For the best experience, open
https://m.samyuktakarnataka.in
on your mobile browser.

ತಿಳಿ ಹಾಸ್ಯ, ಕೊಲೆ ಡ್ರಾಮಾ…

09:24 PM Jul 27, 2024 IST | Samyukta Karnataka
ತಿಳಿ ಹಾಸ್ಯ  ಕೊಲೆ ಡ್ರಾಮಾ…

ಜಿ.ಆರ್.ಬಿ

ಚಿತ್ರ: ಫ್ಯಾಮಿಲಿ ಡ್ರಾಮಾ
ನಿರ್ದೇಶನ: ಆಕರ್ಷ್ ಎಚ್.ಪಿ
ನಿರ್ಮಾಣ: ದಬ್ಬುಗುಡಿ ಮುರಳಿಕೃಷ್ಣ
ತಾರಾಗಣ: ಪೂರ್ಣಚಂದ್ರ, ಅಭಯ್, ಸಿಂಧು, ಅನನ್ಯ ಅಮರ್, ಮಹಾದೇವ್ ಹಡಪದ್, ರೇಖಾ ಕೂಡ್ಲಿಗಿ ಮತ್ತಿತರರು.
ರೇಟಿಂಗ್ಸ್: 3

ಯಾರನ್ನಾದರೂ ಕೊಲೆ ಮಾಡುವ ಬಗ್ಗೆ ಮಾತಿನಲ್ಲಿ ಹೇಳೋದೇ ಕಷ್ಟ… ಅಂಥದ್ದರಲ್ಲಿ ಕೊಲೆ ಮಾಡಲು ಮುಂದಾದರೆ ಹೇಗೆ..? ರೌಡಿಗಳೇ ಒಂದು ಹಂತಕ್ಕೆ ಬೆವರುತ್ತಾರೆ. ಹೀಗಿರುವಾಗ ಕೆಳ ಮಧ್ಯಮ ವರ್ಗದ ಕುಟುಂಬ ಹಣದ ಆಸೆಗಾಗಿ, ದಿಢೀರ್ ಶ್ರೀಮಂತರಾಗಲು ಮುಂದಾದಾಗ ನಡೆಯುವ ಎಡವಟ್ಟುಗಳೇ ‘ಫ್ಯಾಮಿಲಿ ಡ್ರಾಮಾ’ ಕಥಾಸಾರಾಂಶ. ಬಡವರು, ಕೆಳ ಮಧ್ಯಮ ವರ್ಗದ ಕುಟುಂಬ ಇದ್ದಕ್ಕಿಂದ್ದಂತೇ ಐಶಾರಾಮಿ ಬದುಕು ಕಟ್ಟಿಕೊಳ್ಳುವ ಭರದಲ್ಲಿ ಏನೆಲ್ಲ ಕಿತಾಪತಿ ಮಾಡುತ್ತಾರೆ, ಬದುಕಿನ ಪಥವನ್ನು ಬದಲಾಯಿಸಿಕೊಳ್ಳುವ ನೆಪದಲ್ಲಿ ಅಡ್ಡದಾರಿ ಹಿಡಿಯುವುವವರ ಮುಖಗಳ ದರ್ಶನವಾಗುತ್ತದೆ. ಹೀಗಾಗಿ ಇದು ಮೇಲ್ನೋಟಕ್ಕೆ ಮೆಲೋಡ್ರಾಮಾ ಎಂಬಂತೆ ಕಂಡರೂ, ಸಿನಿಮಾ ಮುಗಿಯುವ ಹೊತ್ತಿಗೆ ‘ಕೊಲೆ ಡ್ರಾಮಾ’ವಾಗಿ ಪರಿವರ್ತನೆಯಾಗಿರುತ್ತದೆ.

