For the best experience, open
https://m.samyuktakarnataka.in
on your mobile browser.

ತಂದೆಯ ಅಭಿವೃದ್ಧಿ ಕೆಲಸ ನೋಡಿ, ಜನ ಆಶೀರ್ವಾದ ಮಾಡುವ ವಿಶ್ವಾಸವಿದೆ

03:06 PM Oct 20, 2024 IST | Samyukta Karnataka
ತಂದೆಯ ಅಭಿವೃದ್ಧಿ ಕೆಲಸ ನೋಡಿ  ಜನ ಆಶೀರ್ವಾದ ಮಾಡುವ ವಿಶ್ವಾಸವಿದೆ

ಬೆಂಗಳೂರು: ನಮ್ಮ ತಂದೆಯವರು ಮಾಡಿದ ಕೆಲಸ ಹಾಗೂ ನಾನು ತಂದೆಯವರ ಜೊತೆಗೆ ಕೆಲಸ ಮಾಡಿದ್ದರಿಂದ ಶಿಗ್ಗಾವಿ ಸವಣೂರಿನ ಜನರು ನನಗೆ ಆಶೀರ್ವಾದ ಮಾಡುವ ವಿಶ್ವಾಸ ನನಗಿದೆ ಎಂದು ಶಿಗ್ಗಾವಿ ಸವಣೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹೇಳಿದ್ದಾರೆ‌.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ತಂದೆ ಶಿಗ್ಗಾವಿ ಸವಣೂರಿನಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು, ಅಲ್ಲಿನ ಜನರ ಅಪೇಕ್ಷೆಯಂತೆ ನಮ್ಮ ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡಿದ್ದಾರೆ. ನಮ್ಮ ತಂದೆಯವರು ಮಾಡಿರುವ ಎಲ್ಲ ಅಭಿವೃದ್ಧಿ ಕೆಲಸಗಳನ್ನು ನಾನು ಮುಂದುವರೆಸಿಕೊಂಡು ಹೋಗುತ್ತೇನೆ. ಶಿಗ್ಗಾವಿ‌ ಸವಣೂರಿನ ಜನತೆಯ ಕಷ್ಟ ಸುಖದಲ್ಲಿ ನಾನು ಸದಾಕಾಲ ಇರುತ್ತೇನೆ ಎಂದು ಹೇಳಿದರು.
ತಮಗೆ ಯಾವ ಮಾನದಂಡದಲ್ಲಿ ಟಿಕೆಟ್ ನೀಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಟಿಕೆಟ್ ಕೇಳಿರಲಿಲ್ಲ, ವರಿಷ್ಠರು ಲೆಕ್ಕಾಚಾರ ಮಾಡಿ ಒಂದು ತೀರ್ಮಾನ ಮಾಡಿದ್ದಾರೆ ಅವರ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ.
ನಾನು 2018ರಿಂದ ತಂದೆಯ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ‌. 2023ರ ವಿಧಾನಸಭೆ ಚುನಾವಣೆಯಲ್ಲಿ ಮನೆ ಮನೆಗೆ ತೆರಳಿ ತಂದೆಯ ಪರವಾಗಿ ಪ್ರಚಾರ ಮಾಡಿದ್ದೇನೆ. ಎಂಪಿ ಚುನಾವಣೆಯಲ್ಲಿ ಸಂಪೂರ್ಣ ಕ್ಷೇತ್ರ ತಿರುಗಾಡಿ ತಂದೆಯ ಪರವಾಗಿ ಕೆಲಸ ಮಾಡಿದ್ದೇನೆ. ಶಿಗ್ಗಾವಿ ಸವಣೂರು ಕ್ಷೇತ್ರದ ಎಲ್ಲ ಜನರೊಂದಿಗೆ ಸಂಪರ್ಕ ಇದೆ. ತಂದೆಯವರು ಸಚಿವರಿದ್ದಾಗ ಸಿಎಂ ಇದ್ದಾಗ ನಾನು ನನ್ನ ಕೈಲಾದ ಕೆಲಸ ಮಾಡಿದ್ದೇನೆ ಎಂದರು.
ಶಿಗ್ಗಾವಿ ಸವಣೂರು ಕ್ಷೇತ್ರದಲ್ಲಿ ಸಾಕಷ್ಟು ಜನ ಟಿಕೆಟ್ ಆಕಾಂಕ್ಷಿಗಳಿದ್ದರು. ಅವರೆಲ್ಲರೂ ನಮ್ಮೊಂದಿಗಿದ್ದಾರೆ. ಎಲ್ಲರೂ ಸೇರಿಯೇ ಚುನಾವಣೆ ಎದುರಿಸಿ ಗೆಲುವು ಸಾಧಿಸುತ್ತೇವೆ. ಯಾವುದೇ ಉಪ ಚುನಾವಣೆ ಎದುರಿಸುವುದು ಕಷ್ಟಾನೇ, ಆದರೆ ನಮ್ಮ ತಂದೆಯವರು ಮಾಡಿದ ಕೆಲಸ ಹಾಗೂ ನಾನು ತಂದೆಯವರ ಜೊತೆಗೆ ಕೆಲಸ ಮಾಡಿದ್ದರಿಂದ ಶಿಗ್ಗಾವಿ ಸವಣೂರಿನ ಜನರು ನನಗೆ ಆಶೀರ್ವಾದ ಮಾಡುವ ವಿಶ್ವಾಸ ನನಗಿದೆ ಎಂದು ಹೇಳಿದರು.

Tags :