For the best experience, open
https://m.samyuktakarnataka.in
on your mobile browser.

ರಜತ ಮಹೋತ್ಸವ ಸಂಭ್ರಮದಲ್ಲಿ ದರ್ಶನ್

07:11 PM Feb 11, 2024 IST | Samyukta Karnataka
ರಜತ ಮಹೋತ್ಸವ ಸಂಭ್ರಮದಲ್ಲಿ ದರ್ಶನ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಂದನವನಕ್ಕೆ ಪದಾರ್ಪಣೆ ಮಾಡಿ ಭರ್ತಿ 25 ವರ್ಷಗಳಾಗಿವೆ. ಇದೇ ಶುಭ ಸಂದರ್ಭದಲ್ಲಿ ದರ್ಶನ್ ಅವರ ನೆಚ್ಚಿನ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ಅರ್ಥಪೂರ್ಣವಾದ ಸಮಾರಂಭವೊಂದನ್ನು ಏರ್ಪಡಿಸಿದ್ದಾರೆ. ಶ್ರೀ ಆದಿಚುಂಚನಗಿರಿ ಶ್ರೀಗಳು, ಶ್ರೀ ಸುತ್ತೂರು ಶ್ರೀಗಳು, ಬೀಬಿಮಠದ ಶ್ರೀಗಳ ಸಾನಿಧ್ಯದಲ್ಲಿ ಹಾಗೂ ಸಂಸದೆ, ಚಿತ್ರನಟಿ ಸುಮಲತಾ ಅಂಬರೀಶ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಲಿದೆ.
ಫೆಬ್ರವರಿ 17ರ ಶನಿವಾರ ಸಂಜೆ 5ಗಂಟೆಗೆ ಬೆಳ್ಳಿ ಪರ್ವ ಡಿ-25 ಎಂಬ ಕಾರ್ಯಕ್ರಮ ನಡೆಯಲಿದೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಸಮಾರಂಭ ನಡೆಯಲಿದ್ದು, ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವ ದರ್ಶನ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಜತೆಗೆ ವಿ.ಹರಿಕೃಷ್ಣ ಸಂಗೀತ ಸಂಜೆ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ಇರಲಿವೆ.
ವಿನೋದ್ ರಾಜ್ ಕುಮಾರ್, ವಿನೋದ್ ಪ್ರಭಾಕರ್, ಸತೀಶ್ ನೀನಾಸಂ, ಡಾಲಿ ಧನಂಜಯ್, ಅಭಿಷೇಕ್ ಅಂಬರೀಶ್, ಧನ್ವೀರ್, ಚಿಕ್ಕಣ್ಣ, ಝೈದ್ ಖಾನ್, ಶಿವರಾಜ್ ಕೆ.ಆರ್ ಪೇಟೆ ಹಾಗೂ ಸೂರಜ್ ಸೇರಿದಂತೆ ಸಾಕಷ್ಟು ನಟ, ನಟಿಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಿಮಿಕಾ ರತ್ನಾಕರ್, ನಿಶ್ವಿಕಾ ನಾಯ್ಡು, ಬೃಂದಾ ಆಚಾರ್ಯ, ಶರಣ್ಯ ಶೆಟ್ಟಿ, ನಮ್ರತಾ ಗೌಡ, ತನ್ವಿಯ ಬಾಲರಾಜ್, ಪ್ರಿಯಾಂಕ ಗೌಡ ನೃತ್ಯ ಮಾಡಲಿದ್ದಾರೆ.
ಹಲವು ಸಾಮಾಜಿಕ ಕಾರ್ಯಕ್ರಮಗಳು ಇದೇ ವೇಳೆ ಜರುಗಲಿದೆ. ಇವೆಲ್ಲ ಕಾರ್ಯಗಳ ಉಸ್ತುವಾರಿಯನ್ನು ದರ್ಶನ್ ಅವರ ಆತ್ಮೀಯರಾದ ಎಸ್.ಸಚ್ಚಿದಾನಂದ ಇಂಡುವಾಳು ವಹಿಸಿಕೊಂಡಿದ್ದಾರೆ. ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಮೈದಾನದಲ್ಲಿ ಬೆಳ್ಳಿ ಪರ್ವ ಕಾರ್ಯಕ್ರಮ ನಡೆಯಲಿದೆ.