For the best experience, open
https://m.samyuktakarnataka.in
on your mobile browser.

ಜೀವಂತ ನಾಗನಿಗೆ ಆರತಿ, ಜಲ, ಸೀಯಾಳಾಭಿಷೇಕ : ವಿಷೇಶ ವರದಿ

02:31 PM Aug 09, 2024 IST | Samyukta Karnataka
ಜೀವಂತ ನಾಗನಿಗೆ ಆರತಿ  ಜಲ  ಸೀಯಾಳಾಭಿಷೇಕ   ವಿಷೇಶ ವರದಿ

ಕರಾವಳಿಯಲ್ಲಿ ಎಲ್ಲೆಡೆ ಶಿಲಾ ನಾಗನಿಗೆ ಸೀಯಾಳ ಹಾಲು ಅಭಿಷೇಕ ಮಾಡುತ್ತಿದ್ದರೆ, ಕಾಪು ಬಳಿಯ ಮಜೂರಿನಲ್ಲಿ ಜೀವಂತ ನಾಗನಿಗೆ ಸೀಯಾಳ, ಜಲಾಭಿಷೇಕ, ಆರತಿ ಮಾಡಿ ಕೃತಾರ್ಥವಾಗಿದ್ದಾರೆ.
ನಾಗರ ಪಂಚಮಿ ಬಂತೆಂದರೆ ದೂರದೂರುಗಳಿಂದ ಸಂಬಂಧಿಕರು ತಮ್ಮ ಮೂಲನಾಗನ ಸ್ಥಳಕ್ಕೆ ಆಗಮಿಸಿ ತನು ತಂಬಿಲ ಸೇವೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ನಾಗನ ಮೇಲೆ ಇರುವಷ್ಟು ಭಯ ಭಕ್ತಿ ಇನ್ನಾವುದೇ ದೇವರ ಮೇಲೆ ಇಲ್ಲವೆಂದೇ ಹೇಳಬಹುದು. ಕರಾವಳಿಯಲ್ಲಂತೂ ನಾಗನಿಗೆ ಮೊದಲ ಸ್ಥಾನ ಇರುವುದರಲ್ಲಿ ಸಂಶಯ ಇಲ್ಲ.
ಕಾಪು ಬಳಿಯ ಮಜೂರು ಗ್ರಾಮದ ವಾಸುಕಿ ನಿಲಯ ಎಂಬಲ್ಲಿಯ ನಿವಾಸಿ ಗೋವರ್ಧನ ರಾವ್ ಎಂಬವರು ಜೀವಂತ ನಾಗನಿಗೆ ಜಲ, ಸೀಯಾಳ ಅಭಿಷೇಕ ಅರ್ಪಿಸಿ ಕೃತಾರ್ಥರಾಗಿದ್ದಾರೆ.
ಪ್ರತಿ ವರ್ಷದಂತೆಯೂ ಈ ಬಾರಿ ಯಾವುದೇ ಪ್ರಚಾರ ಇಲ್ಲದೆ ಜೀವಂತ ನಾಗನಿಗೆ ನೀರು, ಸೀಯಾಳ ಹಾಗೂ ಅರಸಿನ ಹುಡಿಯನ್ನು ಎರೆದು ಪೂಜೆ ಮಾಡಿದ್ದಾರೆ.
ಈ ಕಾರ್ಯ ಸುಮಾರು ೨೫ ವರ್ಷಗಳಿಂದ ನಿರಂತರವಾಗಿ ಸಾಗಿ ಬಂದರೂ, ಪ್ರಚಾರ ಬಯಸದ ಇವರು ಎಲೆಮರೆಯ ಕಾಯಿಯಾಗಿಯೇ ಉಳಿದಿದ್ದಾರೆ.
