For the best experience, open
https://m.samyuktakarnataka.in
on your mobile browser.

ನಟಿ ಶುಭಾ ಪೂಂಜಾರೊಂದಿಗೆ ಯುವಕರ ಅಸಭ್ಯ ವರ್ತನೆ

03:44 PM Oct 28, 2023 IST | Samyukta Karnataka
ನಟಿ ಶುಭಾ ಪೂಂಜಾರೊಂದಿಗೆ ಯುವಕರ ಅಸಭ್ಯ ವರ್ತನೆ

ಚಿಕ್ಕಮಗಳೂರು: ಕೊರಗಜ್ಜದ ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ಕಿಡಿಗೇಡಿಗಳು ನಟಿ ಶುಭಾ ಪೂಂಜಾರೊಂದಿಗೆ ಅಸಭ್ಯ ವರ್ತನೆ ಮಾಡಿರುವ ಘಟನೆ ಜಿಲ್ಲೆಯ ಕಳಸ ತಾಲೂಕು ಕುದುರೆಮುಖದಲ್ಲಿ ನಡೆದಿದೆ.
ಕುದುರೆಮುಖದ ಮೈದಾಡಿ ಗುಡ್ಡದಲ್ಲಿ ಕೊರಗಜ್ಜದ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು ಆ ಹಾಡಿನ ಚಿತ್ರೀಕರಣದ ವೇಳೆ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.
ನಟಿ ಶುಭಾ ಪೂಂಜಾ ಡ್ಯಾನ್ಸ್ ಮಾಡುವ ವೇಳೆಯಲ್ಲಿ ಅಪರಿಚಿತ ಯುವಕರ ಗುಂಪು ಕೈ ಹಿಡಿದು ಎಳೆದು ಅಸಭ್ಯ ವರ್ತನೆ ಮಾಡಿದ್ದಾರೆ. ಯುವಕರ ಅಸಭ್ಯ ವರ್ತನೆಯಿಂದ ಬೇಸರಗೊಂಡ ಚಿತ್ರತಂಡ ಹಾಡಿನ ಚಿತ್ರೀಕರಣ ನಿಲ್ಲಿಸಿದ್ದಾರೆ.
ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಕೊರಗಜ್ಜ ಚಿತ್ರ ಮೂಡಿಬರುತ್ತಿದೆ. ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಜೊತೆ ಶುಭಾ ಶೂಟಿಂಗ್ ನಡೆಸುವ ವೇಳೆ ಈ ಘಟನೆ ನಡೆದಿದೆ. ಆದರೆ ಈ ಸಂಬಂಧ ಚಿತ್ರತಂಡ ಈವರೆಗೂ ಪೊಲೀಸರಿಗೆ ದೂರು ನೀಡಿಲ್ಲ. ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ಸುಧೀರ್ ಅತ್ತಾವರ ಸಿನಿಮಾ ಚಿತ್ರೀಕರಣದ ವೇಳೆ ಶುಭಾ ಪೂಂಜ ಅವರಿಗೆ ಕೆಲ ಯುವಕರು ಕಿರಿಕ್ ಮಾಡಿದ್ದು, ಮನಸ್ಸಿಗೆ ಅತ್ಯಂತ ನೋವು ಉಂಟು ಮಾಡಿದೆ ಎಂದರು. ಯಾವುದೋ ಉದ್ದೇಶದಿಂದ ಯುವಕರು ಅಸಭ್ಯ ವರ್ತನೆ ಮಾಡಿದ್ದು, ಇದರಿಂದ ಚಿತ್ರಿಕರಣವನ್ನೇ ನಿಲ್ಲಿಸಬೇಕಾದಂತ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಹೇಳಿದರು.
ಹಾಡಿನ ಚಿತ್ರೀಕರಣಕ್ಕಾಗಿ 50 ಜನ ಕಲಾವಿದರು, ಖ್ಯಾತ ಕೊರಿಯೋಗ್ರಾಫರ್ ಗಣೇಶ ಆಚಾರ್ಯ ಕೂಡ ಇದ್ದರು. ಬಿಜೆಪಿ ಪಕ್ಷದ ಸಾಗರ ಘಟಕವೆಂದು ಹೇಳಿಕೊಂಡು ಕೆಲ ಯುವಕರು ಅಸಭ್ಯ ವರ್ತನೆ ಮಾಡಿದ್ದಾರೆ ಎಂದು ತಿಳಿಸಿದರು.