For the best experience, open
https://m.samyuktakarnataka.in
on your mobile browser.

ತೆಲಂಗಾಣ ಸರ್ಕಾರದ ವಿರುದ್ದ ಜನಾಕ್ರೋಶ

01:28 PM Dec 03, 2023 IST | Samyukta Karnataka
ತೆಲಂಗಾಣ ಸರ್ಕಾರದ ವಿರುದ್ದ ಜನಾಕ್ರೋಶ

ಕಲಬುರಗಿ: ತೆಲಂಗಾಣದ ಬಿಎಸ್ ಆರ್ ಸರ್ಕಾರ ನಡೆಸಿರುವ ಭ್ರಷ್ಟಾಚಾರದ ವಿರುದ್ದ ಜನರ ಆಕ್ರೋಶ ವ್ಯಕ್ತವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತ‌ನಾಡಿದ ಅವರು "ನಾನು ಖುದ್ದಾಗಿ ತೆಲಂಗಾಣಕ್ಕೆ ಭೇಟಿ ನೀಡಿದ್ದೇನೆ. 10 ವರ್ಷದ ಕೆಸಿಆರ್ ಆಡಳಿತದಲ್ಲಿ 10 ಸ್ಕ್ಯಾಮ್ ಗಳಲ್ಲಿ 10 ಲಕ್ಷ ಕೋಟಿ ಭ್ರಷ್ಟಾಚಾರ ನಡೆದಿದೆ. ಕಾಲೇಶ್ವರಂ ನೀರಾವರಿ ಯೋಜನೆಯೊಂದರಲ್ಲೇ 1.50 ಲಕ್ಷ ಕೋಟಿ ಅವ್ಯವಹಾರ ಆಗಿರುವ ಬಗ್ಗೆ ಅಲ್ಲಿನ ಜನರೇ ಮಾತ‌ನಾಡಿಕೊಳ್ಳುತ್ತಿದ್ದರು. ಇದನ್ನು ಮನಗಂಡ ಜನರು ತೆಲಂಗಾಣ ಉಳಿಯಬೇಕಾದರೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ನಮಗೆ ಆಶೀರ್ವಾದ ಮಾಡಿದ್ದಾರೆ " ಎಂದರು.

ಕರ್ನಾಟಕದಲ್ಲಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಕೂಡಾ ತೆಲಂಗಾಣದಲ್ಲಿ ಪ್ರಭಾವ ಬೀರಿವೆ ಎಂದು ಹೇಳಿದ ಖರ್ಗೆ, ಜನರ ಪರವಾದ ಅಭಿವೃದ್ದಿ ಪರವಾದ ಹಾಗೂ ಆರ್ಥಿಕ ಸ್ಥಿರತೆ ನಿರ್ಮಾಣ ಮಾಡುವ ಯೋಜನೆಗಳನ್ನು ಇಟ್ಟುಕೊಂಡೇ ನಾವು ಛತ್ತೀಸ್ ಗಡ್, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಪ್ರಣಾಳಿಕೆ ತಯಾರು ಮಾಡಿದ್ದೇವೆ. ಇದಕ್ಕೆ ಜನರು ಮನ್ನಡೆ ನೀಡಿದ್ದಾರೆ. ಆದರೆ ಬಿಜೆಪಿಯವರು ಧರ್ಮ‌ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅವರ ಒಂದೇ ಒಂದು‌ ಜನಪರ ಹಾಗೂ ಆರ್ಥಿಕ‌ ಸಬಲತೆ ಮೂಡಿಸುವ ಕಾರ್ಯಕ್ರಮಗಳು ಇಲ್ಲ ಎಂದರು.

ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಪಕ್ಷ ಹಿನ್ನೆಡೆ ಅನುಭವಿಸುತ್ತಿರುವ ಬಗ್ಗೆ ಕೇಳಿದಾಗ ಉತ್ತರಿಸಿದ ಸಚಿವರು ಅಂತ ದೊಡ್ಡ ಮಟ್ಟದ ವ್ಯತ್ಯಾಸವೇನಿಲ್ಲ ಕೆಲ ಕಡೆ ಬಿಜೆಪಿ ಮುಂದಿದೆ. ಆದರೆ ಕೊನೆಯವರೆಗೂ ಕಾಯ್ದು ನೋಡೋಣ ಎಂದರು.

ನಾಲ್ಕು ರಾಜ್ಯಗಳ ಈ ಚುನಾವಣೆ ಫಲಿತಾಂಶ ಲೋಕಸಭೆಯ ಚುನಾವಣೆಯ ಮೇಲೆ ಪರಿಣಾಮ ಬೀರದು ಎಂದ ಸಚಿವರು, ಲೋಕಸಭೆ ಚುನಾವಣೆಯಲ್ಲಿಯೂ ಕೂಡಾ ಆರ್ಥಿಕ‌ ಸ್ಥಿರತೆ ಹಾಗೂ ಜನಸಾಮಾನ್ಯರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು‌ ಚುನಾವಣೆ ಎದುರಿಸುತ್ತೇವೆ ಎಂದರು.

ಛತ್ತೀಸ್ ಗಡ್ ರಾಜ್ಯದಲ್ಲಿ ಸೀಟು ಕಡಿಮೆ ಬಂದಲ್ಲಿ ರೆಸಾರ್ಟ್ ರಾಜಕಾರಣ ಪ್ರಾರಂಭವಾಗುತ್ತದಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಅದು ಅನಿವಾರ್ಯವಾಗುತ್ತದೆ. ನಾವು ಬೇರೆ ಶಾಸಕರನ್ನು ಖರೀದಿಸುವುದಿಲ್ಲ ಆದರೆ ನಮ್ಮ ಶಾಸಕರನ್ನು ರಕ್ಷಿಸಿಕೊಳ್ಳುತ್ತೇವೆ. ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ ಹಾಗೂ ಆಪರೇಷನ್ ಕಮಲ ಪ್ರಾರಂಭ ಮಾಡಿದ್ದೆ ಬಿಜೆಪಿ. ಎಷ್ಟೇ ಸಂಖ್ಯಾಬಲ ಇದ್ದರು ಸರ್ಕಾರವನ್ನು ನಾವೇ ಮಾಡುತ್ತೇವೆ ಎಂದು ಹೇಳುತ್ತಾರಲ್ಲ ಯಾವ ಆಧಾರದ ಮೇಲೆ ಹೇಳುತ್ತಾರೆ ಎಂದು ಹರಿಹಾಯ್ದರು.

ಕಾಂಗ್ರೆಸ್ ಪಕ್ಷಕ್ಕೆ ಆಪರೇಷನ್ ಕಮಲದ ಯಾವುದೇ ಆತಂಕ ಇಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು ಬಿಜೆಪಿಯವರು ಅಧಿಕಾರಕ್ಕಾಗಿ ರಂಗೋಲಿ ಕೆಳಗೆ ನುಗ್ಗುತ್ತಾರೆ. ಹಣಬಲ ತೋಳ್ಬಲ ಬಳಸಿ ಅಧಿಕಾರ‌ ಹಿಡಿಯಲು ಪ್ರಯತ್ನಿಸುತ್ತದೆ ಎಂದು ಛಾಟಿ ಬೀಸಿದರು.