ಈ ಬಗ್ಗೆ ಅವರ ಮಗ ಮಧುಸೂಧನ್‌ ರಾವ್‌ ಮಾತನಾಡಿ, ವೃತ್ತರಿಯಲ್ಲಿ ಓರ್ವ ಎಲೆಕ್ಟ್ರಿಶಿಯನ್ ಹಾಗೂ ಕ್ಯಾಟರಿಂಗ್ ಸೇವೆ ಸಲ್ಲಿಸುತ್ತಿರುವ ಗೋವರ್ಧನ ರಾವ್, ಕಳೆದ ೨೫ ವರ್ಷಗಳಿಂದ ಎಲ್ಲೋ ಗಾಯಗೊಂಡ ನಾಗನನ್ನು ಇಲ್ಲಿಗೆ ತಂದು ಶುಶ್ರೂಶೆ ಮಾಡುತ್ತಾರೆ. ವರ್ಷಕ್ಕೆ ಸುಮಾರು ೨೦ರಿಂದ ೨೫ ನಾಗರ ಹಾವುಗಳನ್ನು ಶುಶ್ರೂಶೆ ಮಾಡಿ ಕಾಡಿನಲ್ಲಿ ಬಿಡುವುದು ಇವರ ಕಾಯಕವೇ ಆಗಿದೆ.
ಗೋವರ್ಧನ ರಾವ್ ಇವರಿಗೆ ನಾಗ ಅತ್ಯಂತ ಪ್ರೀತಿ ಪಾತ್ರವಾದ ಜೀವ. ರಸ್ತೆಯಲ್ಲಿ ಎಲ್ಲೇ ಹಾವುಗಳು ಗಾಯಗೊಂಡು ಬಿದ್ದರೂ, ಮೊದಲಿಗೆ ಗೋವರ್ಧನ ರಾವ್ ಇವರಿಗೆ ದೂರವಾಣಿ ಕರೆ ಬರುತ್ತದೆ. ಯಾವುದೇ ಹೊತ್ತು-ಗೊತ್ತು ಎನ್ನದೇ ಆಗಲೇ ಅಲ್ಲಿಂದ ನೇರವಾಗಿ ಗಾಯಗೊಂಡ ನಾಗರ ಹಾವು ಇದ್ದ ಸ್ಥಳಕ್ಕೆ ದೌಡಾಯಿಸುತ್ತಾರೆ. ಪೂರ್ಣವಾಗಿ ಗುಣಮುಖಗೊಂಡ ಹಾವನ್ನು ಮತ್ತೆ ಕಾಡಿಗೆ ಸೇರಿಸಿ ಕೃತಾರ್ಥರಾಗುತ್ತಾರೆ. ಕೆಲವೊಂದು ಹಾವುಗಳ ಗಾಯ ಸಂಪೂರ್ಣ ಗುಣ ಮುಖ ಆಗಲು ವರ್ಷಗಳೇ ಕಳೆದಿದೆ.
ನಾಗರ ಹಾವು ಮೃತಪಟ್ಟರೆ, ಗಾಯ ಗೊಂಡಿದ್ದ ಹಾವನ್ನು ನೀಡಿದವರಿಗೆ ದೂರವಾಣಿ ಕರೆ ಮಾಡಿ ತಿಳಿಸುತ್ತಾರೆ. ಹೆಚ್ಚಿನ ಬಾರಿ ಅವರು ಗೋವರ್ಧನ ರಾವ್‌ರಲ್ಲಿಗೆ ಆಗಮಿಸಿ ನಾಗರ ಹಾವಿನ ಅಂತಿಮ ಕ್ರಿಯಾ ಕರ್ಮ ಮಾಡುತ್ತಾರೆ. ಕೆಲವೊಂದು ಜನರು ಕ್ರಿಯಾ ಕರ್ಮ ಮಾಡಲು ತಯಾರಿಲ್ಲದಾಗ ನಾವೇ ಸೇವೆ ಮಾಡಿ ಮುಗಿಸಿದ ಘಟನೆಯೂ ನಡೆದಿದೆ.
ವೃತ್ತಿಯಲ್ಲಿ ಓರ್ವ ಎಲೆಕ್ಟ್ರಿಶಿಯನ್ ಮತ್ತು ಹಾಗೂ ಕ್ಯಾಟರಿಂಗ್ ಉದ್ಯಮ ನಡೆಸುತ್ತಿರುವ ಗೋವರ್ಧನ್ ಅವರು, ಮನೆಯಲ್ಲಿ ತಾಯಿ ನೀರಜ, ಹೆಂಡತಿ ಶ್ರೀದೇವಿ, ಮಗ ಮಧುಸೂಧನ, ಸೊಸೆ ನಮಿತಾ, ಮಗಳು ಶ್ರೀಶೈಲಾ ರೊಂದಿಗೆ ಸಂತೃಪ್ತಿ ಜೀವನ ಸಾಗಿಸುತ್ತಿದ್ದಾರೆ.
ನಮ್ಮ ಸಂತೋಷಕ್ಕೆ ನಾಗರಾಜನ ಕೃಪೆಯೇ ಕಾರಣವೆನ್ನಲು ಮಧುಸೂಧನ ರಾವ್ ಮರೆತಿಲ್ಲ.