For the best experience, open
https://m.samyuktakarnataka.in
on your mobile browser.

ಜೆನ್ನಿ ಮಿಲ್ಕ್ ವಂಚನೆ ಪ್ರಕರಣ: ಮತ್ತಿಬ್ಬರ ಬಂಧನ

10:16 PM Oct 16, 2024 IST | Samyukta Karnataka
ಜೆನ್ನಿ ಮಿಲ್ಕ್ ವಂಚನೆ ಪ್ರಕರಣ  ಮತ್ತಿಬ್ಬರ ಬಂಧನ

ಹೊಸಪೇಟೆ: ಜೆನ್ನಿ ಮಿಲ್ಕ್ (ಕತ್ತೆ ಹಾಲು) ಮಾರಾಟ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪಟ್ಟಣ ಠಾಣೆ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಪಾವಗಡದಲ್ಲಿ ಬುಧವಾರ ಬಂಧಿಸಿದ್ದಾರೆ.
ಆಂಧ್ರಪ್ರದೇಶದ ನೆಲ್ಲೂರಿನ ಎನ್. ಹರ್ಷವರ್ಧನರಾಜು(೪೦) ಮತ್ತು ಮೂಲ ಆಂಧ್ರಪ್ರದೇಶದ ನಿವಾಸಿ ಸದ್ಯ ನಂಜನಗೂಡಿನಲ್ಲಿ ವಾಸವಾಗಿರುವ ಜಿ.ಯೋಗಾನಂದ ರೆಡ್ಡಿ(೩೪) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧಿತರಿಂದ ೧೦ ಲಕ್ಷ ರೂ. ಮೌಲ್ಯದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಜೆನ್ನಿ ಮಿಲ್ಕ್ ಕಂಪನಿಗೆ ಸೇರಿದ ೩೬ ಲಕ್ಷ ರೂ. ಗಳನ್ನು ಇವರು ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಈ ಅಕೌಂಟ್‌ಗಳನ್ನು ಪೊಲೀಸರು ಫ್ರೀಜ್ ಮಾಡಿಸಿದ್ದಾರೆ.
ಜೆನ್ನಿ ಮಿಲ್ಕ್ ಕಂಪನಿ ರೈತರಿಂದ ತಲಾ ಮೂರು ಲಕ್ಷ ರೂ. ಪಡೆದು ತಲಾ ಮೂರು ಕತ್ತೆಗಳನ್ನು ನೀಡಿತ್ತು. ಜತೆಗೆ ರೈತರಿಗೆ ತಲಾ ಲೀಟರ್‌ಗೆ ೨,೩೫೦ ರೂ ನಂತೆ ಖರೀದಿ ಮಾಡುವ ಭರವಸೆ ನೀಡಿ, ವ್ಯವಹಾರ ಮಾಡುತ್ತಿತ್ತು. ಪಟ್ಟಣ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡು ಅ.೭ರಂದು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಈಗ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ತನಿಖೆ ಪ್ರಗತಿ ಹಂತದಲ್ಲಿದ್ದು, ಈಗಾಗಲೇ ಕರ್ನಾಟಕ, ಆಂಧ್ರಪ್ರದೇಶ, ಉತ್ತರ ಭಾರತಗಳ ವಿವಿಧ ಬ್ಯಾಂಕ್‌ಗಳಲ್ಲಿ ೩೩ ಖಾತೆಗಳನ್ನು ಪ್ರೀಜ್ ಮಾಡಿಸಲಾಗಿದೆ. ಈ ಪ್ರಕರಣದಲ್ಲಿ ೧೦ ಕೋಟಿ ರು. ಹೆಚ್ಚಿಗೆ ವಂಚನೆ ಆಗಿರುವ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ಕೋರಿ ಮೇಲಧಿಕಾರಿಗಳಿಗೂ ಪತ್ರ ಬರೆಯಲಾಗಿದೆ ಎಂದು ಎಸ್ಪಿ ಶ್ರೀಹರಿಬಾಬು ನಗರದ ಪಟ್ಟಣ ಠಾಣೆಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಪ್ರಕರಣದಲ್ಲಿ ೩೦೦ಕ್ಕೂ ಅಧಿಕ ಜನರು ದೂರು ಸಲ್ಲಿಸಿದ್ದು, ತನಿಖೆ ಚುರುಕುಗೊಳಿಸಲಾಗಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.