ದ್ವೇಷ ರಾಜಕಾರಣ: ಬಿಜೆಪಿಗೆ ಎಚ್ಚರಿಕೆ
10:52 PM Aug 19, 2024 IST | Samyukta Karnataka
ಕೊಪ್ಪಳ: ರಾಜ್ಯಪಾಲರು ಮಿಸ್ಟೇಕ್ ಮಾಡಿಕೊಂಡಿಲ್ಲ. ಬದಲಿಗೆ ರಾಜ್ಯಪಾಲರೇ ಮಿಸ್ ಆಗಿದ್ದಾರೆ. ನಾವು ದ್ವೇಷದ ರಾಜಕಾರಣ ಮಾಡಿದರೆ ಬಿಜೆಪಿಯ ನಾಯಕರೆಲ್ಲರೂ ಜೈಲಿನಲ್ಲಿ ಇರುತ್ತಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಮಗೆ ನಿಮ್ಮಂತೆ ದ್ವೇಷ ರಾಜಕಾರಣ ಮಾಡಲು ಸಮಯವಿಲ್ಲ. ರೈತರ, ಬಡವರ ಯುವಜನರ, ಮಹಿಳೆಯರ ಬಗ್ಗೆ ಚಿಂತನೆ ಮಾಡಿ, ಯೋಜನೆಗಳನ್ನು ನೀಡುತ್ತಿರುವ ಸಿದ್ದರಾಮಯ್ಯರನ್ನು ಸಹಿಸಲಾಗುತ್ತಿಲ್ಲ. ರಾಜ್ಯಪಾಲ ಹಟಾವೋ, ಕರ್ನಾಟಕ ರಾಜ್ಯ ಬಜಾವೋ ಎನ್ನುವ ಕರೆ ಕೊಟ್ಟಿದ್ದು, ಇಷ್ಟಕ್ಕೆ ರಾಜ್ಯಪಾಲರು ಎಚ್ಚೆತ್ತು ಆದೇಶ ವಾಪಸ್ ಪಡೆದರೆ, ಒಳ್ಳೆಯದಾಗುತ್ತದೆ. ಇಲ್ಲವಾದರೆ ಕಷ್ಟ ಅನುಭವಿಸಬೇಕಾಗುತ್ತದೆ. ೧೩೬ ಸ್ಥಾನ ಪಡೆದ ಸರ್ಕಾರದ ಅಸ್ಥಿರಗೊಳಿಸುವ ಷಡ್ಯಂತ್ರ ಇದಾಗಿದ್ದು, ಸಂವಿಧಾನ ಕಗ್ಗೊಲೆ ಮಾಡಲು ರಾಜ್ಯಪಾಲರು ಮುಂದಾಗಿದ್ದಾರೆ ಎಂದು ಅವರು ನಗರದಲ್ಲಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.