ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಛಲವಾದಿ ಬಾಯಲ್ಲಿ ಭೂತೋಪದೇಶ

04:26 AM Aug 31, 2024 IST | Samyukta Karnataka

ಸರ್ಕಾರದ ನೀತಿ ನಿಲುವುಗಳಲ್ಲಿನ ಲೋಪ ದೋಷಗಳ ಗುರುತಿಸಿ ಟೀಕೆ ಟಿಪ್ಪಣಿ ಮಾಡುವ ಮೂಲಕ ಜನಾಭಿಪ್ರಾಯವನ್ನು ರೂಪಿಸುವುದು ಶಾಸನಸಭೆ ಪ್ರತಿಪಕ್ಷದ ನಾಯಕರ ಪ್ರಧಾನ ಜವಾಬ್ದಾರಿಯೂ ಹೌದು, ಜೊತೆಗೆ ಕರ್ತವ್ಯವೂ ಹೌದು: ಇದೊಂದು ಪ್ರಶ್ನಾತೀತ ಪರಮಾಧಿಕಾರ ಎಂಬುದರ ಬಗ್ಗೆ ಎರಡು ಮಾತಿಲ್ಲ-ಆದರೆ ಇಂತಹ ಪರಮಾಧಿಕಾರ ಚಲಾಯಿಸುವವರ ಕೈಗಳು ಮೊದಲು ಪರಿಶುದ್ಧವಾಗಿರಬೇಕು ಎಂಬುದು ಸಾರ್ವಜನಿಕರ ನಿರೀಕ್ಷೆ.
ಆದರೆ ಇತ್ತೀಚಿನ ದಿನಮಾನಗಳಲ್ಲಿ ಪರಿಶುದ್ಧ ಕೈಗಳ ಬದಲಿಗೆ ಮಲಿನಗೊಂಡಿರುವ ಕೈಗಳ ಹೊತ್ತಿ ರುವ ಪ್ರತಿಪಕ್ಷದ ನಾಯಕರು ಸರ್ಕಾರದ ನೀತಿ ನಿಲುವುಗಳನ್ನು ಪ್ರಶ್ನಿಸುವ ಆತುರದಲ್ಲಿ ಹಲವಾರು ಸಂಘ ಸಂಸ್ಥೆಗಳ ಮೇಲೆ ದೋಷಾರೋಪ ಹೊರಿಸುವ ಚಟ ರೂಢಿಸಿಕೊಳ್ಳುತ್ತಿರುವುದು ಪರಿಸ್ಥಿತಿಯ ಕ್ರೂರ ವಿಡಂಬನೆ.
ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಛಲ ವಾದಿ ನಾರಾಯಣ ಸ್ವಾಮಿಯವರು, ತಮ್ಮ ಸ್ಥಾನಬಲವನ್ನು ಚಲಾಯಿಸುವ ರೀತಿಯಲ್ಲಿ ಪತ್ರಿಕಾ ಗೋಷ್ಠಿಯ ಮೂಲಕ ಸರ್ಕಾರ ಸಾರ್ವಜನಿಕ ಉದ್ದೇಶ ಹೊತ್ತಿರುವ ಟ್ರಸ್ಟ್ಗಳು ಹಾಗೂ ಸಂಘ ಸಂಸ್ಥೆಗಳಿಗೆ ಸರ್ಕಾರ ಜಮೀನು ಮಂಜೂರು ಮಾಡಿರುವ ವಿಚಾರವನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡದೇ ಬೀಸು ಮಾತುಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿ ರುವುದು ಸಾರ್ವಜನಿಕ ವಲಯ ದಲ್ಲಿ ನಗೆಪಾಟಲಿಗೆ ಗ್ರಾಸ. ಏಕೆಂದರೆ ಸರ್ಕಾರ ಜಮೀನು