For the best experience, open
https://m.samyuktakarnataka.in
on your mobile browser.

ಬೆಳಗಾವಿ ಕಾಂಗ್ರೆಸ್‌ನಲ್ಲಿ ಅಂತರ್ ಯುದ್ಧ?

04:30 AM Jun 07, 2024 IST | Samyukta Karnataka
ಬೆಳಗಾವಿ ಕಾಂಗ್ರೆಸ್‌ನಲ್ಲಿ ಅಂತರ್ ಯುದ್ಧ

ವಿಲಾಸ ಜೋಶಿ
ಬೆಳಗಾವಿ: ಲೋಕಸಮರ ಫಲಿತಾಂಶ ಪ್ರಕಟಗೊಂಡ ಬೆನ್ನ ಹಿಂದೆಯೆ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮಾತುಗಳು ಬಹಿರಂಗವಾಗಿವೆ. ಜಿಲ್ಲಾ ಕಾಂಗ್ರೆಸ್‌ನಲ್ಲಿ `ಅಂತರ್ ಯುದ್ಧ' ಪ್ರಾರಂಭವಾಗುವ ಎಲ್ಲ ಲಕ್ಷಣಗಳು ಕಾಣಸಿಗುತ್ತಿವೆ.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಸನ್ನಿಹಿತ ಎನ್ನುತ್ತಿರುವಾಗಲೇ ಕಾಂಗ್ರೆಸ್‌ನಲ್ಲಿ ನಡೆದ ವಾಕ್ ವಾರ್ ಮುಂದಿನ ದಿನಗಳಲ್ಲಿ ಯಾವ ಮಟ್ಟಕ್ಕೆ ಹೋಗಿ ನಿಲ್ಲಬಹುದು ಎನ್ನುವುದು ಊಹಿಸಲು ಆಗದು. ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಫಲಿತಾಂಶ ಪ್ರಕಟವಾದ ತಕ್ಷಣ ಸಚಿವ ಸತೀಶ ಜಾರಕಿಹೊಳಿ ಅವರು ಇನ್ನೂ ಲೀಡ್ ಹೆಚ್ಚಿಗೆ ಆಗಬೇಕಿತ್ತು ಎನ್ನುವುದರ ಜೊತೆಗೆ ನೇರಾನೇರ ಕೆಲವರ ಹೆಸರು ಉಲ್ಲೇಖಿಸಿ ಹೈಕಮಾಂಡ್‌ಗೆ ದೂರು ಕೊಡುವುದಾಗಿ ಹೇಳಿದರು. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೆಸರು ಉಲ್ಲೇಖಿಸದೇ ಅಥಣಿಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದವರು ಸರಿಯಾಗಿ ಕೆಲಸ ಮಾಡಲಿಲ್ಲ. ಅಲ್ಲಿ ನಮ್ಮ ಹಳೆಯ ಕಾರ್ಯಕರ್ತರೇ ಕೆಲಸ ಮಾಡಿದರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ೭೦ ಸಾವಿರ ಲೀಡ್ ಬಂದಿತ್ತು, ಆ ಮತಗಳು ಈಗ ಏಕೆ ಬರಲಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಸವದಿ ವಿರುದ್ಧ ಅಸಮಾಧಾನದ ಮಾತುಗಳನ್ನು ಹೊರಹಾಕಿದರು.ಆದರೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ವಿರುದ್ಧ ಸಚಿವ ಜಾರಕಿಹೊಳಿ ನೇರಾನೇರ ಆರೋಪ ಮಾಡಿದರು, ಅಲ್ಲಿ ಅವರು ತಮ್ಮ ಸಂಬಂಧಿ ಶಂಭು ಕಲ್ಲೋಳಕರ ಪರ ಕೆಲಸ ಮಾಡಿದರು. ಈ ಸಂಗತಿಯನ್ನು ಹೈಕಮಾಂಡ್ ಗಮನಕ್ಕೆ ತರುವುದಾಗಿ ತಿಳಿಸಿದರು. ಇದಕ್ಕೆ ಶಾಸಕ ಮಹೇಂದ್ರ ತಮ್ಮಣ್ಣವರ ಸಹ ತಿರುಗೇಟು ನೀಡಿದ್ದರು.
ಬೆಳಗಾವಿಯಲ್ಲಿ ಕೊತ ಕೊತ: ಇನ್ನು ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ್ದರೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಯಾರ ವಿರುದ್ಧವೂ ಆರೋಪ ಮಾಡದ ಸ್ಥಿತಿಗೆ ಬಂದು ನಿಂತಿದ್ದಾರೆ. ಏಕೆಂದರೆ ಅವರ ತವರು ಕ್ಷೇತ್ರ ಬೆಳಗಾವಿ ಗ್ರಾಮೀಣದಲ್ಲಿಯೇ ಬಿಜೆಪಿಗೆ ಸುಮಾರು ೫೦ ಸಾವಿರಕ್ಕೂ ಹೆಚ್ಚು ಮತಗಳು ಬಂದಿವೆ. ಕ್ಷೇತ್ರದ ಜನ ಹೇಳಿದಂತೆ ಸಚಿವರು ಬರೀ ಗ್ಯಾರಂಟಿ ಮಾತಿನ ಭರದಲ್ಲಿ ಅಭಿವೃದ್ಧಿಯನ್ನೇ ಮರೆತರು ಎನ್ನುವ ದೂರು ಕೇಳಿ ಬರುತ್ತಿದೆ. ಇದನ್ನು ಹೊರತುಪಡಿಸಿದರೆ ಹಳೆಯ ಕಾರ್ಯಕರ್ತರನ್ನು ಕಡೆಗಣಿಸಿ ಹೊಸ ತಂಡ ಕಟ್ಟಲು ಮುಂದಾಗಿದ್ದು ಈ ಲೀಡ್‌ಗೆ ಕಾರಣ ಎನ್ನುವ ಮಾತಿದೆ. ಬೆಳಗಾವಿ ಉತ್ತರ ಮತ್ತು ಬೈಲಹೊಂಗಲ ಕ್ಷೇತ್ರದಲ್ಲಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಿಲ್ಲ. ಬೆಳಗಾವಿಯಲ್ಲಿ ಆಸೀಫ್ ಶೇಠ ಬದಲಿಗೆ ಮಾಜಿ ಶಾಸಕ ರಮೇಶ ಕುಡಚಿಯನ್ನು ಪ್ರಚಾರಕ್ಕೆ ಕರೆದರು. ಹೀಗಾಗಿ ಹಾಲಿ ಶಾಸಕ ಶೇಠ ಸುಮ್ಮನೆ ಕುಳಿತರು, ಬದಲಾಗಿ ಅವರು ಚಿಕ್ಕೋಡಿ ಕ್ಷೇತ್ರದತ್ತ ಮುಖ ಮಾಡಿದರು. ಬೈಲಹೊಂಗಲದಲ್ಲಿ ಕೂಡ ಇದೇ ಪರಿಸ್ಥಿತಿ ಬಂದೊದಗಿತು. ಅಲ್ಲಿ ಸಚಿವೆ ಹೆಬ್ಬಾಳಕರ ಅವರು ತಮ್ಮ ಅಳಿಯ ರಜತ ಉಳ್ಳಾಗಡ್ಡಿಮಠ ಮೂಲಕ ಎಲ್ಲವನ್ನು ನಿಭಾಯಿಸತೊಡಗಿದ್ದರು.