ಗ್ಯಾರಂಟಿ ನಿಲ್ಲಲ್ಲ
ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಯಾವುದು ನಿಲ್ಲುವುದಿಲ್ಲ, ಸರ್ಕಾರ ಇರುವರಗೆ ಗ್ಯಾರಂಟಿಗಳು ಇರುತ್ತವೆ. ಅದರಲ್ಲಿ ಯಾವುದೂ ಅನುಮಾನ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಹೊಸ ಕ್ಯಾನ್ಸರ್ ಆಸ್ಪತ್ರೆಗೆ ಜಾಗ ಹುಡುಕಲಾಗುತ್ತಿದೆ, ೩೦ ಎಕರೆ ಜಾಗ ಸಿಕ್ಕಿದ ತಕ್ಷಣ ನಿರ್ಮಾಣ ಮಾಡಲು ಮುಂದಾಗುತ್ತೇವೆ ಎಂದರು.
ಬೆಳಗಾವಿ ಮಲ್ಟಿ ಹಾಸ್ಪಿಟಲ್ ಉದ್ಘಾಟನೆ ಶೀಘ್ರದಲ್ಲಿ ಆಗಲಿದೆ. ಸಿಬ್ಬಂದಿಗಳ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು. ನಂದಗಡದಲ್ಲಿನ ಸಂಗೊಳ್ಳಿ ರಾಯಣ್ಣ ಸಮಾಧಿ ಅಭಿವೃದ್ದಿ ಮಾಡಲು ಕಮೀಟಿ ಇದೆ ಅವರು ಮಾಡುತ್ತಾರೆ ಎಂದು ಉತ್ತರಿಸಿದ ಅವರು, ಖಾನಾಪೂರದಲ್ಲಿ ಮಲ್ಟಿ ಹಾಸ್ಪಿಟಲ್ ಉದ್ಘಾಟನೆ ಕೂಡ ನೆರವೇರುತ್ತದೆ ಎಂದರು.
ಬೆಳಗಾವಿ ಉತ್ತರ ತಾಲೂಕು ರಚನೆ ಮಾಡುವುದು ನನ್ನ ಕೈಯಲ್ಲಿ ಇಲ್ಲ. ಸರ್ಕಾರ ನಿರ್ಣಯ ಮಾಡಬೇಕು ಎಂದು ಸಚಿವರು ಹೇಳಿದರು. ರಾಜ್ಯದ ಎಲ್ಲಾ ಇಲಾಖೆಗಳಿಗೆ ಅನುದಾನ ಹಂಚಿಕೆಯಾಗಿದೆ. ಶಿಕ್ಷಣ, ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಾಲ್ಕು ವರ್ಷ ಇನ್ನೂ ನಮ್ಮ ಸರ್ಕಾರ ಇರುತ್ತದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ವಿಭಜನೆ ಆಗುತ್ತದೆ. ಆದರೆ ಸ್ವಲ್ಪ ಕಾಯಬೇಕು, ನಾವೂ ಕೂಡ ಒತ್ತಡ ಹಾಕುತ್ತೇವೆ ಎಂದು ಸಚಿವರು ಭರವಸೆ ನೀಡಿದರು.