For the best experience, open
https://m.samyuktakarnataka.in
on your mobile browser.

ದೇಶದ ಎಲ್ಲ ದೇವಸ್ಥಾನಗಳನ್ನು ಸರ್ಕಾರದಿಂದ ಮುಕ್ತಗೊಳಿಸಿ

05:15 PM Oct 06, 2024 IST | Samyukta Karnataka
ದೇಶದ ಎಲ್ಲ ದೇವಸ್ಥಾನಗಳನ್ನು ಸರ್ಕಾರದಿಂದ ಮುಕ್ತಗೊಳಿಸಿ

ಮಂಗಳೂರು: ದೇಶದ ಎಲ್ಲಾ ದೇವಸ್ಥಾನಗಳನ್ನು ಸರ್ಕಾರದಿಂದ ಮುಕ್ತಗೊಳಿಸಿ ವಿಶ್ವಸ್ಥ ಮಂಡಳಿ ರೂಪಿಸಿ ಎಂದು ಉಡುಪಿ ಪೇಜಾವರ ಮಠಾಧೀಶ ಹಾಗೂ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಮಂಗಳೂರಿಗೆ ಭಾನುವಾರ ಭೇಟಿ ನೀಡಿ ಇಲ್ಲಿನ ಕದ್ರಿಯಲ್ಲಿ ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರ ಮಂಜು ಪ್ರಸಾದ ನಿವಾಸದಲ್ಲಿ ದಸರಾ ಗೊಂಬೆ-ಪಾರಂಪರಿಕ ವಸ್ತು ಪ್ರದರ್ಶನ ಅನಾವರಣಗೊಳಿಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ ಆದೇಶದಂತೆ ದೇಶದಲ್ಲಿರುವ ಎಲ್ಲ ಹಿಂದು ದೇವಾಲಯಗಳು ಸರ್ಕಾರದ ಹಿಡಿತದಿಂದ ಮುಕ್ತಗೊಳ್ಳಬೇಕು. ದೇವಾಲಯಗಳ ಆಗುಹೋಗು ನೋಡಿಕೊಳ್ಳಲು ಅಯೋಧ್ಯೆ ಶ್ರೀರಾಮ ಮಂದಿರ ಮಾದರಿಯಲ್ಲಿ ಪ್ರತ್ಯೇಕ ವಿಶ್ವಸ್ಥ ಮಂಡಳಿ ರೂಪುಗೊಳ್ಳಬೇಕು ಎಂದರು.
ಇತರೆ ಧರ್ಮೀಯರ ಆರಾಧನಾ ಸ್ಥಳಗಳ? ಅವರ ಹಿಡಿತದಲ್ಲಿದೆ. ಆದರೆ ಸುಪ್ರೀಂ ಕೋರ್ಟ್ ಆದೇಶ ಹೊರತೂ ಹಿಂದು ದೇವಾಲಯಗಳನ್ನು ಹಿಂದುಗಳ ಪೂರ್ಣ ಹಿಡಿತಕ್ಕೆ ಇದುವರೆಗೆ ನೀಡಲು ಸಾಧ್ಯವಾಗಿಲ್ಲ. ಹಿಂದುಗಳಿಗೂ ಅವರದ್ದೇ ಆದ ರೀತಿ, ನೀತಿ, ರಿವಾಜುಗಳಿವೆ. ಆದ್ದರಿಂದ ಸರ್ಕಾರದ ಕಪಿಮುಷ್ಠಿಯಿಂದ ಹಿಂದು ದೇವಾಲಯಗಳನ್ನು ಮುಕ್ತಗೊಳಿಸಬೇಕು. ಹಿಂದುಗಳೇ ಶ್ರದ್ಧಾ ಕೇಂದ್ರಗಳನ್ನು ನಡೆಸಿದರೆ, ಅದಕ್ಕೆ ಯಾವತ್ತೂ ಅಪಚಾರ ನಡೆಸಲು ಅವಕಾಶ ನೀಡುವುದಿಲ್ಲ. ಆಯಾ ಊರುಗಳ ದೇವಾಲಯಗಳನ್ನು ಪ್ರತ್ಯೇಕ ವಿಶ್ವಸ್ಥ ಮಂಡಳಿ ರಚಿಸಿ ನೋಡಿಕೊಳ್ಳಬೇಕು. ಈಗ ಪ್ರಾಚೀನ ದೇವಾಲಯಗಳನ್ನು ಸರ್ಕಾರದ ಸುಪರ್ದಿಯಲ್ಲಿದೆ. ಇದು ಸರಿಯಾದ ಕ್ರಮವಲ್ಲ ಎಂದು ಪೇಜಾವರಶ್ರೀ ಹೇಳಿದರು.
