For the best experience, open
https://m.samyuktakarnataka.in
on your mobile browser.

ವಾಕರಸಾ ಸಂಸ್ಥೆಯಿಂದ ಜಾತ್ರಾ ವಿಶೇಷ ಬಸ್ ವ್ಯವಸ್ಥೆ

08:47 PM Feb 23, 2024 IST | Samyukta Karnataka
ವಾಕರಸಾ ಸಂಸ್ಥೆಯಿಂದ ಜಾತ್ರಾ ವಿಶೇಷ ಬಸ್ ವ್ಯವಸ್ಥೆ

ಹುಬ್ಬಳ್ಳಿ: ಉಳವಿ ಶ್ರೀ ಚನ್ನಬಸವೇಶ್ವರ ಹಾಗೂ ಸೌದತ್ತಿ ರೇಣುಕಾ ಯಲ್ಲಮ್ಮ ಜಾತ್ರೆಗೆ ಹೋಗಿ ಬರುವ ಭಕ್ತಾದಿಗಳು ಹಾಗೂ ಇತರೆ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಜಾತ್ರಾ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಈ ಬಾರಿ ಸವದತ್ತಿ ಯಲ್ಲಮ್ಮ ರಥೋತ್ಸವ ಹಾಗೂ ಉಳವಿ ಚನ್ನಬಸವೇಶ್ವರ ರಥೋತ್ಸವಗಳು ಫೆಬ್ರವರಿ 24ರಂದು ಭಾರತ ಹುಣ್ಣಿಮೆ ಶನಿವಾರ ಒಂದೇ ದಿನ ಬಂದಿರುವುದು ಹಾಗೂ ಸದರಿ ದಿನ ವಾರಂತ್ಯ ದಿನವಾಗಿರುವುದು ವಿಶೇಷ. ಇದರೊಂದಿಗೆ ಫೆ. 25ರಂದು ರವಿವಾರ ಸಾರ್ಜಜನಿಕ ರಜೆ, 26ರಂದು ಸೋಮವಾರ ಈಶ್ವರನ ವಾರ ಹಾಗೂ 27ರಂದು ಮಂಗಳವಾರ ದೇವಿಯ ವಾರವಾಗಿದ್ದು ಈ ದಿನಗಳಂದು ಹೆಚ್ಚಿನ ಪ್ರಮಾಣದಲ್ಲಿ ಭಕ್ತಾದಿಗಳ ಸಂಚಾರ ನಿರೀಕ್ಷಿಸಲಾಗಿದೆ. ಎರಡೂ ಜಾತ್ರೆಗಳಿಗೆ ಹೋಗಿ ಬರುವವರಿಗೆ ಅನುಕೂಲವಾಗುವಂತೆ ಹುಬ್ಬಳ್ಳಿಯಿಂದ ನೇರವಾಗಿ ಉಳವಿಗೆ ಹಾಗೂ ಯಲ್ಲಮ್ಮನ ಗುಡ್ಡಕ್ಕೆ ಜಾತ್ರಾ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.

ಜಾತ್ರಾ ಬಸ್ಸುಗಳು ಹೊರಡುವ ಬಸ್ ನಿಲ್ದಾಣಗಳು
ಉಳವಿಗೆ ಹೋಗುವ ಬಸ್ಸುಗಳು ಗೋಕುಲ ರಸ್ತೆಯ ಬಸ್ ನಿಲ್ದಾಣದಿಂದ ಹೊರಡುತ್ತವೆ. ಧಾರವಾಡ, ಹಳಿಯಾಳ, ದಾಂಡೇಲಿ ಮಾರ್ಗವಾಗಿ ಸಂಚರಿಸುತ್ತವೆ.

ಯಲ್ಲಮ್ಮನ ಗುಡ್ಡಕ್ಕೆ ಹೋಗುವ ಬಸ್ಸುಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ.
ಹುಬ್ಬಳ್ಳಿ-ಯಲ್ಲಮ್ಮನ ಗುಡ್ಡ:

ಈ ಬಸ್ಸುಗಳು ಧಾರವಾಡ, ಅಮ್ಮಿನಭಾವಿ, ಸೌದತ್ತಿ ಮಾರ್ಗವಾಗಿ ಯಲ್ಲಮ್ಮನಗುಡ್ಡಕ್ಕೆ ಸಂಚರಿಸುತ್ತವೆ.

ನವಲಗುಂದ-ಯಲ್ಲಮ್ಮನ ಗುಡ್ಡ ಈ ಬಸ್ಸುಗಳು ನವಲಗುಂದ ಬಸ್ ನಿಲ್ದಾಣದಿಂದ ಹೊರಡುತ್ತವೆ. ಗೊಬ್ಬರ ಗುಂಪಿ ಕ್ರಾಸ್, ಗೊಬ್ಬರ ಗುಂಪಿ, ಅಳಗವಾಡಿ ಹಂಚಿನಾಳ, ಹಿರೇಕುಂಬಿ ಮಾರ್ಗವಾಗಿ ಸಂಚರಿಸುತ್ತವೆ.

ಫೆ. 24ರಂದು ಶನಿವಾರ ರಥೋತ್ಸವದ ನಂತರ ಉಳವಿಯಿಂದ ಹುಬ್ಬಳ್ಳಿಗೆ ಹಾಗೂ ಯಲ್ಲಮ್ಮನಗುಡ್ಡದಿಂದ ಹುಬ್ಭಳ್ಳಿ ಮತ್ತು ನವಲಗುಂದಕ್ಕೆ ಜಾತ್ರಾ ವಿಶೇಷ ಬಸ್ಸುಗಳನ್ನು ಓಡಿಸಲಾಗುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ಮಾಹಿತಿ ನೀಡಿದ್ದಾರೆ.