For the best experience, open
https://m.samyuktakarnataka.in
on your mobile browser.

ಸಾಮಾಜಿಕ ನ್ಯಾಯದಲ್ಲಿ ರಾಜಿ ಇಲ್ಲದೆ ಕೆಲಸ ಮಾಡುತ್ತೇವೆ

03:59 PM Dec 02, 2023 IST | Samyukta Karnataka
ಸಾಮಾಜಿಕ ನ್ಯಾಯದಲ್ಲಿ ರಾಜಿ ಇಲ್ಲದೆ ಕೆಲಸ ಮಾಡುತ್ತೇವೆ

ಬೆಂಗಳೂರು: ಯಾರೂ ಏನೇ ಹೇಳಿದರೂ ಸಾಮಾಜಿಕ ನ್ಯಾಯದಲ್ಲಿ ರಾಜಿ ಇಲ್ಲದೆ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಅವರು ಇಂದು ಅಖಿಲ ಕರ್ನಾಟಕ ಗಾಣಿಗರ ಸಂಘ ಬೆಂಗಳೂರು ಇವರ ವತಿಯಿಂದ ಬೆಂಗಳೂರಿನ ಅಲಹಳ್ಳಿ ಅಂಜನಾಪುರದಲ್ಲಿ ಆಯೋಜಿಸಲಾಗಿದ್ದ ಸುವರ್ಣ ಮಹೋತ್ಸವ ಸಮಾರಂಭ ಮತ್ತು ಗಾಣಿಗ ಜನಾಂಗದ ಸಮಾವೇಶ , ನೂತನ ಕಟ್ಟಡ ಬ್ಲಾಕ್-1 ಉದ್ಘಾಟನೆ ಹಾಗೂ ಬ್ಲಾಕ್ -2 ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮವನ್ನು ನೆರೆವೇರಿಸಿ ಮಾತನಾಡಿದರು.
ಸಮಾಜದಲ್ಲಿ ಅವಕಾಶ ವಂಚಿತ ಜನರಿಗೆ, ಶತಶತಮಾನಗಳಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿರುವವರು, ಸಾಮಾಜಿಕ ನ್ಯಾದಿಂದ ಇಂದಿಗೂ ವಂಚಿತರಾದ ಜನರ ಪರವಾಗಿ ನಾವು ಇರುತ್ತೇವೆ. ನಿಮ್ಮೊಂದಿಗೂ ಇರುತ್ತೇವೆ ಎಂದರು.
ಗಾಣಿಗ ಸಮಾಜದವರು ಎಣ್ಣೆ ಉತ್ಪಾದನೆಯ ವೃತ್ತಿ ಮಾಡುತ್ತಿದ್ದವರು. ಇತ್ತೀಚಿನ ವರ್ಷಗಳಲ್ಲಿ ಕೈಗಾರೀಕರಣವಾದ ನಂತರ, ಎಣ್ಣೆ ತಯಾರಿಸುವ ವೃತ್ತಿಯನ್ನು ಬಿಡಬೇಕಾದ ಪರಿಸ್ಥಿತಿ ಇದೆ. ಅನೇಕರು ಇದರಿಂದ ನಿರುದ್ಯೋಗಿಗಳಾಗಿದ್ದಾರೆ. ಈ ಸಮಾಜದಲ್ಲಿ ಜಮೀನು ಹೊಂದಿದವರು ಬಹಳ ಕಡಿಮೆ, ಸಣ್ಣ ರೈತರು ಬಹಳ ಕಡಿಮೆ ಇದ್ದಾರೆ ಎಂದರು.
ಗಾಣಿಗರ ನಿಗಮ ಸ್ಥಾಪನೆ, ವಿಶ್ವಕರ್ಮ ಯೋಜನೆಯಡಿ ಗಾಣಿಗರನ್ನು ಬಿಟ್ಟಿದ್ದು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಮನವಿ ಮಾಡಿದ್ದಾರೆ. ನಿಮ್ಮ ಸಮಾಜಕ್ಕೆ ಸೇರಿದ ಪ್ರಧಾನಿಗಳಿಗೆ ನಿಮ್ಮ ಸಮಸ್ಯೆ ಗೊತ್ತಿದೆಯೋ ಗೊತ್ತಿಲ್ಲ. ಆದರೆ ನಾನು ಕೂಡಲೇ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಜಾತಿ ಗಣತಿ ವರದಿಯನ್ನು ವೈಜ್ಞಾನಿಕವಾಗಿ ಸಿದ್ಧ ಮಾಡಿದ್ದು, ವರದಿಯನ್ನು ಇನ್ನೂ ನಾವು ಸ್ವೀಕಾರ ಮಾಡಿಲ್ಲ. ವರದಿಯನ್ನು ಸ್ವೀಕರಿಸಲೆಂದೇ ಆಯೋಗದ ಅವಧಿಯನ್ನು 2 ತಿಂಗಳು ಮುಂದುವರೆಸಲಾಗಿದೆ. ವರದಿ ಬಂದ ಮೇಲೆ ತೀರ್ಮಾನ ಕೈಗೊಳ್ಳಲಾಗುವುದು.

ನೆರವಿನ ಭರವಸೆ
ಗಾಣಿಗರಿಗೆ ಹೆಚ್ಚಿನ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ನಿಮಗೆ ನ್ಯಾಯ ಕೊಡಿಸಲು ಸದಾ ನಿಮ್ಮೊಂದಿಗೆ ಇರುತ್ತೇನೆ. ಎಲ್ಲಾ ಜಾತಿಯ ಬಡವರಿಗೆ ಗ್ಯಾರಂಟಿಗಳನ್ನು ಒದಗಿಸಲಾಗಿದೆ ಎಂದರು.
ರಾಜಶೇಖರ್ ಅವರಿಗೆ ಸಹಕಾರ ರತ್ನ ಎಂಬ ಬಿರುದು, ಲಕ್ಷ್ಮೀ ಪತಿ ಎನ್ನುವವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ರಾಧಾಕೃಷ್ಣ ಏನೆಂಬುವರಿಗೆ ರಾಜ್ಯ ರೈತ ಪ್ರಶಸ್ತಿ ನೀಡಿದೆ. ಸಮಾಜಿಕ ಕೆಲಸ ಮಾಡಿದವರನ್ನು ಗುರುತಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಮುಂದೆಯೂ ಅದನ್ನು ನಾವು ಮುಂದುವರೆಸುತ್ತೇವೆ.