ಗೇಟ್ ತಯಾರಿಸಲು ಮುಂಬೈ ಮೂಲದ ಕಂಪನಿಗೆ ಆದೇಶ: ಕಾಡಾ ಅಧ್ಯಕ್ಷ ದೋಟಿಹಾಳ
ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿದ್ದು, ಈಗಾಗಲೇ ಮುಂಬೈ ಮೂಲದ ಕಂಪನಿಯಿಂದ ಗೇಟ್ ತಯಾರಿಸಲು ಆದೇಶ ಮಾಡಲಾಗಿದೆ ಎಂದು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಸನ್ ಸಾಬ್ ದೋಟಿಹಾಳ ಹೇಳಿದರು.
ತಾಲ್ಲೂಕಿನ ಮುನಿರಾಬಾದ್ ಗ್ರಾಮದಲ್ಲಿ ಭಾನುವಾರ ತುಂಗಭದ್ರಾ ಜಲಾಶಯದ ೧೯ನೇ ಕ್ರಸ್ಟ್ ಗೇಟ್ ಪರಿಶೀಲಿಸಿ ಮಾತನಾಡಿದ ಅವರು, ನಾಲ್ಕು ದಿನದಲ್ಲಿ ಗೇಟ್ ಸಿದ್ಧವಾಗಲಿದೆ. ಮುಂಬೈ ಮೂಲದ ಕಂಪನಿಗೆ ಗೇಟ್ ಮಾಡಲು ಆದೇಶ ನೀಡಲಾಗಿದೆ. ಆದಷ್ಟು ಬೇಗನೆ ಹೊಸ ಗೇಟ್ ಕೂರಿಸುವ ಕೆಲಸ ಮಾಡಲಾಗುತ್ತದೆ. ಹೈದರಾಬಾದ್ ಸೇರಿದಂತೆ ಅನೇಕ ಕಡೆಯಿಂದ ತಜ್ಞರು ಕೂಡಾ ಬರುತ್ತಿದ್ದಾರೆ. ಘಟನೆಗೆ ಕಾರಣವೇನು?. ಯಾರ ತಪ್ಪಿನಿಂದ ಆಗಿದೆ ಎನ್ನುವುದನ್ನು ಅನಂತರ ತನಿಖೆ ಮಾಡಿಸುತ್ತೇವೆ. ಸದ್ಯ ನೀರು ಖಾಲಿಯಾಗದಂತೆ ಗೇಟ್ ಕೂರಿಸುವ ಕೆಲಸವನ್ನು ಆರಂಭಿಸಲಾಗುತ್ತಿದೆ. ಒಂದನೇ ಬೆಳೆಗೆ ಬೇಕಾದ ನೀರನ್ನು ಕೊಡಲಾಗುವುದು. ಮುಂದಿನ ದಿನದಲ್ಲಿ ಮಲೆನಾಡಿನಲ್ಲಿ ಮಳೆಯಾಗುವ ಸೂಚನೆ ಇದೆ. ಹೀಗಾಗಿ ಡ್ಯಾಂಗೆ ನೀರು ಹರಿದು ಬರುವ ವಿಶ್ವಾಸವಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜನಾರ್ಧನ ಹುಲಿಗಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಯಂಕಪ್ಪ ಹೊಸಳ್ಳಿ ಇದ್ದರು.