For the best experience, open
https://m.samyuktakarnataka.in
on your mobile browser.

ಬಂದೂಕು ಹಿಡಿದವರ ಬದುಕು ಬವಣೆ

08:15 PM Feb 23, 2024 IST | Samyukta Karnataka
ಬಂದೂಕು ಹಿಡಿದವರ ಬದುಕು ಬವಣೆ

ಚಿತ್ರ: ಧೈರ್ಯಂ ಸರ್ವತ್ರ ಸಾಧನಂ
ನಿರ್ದೇಶನ: ಎ.ಆರ್.ಸಾಯಿರಾಮ್
ತಾರಾಗಣ: ವಿವಾನ್, ಅನುಷಾ ರೈ, ಯಶ್ ಶೆಟ್ಟಿ, ಬಲರಾಜವಾಡಿ, ವರ್ಧನ್ ಇನ್ನಿತರರು
ರೇಟಿಂಗ್ಸ್: 3

-ಜಿ.ಆರ್.ಬಿ

ಇತ್ತೀಚೆಗಷ್ಟೇ ತೆರೆಕಂಡ ಕಾಂತಾರಾ, ಕಾಟೇರ ಸಿನಿಮಾಗಳಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಧ್ವನಿ ಎತ್ತಲಾಗಿತ್ತು. ಹಾಗೆಯೇ ಸ್ಥಳೀಯ ಆಚರಣೆ, ಸಂಸ್ಕೃತಿಗಳ ಸುತ್ತ ಬೆಳಕು ಚೆಲ್ಲಲಾಗಿತ್ತು. ಧೈರ್ಯಂ ಸರ್ವತ್ರ ಸಾಧನಂ ಸಹ ಕೆಲವೊಂದು ಅಂಶಗಳ ಮೂಲಕ ಗಮನ ಸೆಳೆಯುತ್ತದೆ. ದಮನಿತರ ದನಿ, ಬಂದೂಕು, ಹಂದಿ, ಬೇಟೆ ಮೊದಲಾದ ವಿಷಯಗಳನ್ನು ಪ್ರಮುಖವಾಗಿ ಕಟ್ಟಿಕೊಡುವ ಮೂಲಕ ಗಮನ ಸೆಳೆಯುತ್ತಾರೆ ನಿರ್ದೇಶಕ ಸಾಯಿರಾಮ್.

ಬಯಲುಸೀಮೆ ಪ್ರದೇಶ, ರಗಡ್ ಹುಡುಗರು, ಒಬ್ಬೊಬ್ಬರದ್ದು ಒಂದೊಂದು ಧ್ಯೇಯ… ಒಟ್ಟಾರೆಯಾಗಿ ಅವರೆಲ್ಲರೂ ಗುರಿ ಮುಟ್ಟುವಲ್ಲಿ ಯಶಸ್ವಿಯಾಗುತ್ತಾರಾ..? ಅವರಿಗೆ ನ್ಯಾಯ ಸಿಗುವಲ್ಲಿ ಯಾರೆಲ್ಲಾ ಸಾಥ್ ನೀಡುತ್ತಾರೆ ಎಂಬುದಕ್ಕೆ ಸಿನಿಮಾದಲ್ಲಿ ಉತ್ತರವಿದೆ.

ಕಥೆ, ಮೇಕಿಂಗ್, ಪಾತ್ರಧಾರಿಗಳ ಅಭಿನಯ, ತಾಂತ್ರಿಕತೆಗೆ ಹೆಚ್ಚು ಒತ್ತು ನೀಡಿರುವುದರಿಂದ ಇಡೀ ಸಿನಿಮಾ ಅಚ್ಚುಕಟ್ಟಾಗಿ ಮೂಡಿಬಂದಿದೆ. ಕೆಲವೊಮ್ಮೆ ಕಥೆ ಹಳಿ ತಪ್ಪುತ್ತಿದೆ ಎನ್ನುವಷ್ಟರಲ್ಲಿ ಅದು ಮತ್ತೊಂದು ದೃಶ್ಯಕ್ಕೆ ಲಿಂಕ್ ಆಗಿರುತ್ತದೆ. ಚಿತ್ರಕಥೆಯಲ್ಲಿ ಅನೇಕ ಕಡೆ ಈ ರೀತಿಯ ಜಾಣ್ಮೆ ಪ್ರದರ್ಶಿಸಿದ್ದಾರೆ ನಿರ್ದೇಶಕ.

ವಿವಾನ್, ಅನುಷಾ ರೈ, ಯಶ್ ಶೆಟ್ಟಿ, ಬಲರಾಜವಾಡಿ, ವರ್ಧನ್ ಮೊದಲಾದವರು ಪಾತ್ರಕ್ಕೆ ತಕ್ಕಂತೆ ಕಾಣಿಸಿಕೊಂಡಿದ್ದಾರೆ, ಅಭಿನಯದಲ್ಲೂ ಶ್ರದ್ಧೆ ವಹಿಸಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ, ರವಿಕುಮಾರ್ ಸನಾ ಕ್ಯಾಮೆರಾ ಕೈಚಳಕ ಚಿತ್ರಕ್ಕೆ ಪೂರಕವಾಗಿದೆ.