For the best experience, open
https://m.samyuktakarnataka.in
on your mobile browser.

ಕಮಲಮ್ಮ ನೀನೆ ನಿಂತುಬಿಡಮ್ಮ…

03:00 AM Jul 23, 2024 IST | Samyukta Karnataka
ಕಮಲಮ್ಮ ನೀನೆ ನಿಂತುಬಿಡಮ್ಮ…

ಎಲ್ಲಿದ್ದೀಯಮ್ಮ ಕಮಲಮ್ಮ? ನನಗೆ ನಿಲ್ಲಲು ಆಗಲ್ಲ ನೀವೇ ನಿಂತುಬುಡಿ ಅಮ್ಮಾ ಕಮಲಮ್ಮಾ… ಎಂದು ಅಮೆರಿಕದ ಬುಡಿನ್ ಅಲಿಯಾಸ್ ಬುಡ್ಡೇಸಾಬ ಮೈಕಿನಲ್ಲಿ ಅನೌನ್ಸ್ ಮಾಡಿದಾಗ.. ಸಿಟ್ಟಿಗೆದ್ದ ಕರಿಭಾಗೀರತಿ ಭುಸುಗುಡುತ್ತ… ಈ ಬುಡ್ಯಾಗೆ ನಾವು ಕಾಣಿಸಲಿಲ್ಲವೇ? ಆ ಕಮಲಮ್ಮನಿಗೆ ಯಾಕೆ ಮಣಿ ಹಾಕಬೇಕಿತ್ತು? ಎಂದು ಪ್ರಶ್ನಿಸುತ್ತಿದ್ದಾಳೆ. ಈ ಸುದ್ದಿ ಮೇಕಪ್ ಮರೆಮ್ಮಳಿಗೂ ಗೊತ್ತಾಗಿ… ಅಯ್ಯೋ ಬುಡ್ಡೇಸಾಬನೇ… ನೀನು ಒಲ್ಲೆ ಅಂದರೆ ನಾನಿದೀನಿ ಎಂದು ಅದೆಷ್ಟು ಸಲ ಹೇಳಿದ್ದೆ. ಈಗ ಕಮಲಮ್ಮನಿಗೆ ನೀ ನಿಲ್ಲು ಅಂತಿದೀಯಲ್ಲ? ನಿನಗೆ ಹೇಗಾದರೂ ಮನಸ್ಸು ಬಂತು ಎಂದು ಮೆಸೇಜು ಕಳಿಸಿದ್ದಾಳೆ. ಜಿಲಿಬಿಲಿ ಎಲ್ಲವನಂತೂ ಆಕೆ ಹೆಸರು ಕಮಲ… ನೀನು ಸೋದಿ ಮಾಮನ ಮಾತು ಕೇಳಿರಬಹುದು ಎಂದು ನನಗೆ ಅನಿಸುತ್ತಿದೆ. ಅವಳಿಗಿಂತ ನಾವು ನಿಮಗೆ ಎಷ್ಟೊಂದು ಸಪೋರ್ಟು ಮಾಡಿದ್ದೇವೆ… ಅಷ್ಟೂ ನೆನಪಿಲ್ಲವೇ? ಎಂದು ವೈಸ್‌ಮೆಸೇಜ್ ಕಳುಹಿಸಿದಳು. ಹೀಗೆ ಅನೇಕ ಮೆಸೇಜುಗಳು ಬಂದಿರುವುದು ನೋಡಿದ ಬುಡ್ಯಾ… ಇಲ್ಲಿಲ್ಲ ನಾ ಯಾಕೆ ಒಲ್ಲೆ ಅಂದೆ ಎಂದು ನಿಮ್ಮ ಮುಂದೆ ಹೇಳಿದರೆ ನೀವೂ ಸಹ ಬುಡ್ಯಾ ಯು ಡಿಡ್ ವೆಲ್ ಜಾಬ್ ಅಂತೀರಿ. ಅದಕ್ಕೆ ಬಲವಾದ ಕಾರಣವಿದೆ. ನೀವೆಲ್ಲ ಬುದ್ದಿ ಇದ್ದವರು ಅರ್ಥ ಮಾಡಿಕೊಂಡಿದ್ದೀರಿ ಎಂದು ತಿಳಿದುಕೊಂಡಿದ್ದೆ ಎಂದು ಎಲ್ಲರಿಗೂ ರಿಪ್ಲೈ ಮಾಡಿದ್ದಾನೆ. ಆದರೂ ಇವರೆಲ್ಲ ನನ್ನ ಬಗ್ಗೆ ತಪ್ಪು ತಿಳಿದುಕೊಂಡಿದ್ದಾರೆ. ಇದು ಈಗ ಟ್ರಂಪೇಸಿಗೆ ಗೊತ್ತಾದರೆ ಅವನು ಮತ್ತೊಂದು ಕಥೆ ಕಟ್ಟುತ್ತಾನೆ. ಈಗಲೇ ಎಚ್ಚೆತ್ತುಕೊಳ್ಳುವುದು ಲೇಸು. ಇದೆಲ್ಲದಕ್ಕೂ ಪರಿಹಾರ ಸೂಚಿಸುವ ಏಕೈಕ ವ್ಯಕ್ತಿ ಅಂದರೆ ಅದು ಕಂಟ್ರಂಗಮ್ಮತ್ತಿ ಮಾತ್ರ. ಆಕೆಗೆ ಇರುವಷ್ಟು ನಾಲೇಜು… ಅನುಭವ ಮತ್ಯಾರಿಗೂ ಇರುವುದಕ್ಕೆ ಸಾಧ್ಯವಿಲ್ಲ ಎಂದು ಆಕೆಗೆ ಕರೆ ಮಾಡಿ ನಮಸ್ಕಾರ ಕಂಟ್ರಂಗಮ್ಮತ್ತಿ… ನಾನು ಅಮೆರಿಕದಿಂದ ಬೈಡನ್ ಅಲಿಯಾಸ್ ಬುಡ್ಯಾ… ಅಂದಾಗ… ಗೊತ್ತಾತು ಹೇಳಪ ಅಂದಳು. ಏನಿಲ್ಲ ನಾನು ಕಮಲಮ್ಮನಿಗೆ ನೀ ನಿಲ್ಲಮ್ಮ ಅಂದೆ ಅಷ್ಟಕ್ಕೆ ಇವರೆಲ್ಲ ಸಿಟ್ಟಿಗೆದ್ದು ಏನೇನೋ ಅನ್ನುತ್ತಿದ್ದಾರೆ ಅವರಿಗೆ ನೀನೇ ಸ್ವಲ್ಪ ಬುದ್ದಿ ಹೇಳಬೇಕು. ಇಲ್ಲದಿದ್ದರೆ ಅವರೆಲ್ಲ ಟ್ರಂಪೇಸಿ ಮುಂದೆ ಹೇಳುತ್ತಾರೆ… ಸುಮ್ಮನೇ ಯಾಕೆ ಕಿರಿಕಿರಿ ಅಂದ. ಅದಕ್ಕೆ ಕಂಟ್ರಂಗಮ್ಮತ್ತಿ ನೀನೇನೂ ಚಿಂತಿ ಮಾಡಬೇಡ. ಎಲ್ಲರನ್ನೂ ಕರೆಯಿಸಿ ನಾನು ಮಾತನಾಡುವೆ. ಟ್ರಂಪೇಸಿಗೂ ಒಂದು ಮಾತು ಹೇಳಬೇಕು ಅಂದರೆ ಆತನ ಕಿವಿಕಟ್ ಆಗಿದೆ. ಕಮಲಮ್ಮ ಏನೂ ಬೇರೆ ಅಲ್ಲ. ಆಕೆಯೂ ನಮ್ಮಾಕೆಯೇ ಎಂದು ಹೇಳುತ್ತೇನೆ ಎಂದು ಹೇಳಿದಾಗ.. ಅಷ್ಟು ಮಾಡಿ ಪುಣ್ಯ ಕಟ್ಟಿಕೋ ಕಂಟ್ರಂಗಮ್ಮತ್ತಿ ಎಂದು ಫೋನಿಟ್ಟ. ಆಗ ಕಂಟ್ರಂಗಮ್ಮತ್ತಿ ಕಮಲಮ್ಮ ಅಂತೆ ಕಮಲಮ್ಮ ಈ ಬುಡ್ಯಾ ಇದನಾಲ್ಲ ಅನ್ನುತ್ತ ಕರೆ ಕತ್ತರಿಸಿದಳು.