ಒಟ್ಟಾರೆ ಸಿನಿಮಾವನ್ನು ಡಾರ್ಕ್ ಹ್ಯೂಮರ್ ಜಾನರ್‌ನಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಯುವ ನಿರ್ದೇಶಕ ಆಕರ್ಷ್. ತಿಳಿ ಹಾಸ್ಯ, ಕ್ರೈಂ ಎರಡನ್ನೂ ಮಿಳಿತಗೊಳಿಸಿದ್ದಾರೆ. ಕೆಲವೊಮ್ಮೆ ಎಡವಿದ್ದಾರೆ, ಹಲವೆಡೆ ಎಚ್ಚೆತ್ತುಕೊಂಡಿದ್ದಾರೆ… ಆದರೆ ಚಿತ್ರದ ಓಘ ಹಾಗೂ ಚಿತ್ರಕಥೆಯ ಮೇಲೆ ಮತ್ತಷ್ಟು ನಿಗಾ ವಹಿಸಿದ್ದರೆ ‘ಫ್ಯಾಮಿಲಿ ಡ್ರಾಮಾ’ದಲ್ಲಿ ಮತ್ತಷ್ಟು ನಗೆಯ ಹೂರಣ ಸಿಗುವ ಅವಕಾಶವಿತ್ತು. ಅದಾಗ್ಯೂ ನಗೆಯೂಟ ಬಡಿಸುವ ಪ್ರಯತ್ನವಂತೂ ಮಾಡಿದ್ದಾರೆ.
ಇಡೀ ಚಿತ್ರದಲ್ಲಿ ನೈಜತೆ ಗಮನ ಸೆಳೆಯುತ್ತದೆ.

ಕಲಾವಿದರ ಪಾತ್ರ ಪೋಷಣೆ, ಸಹಜಾಭಿನಯ, ಚುರುಕು ಸಂಭಾಷಣೆ ಚಿತ್ರದ ಪ್ಲಸ್ ಪಾಯಿಂಟ್‌ಗಳು. ಒಂದೇ ಎಲೆಯ ಕಥೆಗೆ ಹಲವು ಸನ್ನಿವೇಶಗಳು ಬೆರೆತುಕೊಳ್ಳುತ್ತವೆ, ಸಿನಿಮಾ ಸಾಗುತ್ತಾ ಸಾಗುತ್ತಾ ಅವೆಲ್ಲವೂ ಬೆಸೆದುಕೊಳ್ಳುತ್ತವೆ. ಹೀಗಾಗಿ ರೌಡಿಗಳು, ಫ್ಯಾಮಿಲಿ ಸದಸ್ಯರ ಸಮಾಗಮ ಸಿನಿಮಾ ನೋಡಿ ಹೊರಬಂದ ನಂತರವೂ ಮನಸ್ಸಿನಲ್ಲಿ ಉಳಿಯುತ್ತದೆ.

ಮಧ್ಯಮವರ್ಗದ ಮಹಿಳೆಯಾಗಿ ರೇಖಾ ಕೂಡ್ಲಿಗಿ, ಅಪ್ಪನ ಪಾತ್ರದಲ್ಲಿ ಮಹಾದೇವ್ ಹಡಪದ್ ಚಿತ್ರದುದ್ದಕ್ಕೂ ನಗಿಸುತ್ತಾರೆ, ಅವರಿಬ್ಬರ ನೈಜ ನಟನೆ ಗಮನ ಸೆಳೆಯುವಂತೆ ಮಾಡುತ್ತದೆ. ಪೂರ್ಣಚಂದ್ರ, ಅಭಯ್, ಸಿಂಧು, ಅನನ್ಯ ಅಮರ್ ಮೊದಲಾದವರ ಸಹಜಾಭಿನಯ ಚಿತ್ರದ ಕಥೆಗೆ ಸಾಥ್ ನೀಡಿದೆ.

ತಾಂತ್ರಿಕವಾಗಿಯೂ ಸಿನಿಮಾ ಗಮನ ಸೆಳೆಯುವಲ್ಲಿ ಶಕ್ತವಾಗಿದೆ. ಚೇತನ್ ಅಮ್ಮಯ್ಯ ಸಂಗೀತ ಸಂಯೋಜನೆ, ಸಿದ್ಧಾರ್ಥ್ ಸುನೀಲ್ ಕ್ಯಾಮೆರಾ ಕುಸುರಿ ‘… ಡ್ರಾಮಾ’ ಮೆರುಗನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.