧಿಸೋ ಬ್ರಾಹ್ಮಣರೂ ಕನ್ನಡಿಗರಲ್ಲವೇ?
ಸಿನಿಮಾ ರಂಗದಿಂದಲೇ ಗಮನಿಸೋದಾದ್ರೆ ಹಂಸಲೇಖ ಅವರೇ ತುತ್ತು ಅನ್ನ ತಿನ್ನೋಕೆ ಅಂತ ಹಾಡಿಸಿದ ಡಾ.ವಿಷ್ಣುವರ್ಧನ್, ಶಂಕರ್‌ನಾಗ್, ಅನಂತ್‌ನಾಗ್, ಶ್ರೀನಾಥ್, ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್, ಸುನೀಲ್ ಕುಮಾರ್ ದೇಸಾಯಿ, ಚಿ.ಉದಯ್ ಶಂಕರ್, ಆರ್.ಎನ್ ಜಯಗೋಪಾಲ್, ಶಿವರಾಮಣ್ಣ, ದ್ವಾರಕೀಶ್, ಕೆ. ಕಲ್ಯಾಣ್ ಇವರ ಕೊಡುಗೆ ಮರೆತುಬಿಡೋದೆ?
ಇನ್ನು ವಿಶ್ವೇಶ್ವರಯ್ಯ, ಸುಧಾಮೂರ್ತಿ, ಹರಿಜನ ಕನ್ಯಾಮಂದಿರ ಸ್ಥಾಪಿಸಿದ ಗುರುಗೋವಿಂದ ಭಟ್ಟರು, ಭೀಮಸೇನ್ ಜೋಷಿ, ಯು.ಆರ್. ಅನಂತಮೂರ್ತಿ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಶಿವರಾಮ ಕಾರಂತ, ದ.ರಾ. ಬೇಂದ್ರೆ, ವಿ.ಕೃ. ಗೋಕಾಕ್, ಗಿರೀಶ್ ಕಾರ್ನಾಡ್, ಎಸ್.ಎಲ್. ಬೈರಪ್ಪ, ಕರ್ನಾಟಕ ಏಕೀಕರಣದ ಪಿತಾಮಹ ಆಲೂರು ವೆಂಕಟರಾವ್, ಇವರನ್ನೆಲ್ಲಾ ಜಾತಿ ಮುಖದಿಂದಲೇ ನೋಡಬೇಕೆ ಹಾಗಾದರೆ? ಅಥವಾ ಇವರು ಇವರ ಜಾತೀಯ ಕಾರಣದಿಂದಾಗಿಯೇ ಇಷ್ಟೆಲ್ಲ ಸಾಧನೆ, ಸಿದ್ಧಿ, ಕೊಡುಗೆಗೆ ಕಾರಣರಾದರೆ? ಕಲೆ, ಕಲಾವಿದ, ಸಾಹಿತ್ಯ, ಸಾಹಿತಿ, ಕ್ರೀಡೆ, ಸಾಧನೆ, ಪ್ರತಿಭೆ, ಕೊಡುಗೆ ಇವು ಯಾವುದಕ್ಕೂ ಜಾತಿಯ ಚೌಕಟ್ಟಿಲ್ಲ ಎಂಬ ಅತ್ಯಂತ ಸಾಮಾನ್ಯ ಸಂಗತಿ ನಿಮ್ಮ ಅರಿವಿಗೆ ಬಾರದೆ ಹೋಯಿತೇ ಅಥವಾ ನಿಮ್ಮೊಳಗಿನ ಬ್ರಾಹ್ಮಣ ದ್ವೇಷದ ಪೂರ್ವಾಗ್ರಹ ಇವೆಲ್ಲವನ್ನು ಮರೆಸಿಬಿಟ್ಟಿತೆ ಹಂಸಲೇಖ ಅವರೇ?
ಕೆಲವೇ ದಿನಗಳ ಹಿಂದೆ ನಿಮ್ಮ ಪೂರ್ವಾಗ್ರಹ ಪೀಡಿತತ್ವಕ್ಕೆ ಜೈನರ ಭಾವನೆ ಬಲಿಯಾದರೆ ಇಂದು ಬ್ರಾಹ್ಮಣರ ಸರದಿ. ಆದರೆ ನಿಮ್ಮ ಈ ಪೂರ್ವಾಗ್ರಹದ ಹೇಳಿಕೆಗೆ ಉತ್ತರಿಸದೆ ಮೌನವಾಗಿದ್ದರೆ ನಿಮ್ಮ ಮಾತೇ ಸತ್ಯವಾಗುವುದೆಂದು ಎಲ್ಲರೂ ಒಪ್ಪಿದಂತಾಗುತ್ತದೆ, ಆ ಕಾರಣಕ್ಕೆ ಈ ಬರಹ ಅನಿವಾರ್ಯವಾಯಿತು. ಸಂಸ್ಕೃತ ಬ್ರಾಹ್ಮಣರ ಭಾಷೆ ಎಂಬ ತಪ್ಪುಗ್ರಹಿಕೆಯಿಂದ ಮೊದಲು ಹೊರಬನ್ನಿ, ಕನ್ನಡವೇ ಬ್ರಾಹ್ಮಣರ ಭಾವದ ಭಾಷೆ ಎಂಬ ಅರಿವು ಸರಿಯಾಗಿ ನಿಮ್ಮೊಳಗೆ ಮೂಡಲಿ, ನಿಮ್ಮನ್ನು ತುಂಬ ಪ್ರೀತಿಸಿದ್ದೆವು ಆದರೆ ವಿನಾಕಾರಣ ಆ ಅಭಿಮಾನ ಪ್ರೀತಿಯನ್ನು ಸ್ವಯಂಕೃತ ಅಪರಾಧದಿಂದ ನೀವೇ ಕಳೆದುಕೊಂಡುಬಿಟ್ಟಿರಿ. ಕನ್ನಡದ ಮೇಲಿನ ಬ್ರಾಹ್ಮಣರ ಪ್ರೀತಿ ಎಷ್ಟಿದೆ ಎಂದರೆ ನಿಮ್ಮೊಳಗಿನ ಬ್ರಾಹ್ಮಣ ಮೇಲಿನ ದ್ವೇಷ ಅಥವಾ ಬ್ರಾಹ್ಮಣರ ಮೇಲಿನ ಪೂರ್ವಾಗ್ರಹದ ಪ್ರೀತಿಗಿಂತ ಒಂದು ಕೈ ಹೆಚ್ಚು. ಎಂದೂ ಜಾತಿಯ ಕನ್ನಡಕದಲ್ಲಿ ನಾವು ನೋಡದ ಮಹನೀಯರನ್ನು ಇಂದು ನಿಮ್ಮ ದೆಸೆಯಿಂದಾಗಿ ಹಾಗೆ ನೋಡುವ ಅನಿವಾರ್ಯತೆ ಉಂಟಾಗಿದ್ದಂತೂ ಖೇದಕರ..!