For the best experience, open
https://m.samyuktakarnataka.in
on your mobile browser.

ತಜ್ಞರ ವರದಿಯ ಆಧಾರದ ಮೇಲೆ ಗೇಟ್‌ಗಳ ನಿರ್ವಹಣೆ

04:08 PM Sep 22, 2024 IST | Samyukta Karnataka
ತಜ್ಞರ ವರದಿಯ ಆಧಾರದ ಮೇಲೆ ಗೇಟ್‌ಗಳ ನಿರ್ವಹಣೆ

ಕೊಪ್ಪಳ: ತಜ್ಞರ ವರದಿಯ ಆಧಾರದ ಮೇಲೆ ಗೇಟ್‌ಗಳ ನಿರ್ವಹಣೆ ಮಾಡಲಾಗುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಕೊಪ್ಪಳದ ಗಿಣಿಗೇರಾ ಏರ್‌ಸ್ಟ್ರಿಪ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕ್ರಸ್ಟ್ ಗೇಟ್‌ಗಳ ಕಾಲಕಾಲಕ್ಕೆ ದುರಸ್ತಿ ಮಾಡುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು 50 ವರ್ಷಕ್ಕೆ ಗೇಟ್‌ಗಳನ್ನು ಬದಲಿಸಬೇಕು. 70 ವರ್ಷಗಳಿಂದ ಗೇಟ್‌ಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಉತ್ತಮ ನಿರ್ವಹಣೆ ಮಾಡಿರುವುದರಿಂದ 70 ವರ್ಷ ಕೆಲಸ ಮಾಡಿದೆ. ಪ್ರಸ್ತುತ ತಜ್ಞರ ಸಮಿತಿ ರಚನೆಯಾಗಿದ್ದು ವರದಿ ನೀಡಬೇಕಿದೆ ಎಂದರು.

ಹಿಂಗಾರಿನ ಎರಡನೇ ಬೆಳೆಗೆ ನೀರು ಲಭ್ಯವಾಗಬಹುದು
ತುಂಗಭದ್ರ ಜಲಾಶಯ ಮತ್ತೆ ತುಂಬಿದೆ. 101.77 ಟಿ.ಎಂ.ಸಿ ನೀರು ಲಭ್ಯವಿದೆ. ಮುಂಗಾರು ಮತ್ತು ಹಿಂಗಾರು ಬಿತ್ತನೆಗೆ ನೀರು ಸಿಗಲಿದೆ.ಕೊಚ್ಚಿಹೋಗಿದ್ದ 19 ನೇ ಕ್ರಸ್ಟ್‌ಗೇಟ್‌ನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಶಿವರಾಜ ತಂಗಡಗಿ, ಜಮೀರ್ ಅಹಮದ್ ಖಾನ್ ಅವರು ಸ್ಥಳದಲ್ಲಿಯೇ ಇದ್ದು ಗೇಟ್ ದುರಸ್ತಿಗೆ ಕ್ರಮ ವಹಿಸಿದರು. ತಜ್ಞ ಕನ್ನಯ್ಯ ನಾಯ್ಡು ಅವರ ನೇತೃತ್ವದಲ್ಲಿ, ಜಿಂದಾಲ್, ನಾರಾಯಣ್ ಇಂಜಿನಿಯರಿಂಗ್ ಹಾಗೂ ಇಂಜಿನಿಯರ್‌ಗಳು, ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡಿದ್ದರಿಂದ ಆದಷ್ಟು ತ್ವರಿತವಾಗಿ ಗೇಟ್ ಅಳವಡಿಸಲು ಸಾಧ್ಯವಾಯಿತು. ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು. 20ಕ್ಕೂ ಹೆಚ್ಚು ಟಿಎಂಸಿ ನೀರು ಉಳಿಯಿತು. ಬೆಳೆಗೆ ನೀರು ಸಿಗುತ್ತದೋ ಇಲ್ಲವೋ ಎಂಬ ರೈತರ ಆತಂಕ ನಿವಾರಣೆಯಾಗಿದೆ. ಹಿಂಗಾರಿನ ಬೆಳೆಗೆ ಯಾವುದೇ ತೊಂದರೆ ಇಲ್ಲ. ಎರಡನೇ ಬೆಳೆಗೆ ನೀರು ಒದಗಿಸಲು ಪ್ರಯತ್ನಿಸಲಾಗುವುದು. 101 ಟಿಎಂಸಿ ಲಭ್ಯವಿರುವುದರಿಂದ ನೀರು ಲಭ್ಯವಾಗಬಹುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ರಸ್ತೆಗಳ ದುರಸ್ತಿ
ನಮ್ಮ ಸರ್ಕಾರವಿದ್ದಾಗ ರಸ್ತೆಗಳ ನಿರ್ಮಾಣ ಮಾಡಿದ್ದೇವೆ. ಬಿಜೆಪಿ ಕಾಲದಲ್ಲಿ ರಸ್ತೆಗಳಾಗಿಲ್ಲ. ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ರಸ್ತೆಗಳು ಹಾಳಾಗಿವೆ ಅದರ ದುರಸ್ತಿ ಮಾಡಿಸಲಾಗುವುದು ಎಂದರು.

