ಕುಷ್ಟಗಿ ಪುರಸಭೆ ಅಧ್ಯಕ್ಷ ಸ್ಥಾನ: ತಡೆ ನೀಡಿದ ಹೈಕೋರ್ಟ್ ಪೀಠ
ಕುಷ್ಟಗಿ: ಕುಷ್ಟಗಿ ಪುರಸಭೆ ಅಧ್ಯಕ್ಷ ಸ್ಥಾನ ಎಸ್ಟಿ ಮೀಸಲು ನಿಗದಿಪಡಿಸಿದ್ದು, ಆದರೆ ಅಧ್ಯಕ್ಷ ಸ್ಥಾನದ ಮೀಸಲಾತಿ ಪ್ರಶ್ನಿಸಿ ಪುರಸಭೆ ಸದಸ್ಯೆ ವಿಜಯಲಕ್ಷ್ಮಿ ಮಂಜುನಾಥ ಕಟ್ಟಿಮನಿ ಅವರು ತಡೆಯಾಜ್ಞೆ ಕೋರಿ ಧಾರವಾಡ ಹೈಕೋರ್ಟ್ ಸಂಚಾರಿ ಪೀಠಕ್ಕೆ ಮೊರೆ ಹೋಗಿದ್ದು ಈ ಹಿನ್ನೆಲೆಯಲ್ಲಿ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರ ಪರಿಣಾಮವಾಗಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮುಂದೂಡಬಹುದು.
ರಾಜ್ಯ ಸರ್ಕಾರವು ಪಟ್ಟಣದ ಪುರಸಭೆಗೆ ೨ನೇ ಅವಧಿಗೆ ಅಧ್ಯಕ್ಷ ಸ್ಥಾನ ಎಸ್.ಟಿ ಹಾಗೂ ಉಪಾಧ್ಯಕ್ಷ ಸಾಮಾನ್ಯ (ಮಹಿಳೆ)ಗೆ ಮೀಸಲು ಪ್ರಕಟಸಿದೆ. ಹೀಗಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆಯ ಚುನಾವಣೆ ಆ.೨೦ ರಂದು ನಿಗದಿಯಾಗಿತ್ತು. ಕಳೆದ ೫ ವರ್ಷದ ಹಿಂದೆ ಪುರಸಭೆ ಎಸ್.ಟಿ.ಮೀಸಲಾತಿ ಅನ್ವಯ ಅಧ್ಯಕ್ಷರಾಗಿ ಮಂಜುಳಾ ಪರಶುರಾಮ ನಾಗರಾಳ ಅಧಿಕಾರ ಅನುಭವಿಸಿದ್ದಾರೆ. ಆದರೆ ಸರಕಾರ ಮತ್ತೊಮ್ಮೆ ೧೦ ವರ್ಷದಲ್ಲಿ ೨ಬಾರಿ ಮೀಸಲಾತಿ ಜಾರಿ ಮಾಡಿರುವದರಿಂದ ಈ ಹಿಂದೆ ೧೯೮೫ ರಲ್ಲಿ ಕುಷ್ಟಗಿ ಪಟ್ಟಣದಲ್ಲಿ ಮಂಡಲ ಪಂಚಾಯತಿಯಿಂದ ೨೦೦೮ ರಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಿ ಅಲ್ಲಿಂದ ಇಲ್ಲಿಯವರೆಗೂ ಎಸ್.ಸಿ.ಮಹಿಳಾ ಅಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದು ಈ ನೆಲೆಯಲ್ಲಿ ತಡೆಯಾಜ್ಞೆ ದೊರೆತಿದೆ.