ಕೈಗಾರಿಕಾ ಸ್ಮಾರ್ಟ್ ಸಿಟಿ : ಕರ್ನಾಟಕದ ಒಂದು ನಗರವೂ ಸ್ಥಾನ ಪಡೆದುಕೊಂಡಿಲ್ಲ
ಭಾರತದ ಕೈಗಾರಿಕಾ ಭೂಪಟದಲ್ಲಿ ಕರ್ನಾಟಕವೂ ಇರುವುದನ್ನು ಕೇಂದ್ರ ಬಿಜೆಪಿ ಸರ್ಕಾರ ಮರೆತಂತಿದೆ!
ಬೆಂಗಳೂರು: 12 ಹೊಸ ಕೈಗಾರಿಕಾ ಸ್ಮಾರ್ಟ್ ಸಿಟಿ ಸ್ಥಾಪನೆಯಲ್ಲಿ ಗುರುತಿಸಲಾದ 12 ನಗರಗಳಲ್ಲಿ ಕರ್ನಾಟಕದ ಒಂದು ನಗರವೂ ಸ್ಥಾನವನ್ನು ಪಡೆದುಕೊಂಡಿಲ್ಲ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯಡಿ, ಭಾರತದ 10 ರಾಜ್ಯಗಳಲ್ಲಿ 28,602 ಕೋಟಿ ರೂ. ವೆಚ್ಚದಲ್ಲಿ 12 ಹೊಸ ಕೈಗಾರಿಕಾ ಸ್ಮಾರ್ಟ್ ಸಿಟಿಗಳನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಆದರೆ ಗುರುತಿಸಲಾದ 12 ನಗರಗಳಲ್ಲಿ ಕರ್ನಾಟಕದ ಒಂದು ನಗರವೂ ಸ್ಥಾನವನ್ನು ಪಡೆದುಕೊಂಡಿಲ್ಲ. ಭಾರತದ ಕೈಗಾರಿಕಾ ಭೂಪಟದಲ್ಲಿ ಕರ್ನಾಟಕವೂ ಇರುವುದನ್ನು ಕೇಂದ್ರ ಬಿಜೆಪಿ ಸರ್ಕಾರ ಮರೆತಂತಿದೆ! ತೆರಿಗೆ, ಬಜೆಟ್, ಅಭಿವೃದ್ಧಿ ಯೋಜನೆಗಳ ಹಂಚಿಕೆಗಳ ವಿಚಾರಗಳಲ್ಲಿ ಕರ್ನಾಟಕಕ್ಕೆ ಮೋಸವನ್ನು ಮಾಡುತ್ತಲೇ ಬಂದಿರುವ ಕೇಂದ್ರ ಸರ್ಕಾರ, ಇಲ್ಲೂ ಕನ್ನಡಿಗರಿಗೆ ಅನ್ಯಾಯವನ್ನು ಮಾಡಿದೆ. ನಮ್ಮ ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಹೇರಳವಾದ ಸಂಪನ್ಮೂಲಗಳು, ಪೂರಕವಾದ ವಾತಾವರಣವೂ ಇದೆ. ಅದನ್ನು ಕಡೆಗಣಿಸಿ, ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೇಂದ್ರದ ಈ ಪ್ರವೃತ್ತಿಗಳಿಗೆ ಕೊನೆ ಯಾವಾಗ!? ಎಂದಿದ್ದಾರೆ.