ಮಂಜೂರು ಮಾಡುವ ಮೊದಲು ನಿಯಮಾವಳಿಯ ಅನುಸಾರ ನಾನಾ ರೀತಿಯ ಪ್ರಕ್ರಿಯೆಗೆ ಜಮೀನು ಮಂಜೂರಾತಿ ಅರ್ಜಿಯನ್ನು ಒಳಪಡಿಸಿ ಅಂತಿಮವಾಗಿ ಸಂಪುಟದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳುವ ವಿಧಿ ವಿಧಾನಗಳನ್ನು ಅರಿತು ಟೀಕೆ ಟಿಪ್ಪಣಿ ಮಾಡಿದ್ದರೆ ಅದಕ್ಕೊಂದು ಮಾನ್ಯತೆ ಬರುತ್ತಿತ್ತು. ಬಹುಶಃ ನಾರಾಯಣಸ್ವಾಮಿಯವರಿಗೆ ಸರ್ಕಾರ ಮಂಜೂರು ಮಾಡಿರುವ ಜಮೀನಿನ ವಿಧಿ ವಿಧಾನಕ್ಕಿಂತಲೂ ರಾಹುಲ್ ಖರ್ಗೆ ನೇತೃತ್ವದ ಟ್ರಸ್ಟ್ಗೆ ಜಮೀನು ಒದಗಿಸಿರುವ ವಿಚಾರದ ಬಗ್ಗೆ ನಂಜಿರುವುದು ಇದಕ್ಕೆ ನೇರ ಪ್ರೇರಣೆ ಇರಬಹುದೇನೋ. ಕೆಐಎಡಿಬಿ ವ್ಯಾಪ್ತಿಯ ಜಮೀನನ್ನು ಅರ್ಹ ಸಂಘಸಂಸ್ಥೆಗಳಿಗೆ ಮಂಜೂರು ಮಾಡಿರುವುದು ಇದೇನೂ ಮೊದ ಲಲ್ಲ ಕೊನೆಯೂ ಅಲ್ಲ. ಸಂಘ ಸಂಸ್ಥೆಯ ಧ್ಯೇಯೋ ದ್ದೇಶವನ್ನು ಅಧ್ಯಯನ ಮಾಡಿದ ನಂತರ ಸರ್ಕಾರ ಜಮೀನು ಮಂಜೂರಾತಿ ನಿರ್ಧಾರಕ್ಕೆ ಬರುವುದು ಸಂಪ್ರದಾಯ. ರಾಹುಲ್ ಖರ್ಗೆ ನೇತೃತ್ವದ ಟ್ರಸ್ಟ್ಗೂ ಕೂಡಾ ಇದೇ ರೀತಿಯ ವಿಧಿ ವಿಧಾನಗಳನ್ನು ಅನುಸರಿಸಿ ಜಮೀನು ಮಂಜೂರು ಮಾಡಲಾಗಿದೆ. ಇದೊಂದು ಸಾರ್ವಜನಿಕ ಉದ್ದೇಶದ ಟ್ರಸ್ಟ್. ದೇಶದಲ್ಲಿ ಮರೆಯಾಗು ತ್ತಿರುವ ಪ್ರಾಕೃತ ಹಾಗೂ ಪಾಲೀ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಗಳ ಸ್ಥಾಪಿಸುವ ಮೂಲಕ ಮಹಾತ್ಮ ಗೌತಮ ಬುದ್ಧನ ಕಾಲದ ಸಂಸ್ಕೃತಿಯನ್ನು ಮತ್ತೆ ಆಚರಣೆಗೆ ತರುವಂತೆ ಮಾಡುವ ಸದಾಶಯವನ್ನು ಗುರುತಿಸಿಯೇ ಸರ್ಕಾರ ಈ ಜಮೀನು ಮಂಜೂರು ಮಾಡಿದೆ. ಆದರೆ ನಾರಾಯಣಸ್ವಾಮಿಯವರಿಗೆ ಅದೇಕೋ ಏನೋ ಈ ಟ್ರಸ್ಟ್ಗೆ ಭೂಮಿ ಮಂಜೂರು ಮಾಡಿರುವುದು ಇಷ್ಟವಾಗಿಲ್ಲ. ಬಹುಶಃ ಇದಕ್ಕೆ ಬುದ್ಧನ ಮೇಲಿನ ಕೋಪವೋ ಅಥವಾ ಖರ್ಗೆ ಕುಟುಂಬದ ಮೇಲಿನ ಸಿಟ್ಟೋ ತಿಳಿಯುತ್ತಿಲ್ಲ. ಅಂದಹಾಗೆ ನಾರಾಯಣಸ್ವಾಮಿಯವರು ಕೂಡಾ ಕೆಐಎಡಿಬಿ ಮೂಲಕ ಮೈಸೂರಿನಲ್ಲಿ ಜಮೀನನ್ನು ೨೦೦೬ರಲ್ಲಿ ಮಂಜೂರು ಮಾಡಿಸಿಕೊಂಡಿ ರುವುದು ಯಾವ ಘನಂದಾರಿ ಉದ್ದೇಶಕ್ಕೆ ಎಂಬುದು ನಿಗೂಢವೇ. ಇದರಲ್ಲಿ ಸಾರ್ವಜನಿಕ ಉದ್ದೇಶ ಏನೆಂಬುದು ತಿಳಿಯುತ್ತಿಲ್ಲ. ಏಕೆಂದರೆ ನಾರಾಯಣಸ್ವಾಮಿಯವರು ಸರ್ಕಾರಕ್ಕೆ ಹೇಳಿದ್ದು ಸಾಫ್ಟ್ವೇರ್ ಘಟಕ ಸ್ಥಾಪನೆ ಮಾಡುವ ಸಲುವಾಗಿ ಜಮೀನು ಬೇಕು ಎಂದು. ಆದರೆ ಈಗ ಸ್ಥಾಪನೆ ಮಾಡಿರುವುದು ಶೆಡ್ ಅಥವಾ ಒಂದು ಉಗ್ರಾಣ ಮಳಿಗೆ. ಇದರ ಅರ್ಥ ಇಂತಹ ಆರೋಪವನ್ನು ಹೊರಿಸುವವರ ಕೈ ಚೊಕ್ಕಟವಾಗಿರಬೇಕು ಎಂಬುದಷ್ಟೇ. ತಾವೇ ಫಲಾನುಭವಿಯಾಗಿ ಇನ್ನೊಬ್ಬ ಫಲಾನುಭವಿಯ ಎಲೆಯ ಮೇಲೆ ಕಾಣದಿರುವ ನೊಣವನ್ನು ಹೆಗ್ಗಣ ಎಂದು ಗುರುತಿಸುವುದು ಜಾಣ್ಮೆ ಎನ್ನುವುದು ಮೂರ್ಖತನವಷ್ಟೇ. ಇದು ಉದ್ಧಟತನದ ಪರಮಾವಧಿ.
ಇದಕ್ಕೆ ಸಮಾನಾಂತರವಾಗಿ ನಾರಾಯಣಸ್ವಾಮಿ ಯವರು ಈ ಹಿಂದೆ ಎಲ್ಲಾ ರಾಜಕೀಯ ಪಕ್ಷಗಳ ಲ್ಲಿಯೂ ಇದ್ದು ಬಂದವರು. ಅಂದರೆ ಸರ್ವಪಕ್ಷಗಳ ಓಟಗಾರ ಅವಿಭಾಜ್ಯ ಜನತಾಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿ ಮಾಜಿ ಸಚಿವ ಡಾ. ಸುಬ್ರಮಣ್ಯಸ್ವಾಮಿಯವರ ಬಲಗೈ ಬಂಟನಾಗಿ, ದೇವೇಗೌಡರ ಅಂಗಳದಲ್ಲಿ ಹೋರಾಡುತ್ತಾ ೧೯೯೨-೯೩ರ ಯಲಹಂಕ ವಿಧಾನಸಭೆಯ ಉಪಚುನಾವಣೆಯ ನಂತರ ಕೈಗೆ ಬಂದಂತಹ ಜನತಾಪಕ್ಷದ ಟಿಕೆಟ್ ಬಾಯಿಗೆ ಬಾರದಂತಾದಾಗ ಕಂಗೆಟ್ಟ ನಾರಾಯಣಸ್ವಾಮಿಯವರು ಬೇಸತ್ತು ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಅಂಗಳದಲ್ಲಿ ಟವೆಲ್ ಹಾಕಿದ ನಂತರ ಜರುಗಿದ ಬೆಳವಣಿಗೆಗಳ ನಡುವೆ ಮುಂದೆ ಒಳ್ಳೆಯ ಭವಿಷ್ಯ ಬರಬಹುದು ಎಂಬ ದೃಷ್ಟಿಯಿಂದ ಆಗ ಕರ್ನಾಟಕದಲ್ಲಿ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ವಿಶ್ವಾಸಯೋಗ್ಯ ಕಾರ್ಯ ಕರ್ತರಾಗಿ ರೂಪುಗೊಂಡು ಅವರು ಕೇಂದ್ರ ಸಚಿವರಾದ ಮೇಲೆ ರೈಲ್ವೆ ನೇಮಕಾತಿ ಮಂಡಳಿಯಿಂದ ಹಿಡಿದು ನಾನಾ ಸರ್ಕಾರಿ ಹುದ್ದೆಗಳಿಗೆ ನೇಮಕಗೊಂಡಿದ್ದನ್ನು ಯಾರೂ ಮರೆತಿಲ್ಲ. ಇದಾದ ನಂತರ ಶಾಸನಸಭೆ ಪ್ರವೇಶಿಸುವ ಮಹದಾಸೆಗೆ ಅವಕಾಶಗಳು ದೊರೆಯದೇ ಹೋದಾಗ ಖರ್ಗೆ ಅವರ ಅಂಗಳದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಿವಾಸದಲ್ಲಿ ಪ್ರತ್ಯಕ್ಷರಾಗಿ ಬಿಜೆಪಿಯ ಕಾರ್ಯಕರ್ತರಾಗಿ ಕೇಸರಿ ಶಾಲು ಧರಿಸಿದ ಪರಿಣಾಮವೋ ಏನೋ ಶಾಸನಸಭೆ ಪ್ರವೇಶಿಸಲು ಮುಕ್ತ ಅವಕಾಶವಂತೂ ಒದಗಿತು. ಇದಾದ ನಂತರ ಪರಿಸ್ಥಿತಿಯ ಅನಿವರ‍್ಯತೆಯಲ್ಲಿ ಸಾಕಷ್ಟು ನುರಿತ ಅಭ್ಯರ್ಥಿಗಳು ಇದ್ದರೂ ಬಿಜೆಪಿ ಹಿರಿಯ ಮುಖಂಡರ ಸುತ್ತ ಪ್ರದಕ್ಷಿಣೆಯ ಮೇಲೆ ಪ್ರದಕ್ಷಿಣೆ ಹಾಕಿದ ಪರಿಣಾಮವಾಗಿ ಪ್ರತಿ ಪಕ್ಷದ ಸ್ಥಾನದ ಅವಕಾಶ. ಇದೆಲ್ಲದರ ಒಟ್ಟಾರೆ ಪರಿಣಾಮವೆಂದರೆ ಋಣ ಸಂದಾಯ ಮಾಡುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ನಿರಂತರವಾಗಿ ದೋಷಾರೋಪಗಳನ್ನು ಹೊರಿಸುವ ದುಸ್ಸಾಹಸ.
ನಾರಾಯಣಸ್ವಾಮಿಯವರು ಅನುಭವಸ್ಥ ರಾಜಕೀಯ ಕಾರ್ಯಕರ್ತರು. ಮಾತಿನ ಗುರಿ ಮತ್ತು ಪರಿಣಾಮಗಳನ್ನು ಚೆನ್ನಾಗಿ ಬಲ್ಲವರು. ಮಾತಿನ ಸತ್ಯಕ್ಕಿಂತ ಅದು ಬೀರುವ ಪರಿಣಾಮ ಅವರಿಗೆ ಹೆಚ್ಚು ಪ್ರಿಯ. ಹೀಗಾಗಿಯೇ ಮಾತಿನ ನಡುವೆ ಗಡ್ಡ ಕೆರೆದುಕೊಳ್ಳುತ್ತಾ, ಕಣ್ಣು ಮಿಟುಕಿಸುತ್ತಾ ಬ್ರಹ್ಮ ಜ್ಞಾನವನ್ನು ಹಂಚಿಕೊಳ್ಳುವ ರೀತಿಯಲ್ಲಿ ಕಾಂಗ್ರೆಸ್ ವಿರುದ್ಧ ನಂಜು ಕಾರಿಕೊಳ್ಳುವ ಅವರ ನಿಷ್ಠೆಯ ಆಯುಷ್ಯ ಎಷ್ಟೆಂಬುದು ದೊಡ್ಡ ಒಗಟು.
ಅಂದಹಾಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿ ಕಾರ್ಜುನ ಖರ್ಗೆ ಅವರ ಪುತ್ರರಾದ ರಾಹುಲ್ ಖರ್ಗೆ ಅವರು ವಿದ್ಯಾವಂತರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ(ಐಐಎಸ್ಸಿ) ಉನ್ನತ ಸಂಶೋಧನೆ ಮಾಡಿದ್ದಲ್ಲದೇ ಯುಪಿ ಎಸ್ಸಿ ಪರೀಕ್ಷೆಯಲ್ಲಿ ಐಆರ್‌ಎಸ್ ಶ್ರೇಣಿಗೆ ಆಯ್ಕೆಯಾಗಿದ್ದವರು. ಕೆಲಕಾಲ ಐಆರ್‌ಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಮನಸ್ಸು ಒಪ್ಪದೆ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಐಟಿ ಉದ್ಯಮ ಕ್ಷೇತ್ರದಲ್ಲಿ ತಂತ್ರಜ್ಞರಾಗಿ ಹಲ ವಾರು ಸಂಸ್ಥೆಗಳ ಸಲಹೆಗಾರರಾಗಿ ಹಾಗೂ ಮಾರ್ಗ ದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಪತ್ನಿ ಅರುಂಧತಿ ಖರ್ಗೆ ಅವರು ಪ್ರತಿಷ್ಠಿತ ಬಿಎಂಎಸ್ ಕಾಲೇಜಿನ ಬಿಇ ಪದವೀದರರು. ರಾಹುಲ್ ಖರ್ಗೆ ಅವರು ಸಿದ್ಧಾರ್ಥ ವಿಹಾರ ಎಜುಕೇಶನ್ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷರು. ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೆಸ್ ಪಾರ್ಕ್ ಬಳಿ ಸಿಎ ನಿವೇಶನವನ್ನು ಸರ್ಕಾರ ನಿಶ್ಚಿತ ಪಡಿ ಸಿದ ಹಣ ಪಾವತಿಸಿ ಕೆಐಎಡಿಬಿ ಮೂಲಕ ಜಮೀನು ಪಡೆದುಕೊಂಡಿರುವ ಮುಖ್ಯ ಉದ್ದೇಶ ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆಗಾಗಿ. ಪುರಾತನ ಭಾಷೆಗಳು ಕಣ್ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಮರ‍್ಯರ ಕಾಲದಲ್ಲಿ ಉತ್ತುಂಗದಲ್ಲಿದ್ದ ಪ್ರಾಕೃತ ಹಾಗೂ ಪಾಲೀ ಭಾಷೆಗಳನ್ನು ಉಳಿಸುವುದು ಮುಖ್ಯ ಗುರಿಯಾಗಿದೆ. ಕೆಐಎಡಿಬಿ ಖರ್ಗೆ ನೇತೃತ್ವದ ಟ್ರಸ್ಟ್ಗೆ ಮಾತ್ರವೇ ಮೊದಲ ಬಾರಿಗೆ ಜಮೀನು ಮಂಜೂರು ಮಾಡಿರುವುದು ಮೊದಲಲ್ಲ. ಈ ಹಿಂದಿನ ಸರ್ಕಾರದ ಅವಧಿಯಲ್ಲಿಯೇ ಚಾಣಕ್ಯ ವಿಶ್ವವಿದ್ಯಾನಿಲಯಕ್ಕೆ ಬೃಹತ್ ಪ್ರಮಾಣದ ವಿಶಾಲ ಜಮೀನನ್ನು ಮಂಜೂರು ಮಾಡಲಾಗಿತ್ತು. ಹಾಗೆಯೇ ಇನ್ನು ಅನೇಕ ಸಂಘ ಸಂಸ್ಥೆಗಳ ಜನಹಿತ ಗುರಿಯನ್ನು ಗಮನಿಸಿ ಜಮೀನು ಮಂಜೂರಾತಿ ಸೌಲಭ್ಯವನ್ನು ಒದಗಿಸಲಾಗಿದೆ.
