ಗಾಯತ್ರಿ ಸಂಗಮ ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞ
ಮಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಹಾಗೂ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಜಂಟಿಯಾಗಿ ಮಂಗಳೂರಿನ ಚಿತ್ರಾಪುರ ಮಠದ ಸಹಕಾರದಲ್ಲಿ ಗಾಯತ್ರಿ ಸಂಗಮ ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞ ನೆರವೇರಿತು.
ಜಪಯಜ್ಞದ ಸಂಚಾಲಕರಾದ ಕಟೀಲು ಕ್ಷೇತ್ರದ ಹರಿನಾರಾಯಣದಾಸ ಆಸ್ರಣ್ಣ ಅವರ ಮುಂದಾಳತ್ವದಲ್ಲಿ ಕುಡುಪು ಕೃಷ್ಣರಾಜ ತಂತ್ರಿಗಳ ಪೌರೋಹಿತ್ಯದಲ್ಲಿ ಜಪಯಜ್ಞವು ಬೆಳಗ್ಗೆ ೬.೩೦ ಆರಂಭಗೊಂಡು ೧೦.೩೦ ಮಹಾಪೂಜೆ ನೆರವೇರಿತು. ಉಡುಪಿ, ದ.ಕ ಜಿಲ್ಲೆಯಿಂದ ಸಾವಿರಾರು ಮಂದಿ ವಿವಿಧ ಉಪ ಪಂಗಡಗಳಿಗೆ ಸೇರಿದ ಬ್ರಾಹ್ಮಣ ಸಮುದಾಯವು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿಯ ಒಂದೇ ಸೂರಿನಡಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದರು. ಆಗಮಿಸಿದ ಸರ್ವರಿಗೂ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಪ್ರಸಾದ ವಿತರಿಸಿ ಆಶೀರ್ವದಿಸಿದರು.
ಶನಿವಾರ ಕಾರ್ಯಕ್ರಮದ ಅಂಗವಾಗಿ ಮಹಿಳಾ ಘಟಕದ ನೇತೃತ್ವದಲ್ಲಿ ಸಂಸಾರ, ಸಂಸ್ಕಾರ, ಚಿಂತನೆ, ಸಾಕ್ಷಾತ್ಕಾರ ಕುರಿತ ಚಿಂತನ ಮಂಥನ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ ಅಂಗವಾಗಿ ಅಷ್ಟವಧಾನ ಕಾರ್ಯಕ್ರಮ, ವಿದುಷಿ ಪ್ರತಿಮಾ ಶ್ರೀಧರ್ ನೇತೃತ್ವದಲ್ಲಿ ನೃತ್ಯಾಮೃತ, ಶರಣ್ಯ, ಸುಮೇಧ ಅವರಿಂದ ಗಾನಾಮೃತ ಕಾರ್ಯಕ್ರಮ ನಡೆಯಿತು.
ಅಚ್ಚಕಟ್ಟು ನಿರ್ವಹಣೆ: ಬ್ರಾಹ್ಮಣ ಸಮಾಜದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ವಿವಿಧ ಬ್ರಾಹ್ಮಣ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿ, ಧಾರ್ಮಿಕ ಕಾರ್ಯಕ್ರಮ ಹಾಗೂ ಅನ್ನ ಪ್ರಸಾದ ವಿತರಣೆಯಲ್ಲಿ ಲೋಪವಾಗದಂತೆ ಅಚ್ಚುಕಟ್ಟಾಗಿ ನಿರ್ವಹಿಸಿ ನೆರವಾದರು. ಜಿಲ್ಲೆಯ ಎಂಟು ತಾಲೂಕುಗಳ ಹಾಗೂ ಉಡುಪಿ, ಕಾಸರಗೋಡು ಜಿಲ್ಲೆಯಿಂದ ಸಂಘದ ಸದಸ್ಯರು ಆಗಮಿಸಿದ್ದರು.