For the best experience, open
https://m.samyuktakarnataka.in
on your mobile browser.

ಕೋಟಿ ವಿಷಯಾಂತರ ಮಾಡುವ ಉದ್ದೇಶದಿಂದ ಭದ್ರತಾ ಲೋಪದ ಟೂಲ್ ಕಿಟ್

06:46 PM Dec 16, 2023 IST | Samyukta Karnataka
ಕೋಟಿ ವಿಷಯಾಂತರ ಮಾಡುವ ಉದ್ದೇಶದಿಂದ ಭದ್ರತಾ ಲೋಪದ ಟೂಲ್ ಕಿಟ್

ಚಿಕ್ಕಮಗಳೂರು: ಮೊನ್ನೆ ಸಂಸತ್‌ನಲ್ಲಿ ನಡೆದಿರುವ ಭದ್ರತಾ ಲೋಪ ಪ್ರಕರಣದ ಹಿಂದೆ ಕಾಂಗ್ರೆಸ್ ಪಕ್ಷದ ಟೂಲ್ ಕಿಟ್ ರಾಜಕಾರಣ ಇದ್ದಂತೆ ಕಾಣುತ್ತದೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಅನುಮಾನ ವ್ಯಕ್ತಪಡಿಸಿದರು.
ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಅದರ ಹಿನ್ನೆಲೆ ಅರ್ಥವಾಗುವ ಮುಂಚೆಯೇ ಯೂಥ್ ಕಾಂಗ್ರೆಸ್ ಕಾರ್ಯಕರ್ತರು ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಾರೆ. ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಪ್ರಶ್ನೆ ಮಾಡುತ್ತಾರೆ. ತನಿಖೆ ಮಾಡಿ ಎಂದು ಒತ್ತಾಯಿಸುವುದು ಸರಿ ಆದರೆ. ಅದನ್ನೂ ಮೀರಿ ಸಂಸದ ಪ್ರತಾಪ್ ಸಿಂಹ ಅವರನ್ನು ಗುರಿ ಮಾಡಿದರು ಎಂದರು.
ಇತ್ತೀಚೆಗೆ ಕಾಂಗ್ರೆಸ್ ಸಂಸದನೊಬ್ಬನ ಮನೆಯಲ್ಲಿ ಐಟಿ ದಾಳಿ ವೇಳೆ ದಾಖಲೆ ಪ್ರಮಾಣದ ಹಣ ಪತ್ತೆಯಾಗಿದೆ. ೫೦೦ ಕೋಟಿ ರೂ.ಗೂ ಹೆಚ್ಚಿನ ಅಕ್ರಮ ಆಸ್ತಿ, ೩೫೦ ಕೋಟಿ ರೂ.ಗಳಿಗಿಂತ ಹೆಚ್ಚಿನ ನಗದು ಪತ್ತೆಯಾಗಿತ್ತು. ಇದೇ ವೇಳೆ ೫ ರಾಜ್ಯಗಳ ಚುನಾವಣೆ ಪೈಕಿ ೩ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತು. ಇವರೆಡರ ವಿಷಯಾಂತರ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಸಂಸತ್‌ನ ಭದ್ರತಾ ಲೋಪದ ಹೆಸರಲ್ಲಿ ಟೂಲ್ ಕಿಟ್ ರಾಜಕಾರಣ ಮಾಡಿರುವ ಅನುಮಾನ ಕಾಡುತ್ತಿದೆ ಎಂದರು.