ರಾಹುಲ್ ಖರ್ಗೆ ಅವರಿಗೆ ರಕ್ಷಣಾ ಪಡೆಗೆ ಮಂಜೂರಾಗಿರುವ ಜಮೀನಿನ ಪೈಕಿ ಕೆಲ ಭಾಗವನ್ನು ಕೊಡುವ ಮುನ್ನ ಸಾಕಷ್ಟು ಅಧ್ಯಯನವನ್ನು ಸರ್ಕಾರ ಅಧಿಕಾರಿಗಳ ಮೂಲಕ ಮಾಡಿಸಿದೆ ಎಂಬುದನ್ನು ನಾರಾಯಣಸ್ವಾಮಿಯವರು ಆರೋಪ ಮಾಡುವುದಕ್ಕೆ ಮೊದಲು ಅರಿತುಕೊಳ್ಳ ಬೇಕಿತ್ತು. ಪುರಾತನ ಪಾಲೀ ಹಾಗೂ ಪ್ರಾಕೃತ ಭಾಷೆಯನ್ನು ಉಳಿಸುವ ಸದಾಶಯವನ್ನು ಗುರುತಿಸಿದ್ದರೆ ಅದರಿಂದ ಸಾರ್ವಜನಿಕ ಹಿತಾ ಸಕ್ತಿ ರಕ್ಷಿಸಿದಂತೆ ಆಗುತ್ತಿತ್ತು.
ಸಾಫ್ಟ್ವೇರ್ ಘಟಕ ನಿರ್ಮಾಣ ಮಾಡುವುದಾಗಿ ಹೇಳಿ ಮೈಸೂರಿ ನಲ್ಲಿ ಶೆಡ್ ಕಟ್ಟಲು ಬಳಸಿದಂತೆ ಕೆಐಎಡಿಬಿ ಜಮೀನನ್ನು ಉಪಯೋಗಿಸುವ ಬುದ್ಧಿ ಇದ ರಲ್ಲಿ ಇಲ್ಲ ಎಂಬುದನ್ನು ಅರಿಯಬೇಕಿತ್ತು. ಸಾರ್ವ ಜನಿಕ ಮುಖಂಡರು ಸೀಜರನ ಹೆಂಡತಿ ಯನ್ನು ದೋಷಮುಕ್ತವಾಗಿರಬೇಕು ಎಂದು ಅನುಭವದ ಪಾಠ ಜಗತ್ತಿಗೆ ಹೇಳುತ್ತಿರುವುದು ನಾರಾಯಣಸ್ವಾಮಿಯವರು ಅರಿತು ನಡೆಯಬೇಕಾಗಿತ್ತು. ತಾವೇ ಅನುಮಾನದ ಸುಳಿಯಲ್ಲಿರುವಾಗ ಇನ್ನೊಬ್ಬರ ಮೇಲೆ ಸಲ್ಲದ ಅನುಮಾನಗಳನ್ನು ಪೋಣಿಸಿ ಹೇಳುವ ಕ್ರಮ ನಿಜಕ್ಕೂ ಸಾಧುವಾಗಲಾರದು. ಇದನ್ನೇ ಬೃಹತ್ ಕೈಗಾರಿಕಾ ಮಂತ್ರಿ ಎಂ.ಬಿ.ಪಾಟೀಲ್ ಅವರು ಶೆಡ್ ಗಿರಾಕಿ ಎಂದು ಗುರುತಿಸಲು ಕಾರಣವಿರಬೇಕು.
ಕಡೆಯದಾಗಿ ಹರಿಯುವ ನೀರಿಗೆಲ್ಲಾ ಕಾಲು ಚಾಚುವುದು ಪ್ರತಿಪಕ್ಷದ ನಾಯಕರಾದವರ ಧೋರಣೆಯಾಗಬಾರದು ಎಂಬುದರಲ್ಲಿ ಅರ್ಥ ವಿದೆ. ಹೀಗೆ ಹರಿಯುವ ನೀರಿನ ಕೆಳಗಿನ ನೆಲ ಹಾಗೂ ನೀರು ಹೋಗುವ ಜಾಗವನ್ನು ತಿಳಿದು ಪ್ರತಿಕ್ರಿಯೆ ಕೊಡುವುದು ರಚನಾತ್ಮಕ ಹಾಗೂ ಜನಹಿತ ರಕ್ಷಣೆಯ ಒಂದು ರಾಜಮಾರ್ಗ ಎಂಬುದು ಜನತಂತ್ರದ ಮೂಲ ಪಾಠಗಳನ್ನು ಜಗತ್ತಿಗೆ ಸಾರಿರುವ ಗ್ರೀಕ್ ಪಂಡಿತರ ಅನುಭವದ ಮಾತುಗಳು ಎಂಬುದನ್ನು ತಾವು ಪರಾಂಭರಿಸುವುದು ಪ್ರತಿಪಕ್ಷದ ನಾಯಕತ್ವಕ್ಕೆ ಭೂಷಣಪ್ರಾಯವಾಗಬಹುದು.

Next Article