For the best experience, open
https://m.samyuktakarnataka.in
on your mobile browser.

ಕೇಜ್ರೀ ಸುತ್ತ ಇಡಿ ಬಲೆ

02:15 AM Feb 07, 2024 IST | Samyukta Karnataka
ಕೇಜ್ರೀ ಸುತ್ತ ಇಡಿ ಬಲೆ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್, ರಾಜ್ಯಸಭಾ ಸದಸ್ಯ ಎನ್.ಡಿ.ಗುಪ್ತಾ ನಿವಾಸ ಸೇರಿದಂತೆ ಸುಮಾರು ೧೦ ಸ್ಥಳಗಳಲ್ಲಿ ಶೋಧ ನಡೆಸಿತು. ಈ ಸಂದರ್ಭದಲ್ಲಿ ಮಹತ್ವದ ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗಿದೆ. ದೆಹಲಿ ಜಲಬೋರ್ಡ್(ಡಿಜೆಬಿ) ಸದಸ್ಯ ಶಲಭ್ ಕುಮಾರ್ ಅವರ ನಿವಾಸವನ್ನೂ ಶೋಧಿಸಲಾಗಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ ಜಲಬೋರ್ಡ್ನ ಮುಖ್ಯ ಇಂಜಿನಿಯರ್ ಆಗಿದ್ದ ಜಗದೀಶ್ ಕುಮಾರ್ ಆರೋರಾ ಅವರನ್ನು ಬಂಧಿಸಿದ ನಂತರ, ಮುಂದಿನ ತನಿಖೆಯ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಅಬಕಾರಿ ನೀತಿ ಅಕ್ರಮ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರಿಗೆ ೫ ಬಾರಿ ಸಮನ್ಸ್ ನೀಡಿದ್ದರೂ, ಅವರು ವಿಚಾರಣೆಗೆ ಹಾಜರಾಗಿಲ್ಲ.
ಇಡಿ ಸಮನ್ಸ್ ಅನ್ನು ಪಾಲಿಸುವಂತೆ ನಿರ್ದೇಶನ ಕೋರಿ ಕುರಿತು ಇಡಿ ಈಗಾಗಲೇ ವಿಶೇಷ ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಅದರ ವಿಚಾರಣೆ ಬುಧವಾರ ನಡೆಯಲಿದೆ. ಅದಕ್ಕೆ ಮುನ್ನಾದಿನವಾದ ಮಂಗಳವಾರ ಭಾರಿ ಕಾರ್ಯಾಚರಣೆ ನಡೆಸಿದೆ.
ಏನಿದು ಪ್ರಕರಣ?
ದೆಹಲಿ ಜಲಬೋರ್ಡ್ ಮುಖ್ಯ ಇಂಜಿನಿಯರ್ ಆಗಿದ್ದ ಆರೋರಾ, ಎನ್‌ಕೆಜಿ ಇನ್‌ಫ್ರಾಸ್ಟ್ರಕ್ಷರ್ ಎನ್ನುವ ಕಂಪನಿಗೆ ೩೮.೦೨ ಕೋಟಿ ರೂ. ಮೊತ್ತದ ಗುತ್ತಿಗೆಯನ್ನು ನೀಡುವಾಗ ಲಂಚ ಪಡೆದಿದ್ದಾರೆ ಎಂದು ಸಿಬಿಐ ಎಫ್‌ಐಆರ್ ದಾಖಲಿಸಿದೆ. ಆ ಪ್ರಕರಣದ ಅಕ್ರಮ ಹಣ ವರ್ಗಾವಣೆಯ ತನಿಖೆಯನ್ನು ಇಡಿ ಕೈಗೆತ್ತಿಕೊಂಡಿದೆ. ಎನ್‌ಕೆಜಿ ಇನ್‌ಫ್ರಾಸ್ಟ್ರಕ್ಷರ್‌ಗೆ ಬಿಡ್ ಮಾಡಲು ಅರ್ಹತೆ ಇಲ್ಲದಿದ್ದರೂ, ನಕಲಿ ದಾಖಲೆಗಳನ್ನು ಸಲ್ಲಿಸಿ ಬಿಡ್ ಮಾಡಿದೆ ಎನ್ನುವ ಆರೋಪವಿದೆ.
ಮೌನವಾಗಿಸುವ ಯತ್ನ
ದೆಹಲಿಯಲ್ಲಿ ಆಪ್ ನಾಯಕರ ಮನೆ ಮೇಲೆ ಇಡಿ ನಡೆಸಿದ ದಾಳಿ, ತಮ್ಮನ್ನು ಮೌನವಾಗಿಸುವ ಪ್ರಯತ್ನವಾಗಿದೆ ಎಂದು ಹಿರಿಯ ನಾಯಕಿ ಅತಿಶಿ ಹೇಳಿದ್ದಾರೆ. ಇಡಿ ಬಗ್ಗೆ ಸ್ಫೋಟಕ ಮಾಹಿತಿಯನ್ನು ಬಹಿರಂಗಗೊಳಿಸುವುದಾಗಿ ಅತಿಶಿ ಸೋಮವಾರವಷ್ಟೆ ಹೇಳಿದ್ದರು. ಅದರ ಮರುದಿನವೇ ಇಡಿ ದಾಳಿ ನಡೆಸಿದೆ. ಇಂಥವಕ್ಕೆಲ್ಲ ಆಪ್ ಬೆದರುವುದಿಲ್ಲ ಅತಿಶಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.