ಸ್ವಂತ ಗೋಶಾಲೆ ಹೊಂದಬೇಕು:
ತಿರುಪತಿಯಲ್ಲಿ ಲಡ್ಡು ಅಪವಿತ್ರದಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕಾದ್ದು ಸರ್ಕಾರಗಳ ಕರ್ತವ್ಯ. ಸಂಬಂಧಪಟ್ಟ ವಿಭಾಗಗಳು ನಿಗಾವಹಿಸಬೇಕಿತ್ತು. ಇಂತಹ ಘಟನೆ ಮರುಕಳಿಸದೇ ಇರಬೇಕಾದರೆ, ದೇವಾಲಯಗಳು ಸ್ವಂತ ಗೋಶಾಲೆ ಹೊಂದುವಂತಾಗಬೇಕು. ಜಾಗೃತ ಕೇಂದ್ರಗಳಾದಾಗ ಮಾತ್ರ ಹಿಂದುಗಳ ನಂಬಿಕೆ, ನಡವಳಿಕೆಯನ್ನು ಗೌರವಿಸಲು ಸಾಧ್ಯವಾಗುತ್ತದೆ. ಇಂತಹ ಉಪಕ್ರಮಕ್ಕೆ ಸರ್ಕಾರಗಳು ಮುಂದಾಗಬೇಕು ಎಂದು ಅವರು ಆಶಿಸಿದರು.
ಅಯೋಧ್ಯೆಯಲ್ಲಿ ಭರದ ಕಾಮಗಾರಿ:
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠೆ ಬಳಿಕ ಮುಂದುವರಿದ ಕಾಮಗಾರಿ ಭರದಿಂದ ನಡೆಯುತ್ತಿದೆ. ಗರ್ಭಗೃಹದ ಗೋಪುರ ಸೇರಿದಂತೆ ಇನ್ನಿತರ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಒಂದೂವರೆ ವರ್ಷ ಬೇಕು ಎಂದರು.
ಲೋಕದಲ್ಲಿ ಅಶಾಂತಿ ಕಾಡುತ್ತಿದೆ. ಇದು ಸಮಾಜವನ್ನೂ ಬಿಟ್ಟಿಲ್ಲ. ಅನೇಕ ಗೊಂದಲಗಳು ಸೃಷ್ಟಿಯಾಗುತ್ತಿವೆ. ಮನಸ್ಸಿಗೆ ಸಂತೋಷ, ನೆಮ್ಮದಿಗಾಗಿ ದಸರಾ ಆಚರಣೆ ಮಾಡುತ್ತೇವೆ. ನಾಡಹಬ್ಬದ ಸಡಗರದಲ್ಲಿ ಎಲ್ಲರಿಗೂ ಭಗವಂತನ ಆಶೀರ್ವಾದ ಇರಲಿ. ಜಗತ್ತಿನಲ್ಲಿ ರಾಮರಾಜ್ಯ ಸೃಷ್ಟಿಯಾಗಬೇಕು. ಇದೇ ಆಶಯದಲ್ಲಿ ಚೈನ್ನೈನಲ್ಲಿ ಚಾತುರ್ಮಾಸ್ಯ ಮುಕ್ತಾಯ ಬಳಿಕ ನಾವು ಅಯೋಧ್ಯೆ, ಪ್ರಯಾಗ, ಕಾಶಿ, ಹರಿದ್ವಾರ, ಋಷಿಕೇಶ, ಬದರಿ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ಲೋಕಕಲ್ಯಾಣಕ್ಕೆ ಪ್ರಾರ್ಥಿಸಿದ್ದಾಗಿ ಪೇಜಾವರಶ್ರೀ ಹೇಳಿದರು.