`ಜಾಣರ ಗುರು' ಸಂಚಿಕೆಯಿಂದ ಜ್ಞಾನಾರ್ಜನೆ
ಕುಷ್ಟಗಿ: ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣ ಪ್ರಾಮುಖ್ಯತೆ ಪಡೆದಿದ್ದು ಅದರಲ್ಲೂ ವಿಶೇಷವಾಗಿ ಸಂಯುಕ್ತ ಕರ್ನಾಟಕ ಪತ್ರಿಕೆ ವತಿಯಿಂದ ಹೊರತಂದಿರುವ ಜಾಣರ ಗುರು ಪತ್ರಿಕೆಯನ್ನು ದಿನಂಪ್ರತಿ ಓದಿದರೆ ಸಾಕು ಜ್ಞಾನಾರ್ಜನೆ, ಶಬ್ದ ಭಂಡಾರ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ತಹಶೀಲ್ದಾರ ಶೃತಿ ಮಳ್ಳಪ್ಪಗೌಡ್ರು ಅಭಿಪ್ರಾಯಪಟ್ಟರು.
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ `ಜಾಣರ ಗುರು' ವಿದ್ಯಾರ್ಥಿ ಸಂಚಿಕೆಯನ್ನು ವಿದ್ಯಾರ್ಥಿನಿಯರಿಗೆ ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆಯಬೇಕೆಂಬುದರ ಉದ್ದೇಶದಿಂದಾಗಿ ಪತ್ರಿಕೆಯನ್ನು ದಿನ ಪ್ರತಿ ವಿತರಿಸಲಾಗುತ್ತಿದ್ದು ಪಠ್ಯ ಪುಸ್ತಕದ ಜೊತೆಗೆ ಪತ್ರಿಕೆ ಓದುವುದಕ್ಕೂ ಸಮಯ ನಿಗದಿಪಡಿಸಬೇಕು. ಅಂದಾಜು ಮಾತ್ರ ವಿದ್ಯಾರ್ಥಿ ಜೀವನ ಸಫಲತೆ ಹೊಂದಲು ಸಾಧ್ಯವಾಗುತ್ತದೆ ಎಂದರು.
ಸಾಮಾಜಿಕ ಜಾಲತಾಣದಿಂದ ಜ್ಞಾನಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಪತ್ರಿಕೆಗಳನ್ನು ಓದಿದರೆ ಸಾಕು ಜ್ಞಾನಮಟ್ಟ ವೃದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ. ನಾನು ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷೆ ಬರೆಯಬೇಕಾದರೆ ಪತ್ರಿಕೆಗಳು ಪ್ರಮುಖ ಘಟ್ಟವಾಗಿವೆ. ಪತ್ರಿಕೆಯಿಂದ ಶಬ್ದ ಭಂಡಾರ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಮಾತನಾಡಿ, ಸಂಯುಕ್ತ ಕರ್ನಾಟಕದ ಜಾಣರ ಗುರು ಪತ್ರಿಕೆ ಅತ್ಯಂತ ಉಪಯುಕ್ತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಜೊತೆಗೆ ಈಗಾಗಲೇ ಕಳೆದ ವರ್ಷದಿಂದ ಎಸ್ಎಸ್ಎಲ್ಸಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಗೆ ತರಲಾಗಿದ್ದು ವಿದ್ಯಾರ್ಥಿಗಳು ಇನ್ನು ಮುಂದೆ ಚೆನ್ನಾಗಿ ಓದಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದುಕೊಳ್ಳಲು ಮುಂದೆ ಬರಬೇಕೆಂದರು.
ಸರ್ಕಾರಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಉಪಪ್ರಾಚಾರ್ಯ ಶಿವಪ್ಪ ಭಜಂತ್ರಿ ಮಾತನಾಡಿ, ಸ್ವಾತಂತ್ರ್ಯ ಪೂರ್ವ ಪತ್ರಿಕೆ ಯಾವುದಾದರೂ ಇದ್ದರೆ ಅದು ಸಂಯುಕ್ತ ಕರ್ನಾಟಕ ಪತ್ರಿಕೆ ಮಾತ್ರ. ನಾವು ಎಸ್ಎಸ್ಎಲ್ಸಿ ಓದುತ್ತಿರುವ ಸಂದರ್ಭದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯವರು ಪತ್ರಿಕೆಯಲ್ಲಿ ಎಸ್ಎಸ್ಎಲ್ಸಿ ಫಲಿತಾಂಶವನ್ನು ಪ್ರಕಟಿಸುತ್ತಿದ್ದರು. ಪತ್ರಿಕೆ ತನ್ನದೇ ಆದ ಚಾಪನ್ನು ಮೂಡಿಸಿದ್ದು. ಹೀಗಾಗಿ ಜಾಣರ ಗುರು ಪತ್ರಿಕೆಯನ್ನು ಹೊರ ತಂದಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಶಾಖಾ ಗ್ರಂಥಾಲಯದ ಗ್ರಂಥ ಪಾಲಕಿ ಕಾಶಿಬಾಯಿ ಬಿರಾದಾರ ಗ್ರಂಥಾಲಯದ ಕುರಿತು ಸಮಗ್ರ ಮಾಹಿತಿ ನೀಡಿದರು. ಪತ್ರಿಕೆಯ ವರದಿಗಾರ ಶ್ರೀಕಾಂತ ಸರಗಣಾಚಾರಿ, ಪ್ರಸಾರಾಂಗ ವಿಭಾಗದ ಜಿಲ್ಲಾ ಪ್ರತಿನಿಧಿ ವೀರಣ್ಣ ಸಿರನಾಳ ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಕರು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.