ರಾಜ್ಯಪಾಲರ ಕಚೇರಿಯಿಂದಲೇ ಮಾಹಿತಿ ಸೋರಿಕೆಯಾಗಿರಬಹುದು
ಅರ್ಕಾವತಿ ಬಡಾವಣೆ ಬಗ್ಗೆ ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆದಿದ್ದರೆ ಸರ್ಕಾರ ಈ ಬಗ್ಗೆ ಗಮನಹರಿಸಲಿದೆ ಎಂದರು. ರಾಜ್ಯಪಾಲರ ಸೋರಿಕೆಯಾಗಿದೆ ಎಂಬ ಬಗ್ಗೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಬಗ್ಗೆ ಮಾತನಾಡಿ ರಾಜ್ಯಪಾಲರ ಕಚೇರಿಯಿಂದಲೇ ಸೋರಿಕೆಯಾಗಿರಬಹುದು ಎಂದರು. ಈ ಬಗ್ಗೆ ತನಿಖೆಯಾಗಲಿ ಎಂದರು. ಈ ಬಗ್ಗೆ ಪತ್ರಿಕೆಯಲ್ಲಿ ಓದಿ ತಿಳಿದಿದ್ದೇನೆ ಎಂದರು.

ಹಾಲಿನ ದರ ಹೆಚ್ಚು ಮಾಡಿದರೆ ಅದು ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸಲಾಗುವುದು
ಮಾಗಡಿಯಲ್ಲಿ ಬಹಳ ಶಾಸಕರು, ರೈತರು ಹಸು ಸಾಕಣೆಯ ವೆಚ್ಚ ಹೆಚ್ಚಾಗಿದ್ದು ಹಾಲಿನ ದರ ಹೆಚ್ಚಳ ಮಾಡಲು ಒತ್ತಾಯ ಮಾಡಿದರು. ಒಂದು ವೇಳೆ ಹಾಲಿನ ದರ ಹೆಚ್ಚಿಸುವ ಬಗ್ಗೆ ತೀರ್ಮಾನವಾದರೆ ಅದನ್ನು ಸಂಪೂರ್ಣವಾಗಿ ರೈತರಿಗೆ ಕೊಡಬೇಕೆಂದು ಹೇಳಿದ್ದೇನೆ ಎಂದರು.
ಹಾಲಿನ ದರ ಹೆಚ್ಚು ಮಾಡಿದರೆ ಅದನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸಬೇಕೆಂದು ಸೂಚಿಸಲಾಗಿದೆ ಎಂದರು.

ಮುನಿರತ್ನ ಅವರಿಂದ ಸುಳ್ಳು ಆರೋಪ
ಶಾಸಕ ಮುನಿರತ್ನ ಅವರು ಸರ್ಕಾರ ಬಂಧಿಸಿರುವುದು ಕಿರುಕುಳ ನೀಡಲು ಹಾಗು ನನ್ನ ಆಪ್ತ ಬಳಗಕ್ಕೆ ಕಿರುಕುಳ ನೀಡಿ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ ನಾವು ಯಾರ ಮೇಲೂ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದರು. ಅಪರಾಧ ಮಾಡಿ ಎಂದು ನಾವು ಯಾರಿಗೂ ಹೇಳಿಲ್ಲ. ಶಾಸಕರು ನನ್ನನ್ನು ಭೇಟಿ ಮಾಡಿ ಎಸ್.ಐ.ಟಿ ರಚಿಸಲು ಕೋರಿದರು. ಅವರ ಮೇಲೆ ಮೂರು ಪ್ರಕರಣಗಳು ದಾಖಲಾಗಿದೆ. ತಪ್ಪು ಮಾಡಿದರೆ ತಾನೇ ಎಫ್ಐಆರ್ ಆಗುವುದು ಎಂದರು. ನಾವು ಯಾರಿಗೂ ಕಿರುಕುಳ ನೀಡಿ ಕೇಸು ದಾಖಲಿಸಿಲ್ಲ ಈ ಆರೋಪ ಸುಳ್ಳು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

Tags :