ಕಾಂಗ್ರೆಸ್ ನಾಯಕರ ನಡೆ ಏನು ?
ಹುಬ್ಬಳ್ಳಿ: ಮೇಕೆದಾಟು ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ ಎಂಬ ಡಿಎಂಕೆ ನಾಯಕರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪ್ರತಿಕ್ರಿಯೆ ಏನು ಎಂಬುದನ್ನು ಕಾದು ನೋಡಬೇಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಎಂಕೆ ಇಂಡಿ ಮೈತ್ರಿಕೂಟದ ಭಾಗ. ಡಿಎಂಕೆ ನಿಲುವನ್ನು ಬಿಜೆಪಿ ತೀವೃವಾಗಿ ಖಂಡಿಸುತ್ತದೆ. ಆದರೆ, `ನಮ್ಮ ನೀರು, ನಮ್ಮ ಹಕ್ಕು' ಎಂದು ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ ನಾಯಕರ ನಡೆ ಏನು ಎಂದು ಪ್ರಶ್ನಿಸಿದರು. ಅಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದಕ್ಕೆ ಉತ್ತರ ನೀಡಬೇಕು ಎಂದರು.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಜೋಶಿ, ಕೇಜ್ರಿವಾಲ್ ದುರಹಂಕಾರದಿಂದ ಸಮನ್ಸ್ಗಳಿಗೆ ಉತ್ತರಿಸಿಲ್ಲ. ಹೀಗಾಗಿ ಅವರ ಬಂಧನವಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಬೆರೆಸುವ ಅಗತ್ಯವಿಲ್ಲ. ಕಾಂಗ್ರೆಸ್ನವರು ತೆರಿಗೆ ಕಟ್ಟಿಲ್ಲ, ಹೀಗಾಗಿ ಕೆಲ ಬ್ಯಾಂಕ್ ಖಾತೆಗಳು ಸೀಜ್ ಆಗಿವೆ. ಆದಾಯ ತೆರಿಗೆ ಸಂಬಂಧಿತ ವಿಷಯದಲ್ಲಿ ಕೆಂದ್ರ ಸರ್ಕಾರದ ಪಾತ್ರವಿಲ್ಲ. ಕಾಂಗ್ರೆಸ್ ಪಕ್ಷವನ್ನು ನಾವು ಶಕ್ತಿ ಹೀನಗೊಳಿಸುವ ಅಗತ್ಯವಿಲ್ಲ. ಜನರೇ ಶಕ್ತಿಹೀನಗೊಳಿಸಿದ್ದಾರೆ ಎಂದರು.