ಇದರ ಹಿಂದೆ ಕಾಣದ ಕೈಗಳು ಎಷ್ಟಿದೆಯೋ ಕಾಂಗ್ರೆಸ್‌ನ ಕೈಗಳು ಕೆಲಸ ಮಾಡಿರುವ ಸಾಧ್ಯತೆ ಇದೆ. ಇಷ್ಟಾದರೂ ಭದ್ರತಾ ಲೋಪವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಕೇವಲ ರಾಜಕೀಯ ಆರೋಪಕ್ಕೆ ಸೀಮಿತವಾಗಿ ನೋಡಬೇಕೆಂದು ನಾವು ಬಯಸುವುದಿಲ್ಲ. ಗಂಭೀರ ತನಿಖೆ ಈಗಾಲೇ ಆಗುತ್ತಿದೆ. ನಂತರ ನಿಜಾಂಶ ಹೊರಕ್ಕೆ ಬರಲಿದೆ ಎಂದರು.
ಸಂಸತ್ ಮೇಲೆ ದಾಳಿ ನಡೆಸಿದ ಉಗ್ರ ಅಫ್ಜಲ್ ಗುರುವನ್ನು ಗಲ್ಲಿಗೇರಿಸಬೇಕೆಂದು ತೀರ್ಪು ಬಂದಾಗ ಕಾಂಗ್ರೆಸ್ ಅವನನ್ನು ರಕ್ಷಿಸುವ ಪ್ರಯತ್ನ ಮಾಡಿತ್ತು. ಈ ಕಾರಣಕ್ಕೆ ಪ್ರತಾಪ್ ಸಿಂಹ ಅವರನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಎಂದರು.
ಊರಿನವರು ಎಂದು ಹೇಳಿಕೊಂಡು ಬಂದಾಗ ಪಾಸ್ ಕೊಡುವುದು ಸಹಜ. ಹಾಗೆಂದು ಭದ್ರತಾ ಲೋಪವಾಗಿರುವುದನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲ. ವ್ಯಕ್ತಿಯನ್ನು ನೋಡಿದ ಕೂಡಲೇ ಆತ ಒಳ್ಳೆಯವನೋ, ಕೆಟ್ಟವನೋ ಎಂದು ನಿರ್ಧರಿಸುವ ಐ ಸ್ಕ್ಯಾನರ್ ಯಾರಿಗೂ ಇರುವುದಿಲ್ಲ. ಘೊಷಿತ ಆರೋಪಿಗೆ ಶಿಫಾರಸು ಮಾಡಿದ್ದರೆ ತಪ್ಪಾಗುತ್ತದೆ ಎಂದರು.
ಕಾಂಗ್ರೆಸ್ ಮತ್ತು ಹಲವು ವೈಚಾರಿಕ ವಿರೋಧಿಗಳು ಟೂಲ್ ಕಿಟ್ ರಾಜಕಾರಣ ಮಾಡಿರುವುದು ಈಗಾಗಲೇ ಅನುಭವವಕ್ಕೆ ಬಂದಿದೆ. ಹಿಂದೆ ಅಸಹಿಷ್ಣುತೆ ಹೆಸರಲ್ಲಿ ಪ್ರಧಾನಿ ಅವರನ್ನು ಬಾಯಿಗೆ ಬಂದತೆ ನಿಂದಿಸಿದ್ದರು. ರೋಹಿತ್ ವೇಮುಲ ಎಂಬ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣವನ್ನು ನರೇಂದ್ರ ಮೋದಿ ಅವರ ತಲೆಗೆ ಕಟ್ಟಿ ದಲಿತ ವಿರೋದಿ ಎನ್ನುವ ಅಭಿಪ್ರಾಯ ಮೂಡಿಸುವ ಪ್ರಯತ್ನ ನಡೆಯಿತು. ಹಾಗೇ ಭೀಮ್ ಕೋರೆಗಾಂವ್ ಹೆಸರಲ್ಲೂ ನಡೆಯಿತು. ಹೀಗೆ ವ್ಯವಸ್ಥಿತವಾಗಿ ಬಿಜೆಪಿ, ನರೇಂದ್ರ ಮೋದಿ ವಿರುದ್ಧ ಕೆಲಸ ಮಾಡುತ್ತಿದೆ ಎಂದರು.
ಕಾಂಗ್ರೆಸ್ ಸಂಸದ ದೀರಜ್ ಸಾಹು ಬಳಿ ನೂರಾರು ಕೋಟಿ ಅಕ್ರಮ ಹಣ ಪತ್ತೆಯಾದ ಬಗ್ಗೆ ರಾಹುಲ್ ಗಾಂಧಿ ಚಕಾರ ಎತ್ತಿಲ್ಲ. ಇಂತಹ ನೂರಾರು ಜನರು ಕಾಂಗ್ರೆಸ್‌ನಲ್ಲಿರುವುದಕ್ಕೆ ಐಟಿ, ಇಡಿಯನ್ನು ಕಂಡರೆ ಅವರಿಗೆ ಭಯ ಎಂದು ವ್ಯಂಗ್ಯವಾಡಿದರು.