ಕಾಂಗ್ರೆಸ್ ಕುಮ್ಮಕ್ಕಿನಿಂದ ಹೆಚ್ಚಿದ ಗೂಂಡಾ ಪ್ರವೃತ್ತಿ
ಹುಬ್ಬಳ್ಳಿ: ಬೆಂಗಳೂರಿನ ಅಂಗಡಿವೊಂದರಲ್ಲಿ ಹಿಂದೂ ವ್ಯಕ್ತಿ ಹನುಮಾನ ಚಾಲೀಸಾ ಹಚ್ಚಿದ್ದರಿಂದ ಕೆಲವು ಗೂಂಡಾಗಳು ಅವನ ಮೇಲೆ ಹಲ್ಲೆ ನಡೆಸಿದ್ದು, ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ. ಇಂತಹ ಗೂಂಡಾ ಪ್ರವೃತ್ತಿ ಹೆಚ್ಚಾಗುತ್ತಿರುವುದು ಖಂಡನೀಯ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮುಸ್ಲಿಮರ ರಂಜಾನ್ ಹಬ್ಬದಲ್ಲಿ ಹಿಂದೂಗಳು ಪೂಜೆ ಮಾಡಬಾರದಾ? ಹನುಮಾನ ಚಾಲಿಸ್ ಹಾಗೂ ಭಕ್ತಿಗೀತೆ ಹಚ್ಚಬಾರದಾ? ಇದೇನು ಪಾಕಿಸ್ತಾನವಾ ಎಂದು ಪ್ರಶ್ನಿಸಿದ ಮುತಾಲಿಕ್, ಇದು ಭಾರತ. ಡಾ. ಬಿ.ಆರ್. ಅಂಬೇಡ್ಕರ್ ಅವರು ಕಾನೂನು ಬದ್ಧವಾದ ಸಂವಿಧಾನ ರಚಿಸಿದ್ದಾರೆ. ಅದನ್ನು ಎಲ್ಲರೂ ಪಾಲಿಸಬೇಕೇ ಹೊರತು, ಗೂಂಡಾಗಿರಿ ನಡೆಸುವುದಲ್ಲ ಎಂದು ಎಚ್ಚರಿಸಿದರು.
'ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ದೊಡ್ಡ ಪ್ರತಿಭಟನೆ ನಡೆಯುತ್ತಿದ್ದು, ಕೆಲವರು ಅದನ್ನು ವಿಷಯಾಂತರ ಮಾಡುತ್ತಿದ್ದಾರೆ. ಅದು ಸರಿಯಲ್ಲ. ಕಾಂಗ್ರೆಸ್ ಇರುವುದರಿಂದ ಅವರ ಆಟ ನಡೆಯುತ್ತಿದೆ. ಇಂತಹ ಮನಸ್ಥಿಯವರನ್ನು ಎದುರಿಸಲು ಹಿಂದೂ ಸಮಾಜ ಸಿದ್ಧವಾಗಿದೆ. ಮುಸ್ಲಿಮರು ತಮ್ಮ ಪಾಡಿಗೆ ಹಬ್ಬ ಆಚರಣೆ ಮಾಡಿಕೊಳ್ಳಲಿ. ನಾವೇನೂ ತೊಂದರೆ ಕೊಡುವುದಿಲ್ಲ. ಆದರೆ, ನಮ್ಮ ಆಚರಣೆಗೆ ತೊಂದರೆ ಮಾಡಿದರೆ ನಾವು ಸುಮ್ಮನಿರುವುದಿಲ್ಲ. ರಾಜ್ಯದಲ್ಲಿ ಇದು ನಿರಂತರವಾಗಿ ನಡೆಯುತ್ತಿದೆ. ಲೋಕಸಭಾ ಚುನಾವಣೆ ಬಳಿಕ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಹೇಳಿದರು.