For the best experience, open
https://m.samyuktakarnataka.in
on your mobile browser.

ನಿಮ್ಮ ದಾರಿ ನಿಮಗೆ ನಮ್ಮ ದಾರಿ ನಮಗೆ

02:30 AM May 21, 2024 IST | Samyukta Karnataka
ನಿಮ್ಮ ದಾರಿ ನಿಮಗೆ ನಮ್ಮ ದಾರಿ ನಮಗೆ

ಮದ್ರಾಮಣ್ಣನವರು, ಬಂಡೇಸಿಯವರಿಗೆ ನಮಸ್ಕಾರಗಳು….. ನಿಮ್ಮ ಸರ್ಕಾರ ಒಂದು ವರ್ಷ ಪೂರೈಸಿದ್ದಕ್ಕೆ ಅಭಿನಂದನೆಗಳು. ನೀವು ಭಯಂಕರ ಕಷ್ಟಪಟ್ಟು ಏನೇನೋ ಮಾಡಿ ಸರ್ಕಾರವನ್ನು ತಂದು ಒಂದು ವರ್ಷ ಪೂರೈಸಿದ್ದೀರಿ. ಹೋದಲ್ಲಿ ಬಂದಲ್ಲಿ ಭಯಂಕರ ಭಾಷಣ ಮಾಡಿದಿರಿ ನಿಮ್ಮನ್ನು ಮೆಚ್ಚುತ್ತೇವೆ. ಅವರು ಹಾಗೆಂದರೆಂದು ನೀವು ಹೀಗೆ ಅನ್ನುವುದು, ನೀವು ಹೀಗೆ ಅಂದಿರಿ ಎಂದು ಅವರು ಹಾಗೆ ಅನ್ನುವುದನ್ನು ದಿನಾಲೂ ನೋಡಿ, ನೋಡಿ ಸಾಕಾಗಿದೆ. ಅದು ಇದ್ದದ್ದೇ ಬಿಡಿ…ಈಗ ನಾವು ನಿಮಗೆ ಜರೂರ್ ಆಗಿ ಈ ಪತ್ರ ಬರೆಯಲು ಕಾರಣವೇನೆಂದರೆ…… ನೀವು ನಮ್ಮ ಹೆಂಡಂದಿರಿಗೆ ಫ್ರೀ ಬಸ್ ಬಿಟ್ಟಾಗ ನಾವೂ ಖುಷಿಯಾಗಿದ್ದೆವು. ನಾವಂತೂ ಎಲ್ಲೂ ಕರೆದುಕೊಂಡು ಹೋಗಲು ಆಗುವುದಿಲ್ಲ. ನಿಮ್ಮಿಂದಾದರೂ ನಾಲ್ಕು ಊರು ನೋಡಿಬರುತ್ತಾರೆ ಎಂದು ಅಂದುಕೊಂಡಿದ್ದೆವು. ಮೊದಲ ಬಾರಿ…ರೀ…ನಾವು ಮೈಸೂರಿಗೆ ಹೋಗಿ ಬರುತ್ತೇವೆ ರೀ ಅಂದಾಗ… ಓಕೆ.. ಹೋಗಿ ಬನ್ನಿ ಅಂದೆವು. ಅವರು ಎರಡು ದಿನ ಮೈಸೂರಿಗೆ ಹೋದಾಗ.. ನಾವೇ ಅಡುಗೆ ಮಾಡಿಕೊಂಡು ತಿಂದು ಮಕ್ಕಳಿಗೆ ಊಟ ಹಾಕಿದೆವು. ಅಲ್ಲಿಂದ ಬಂದ ನಂತರ ನಾಲ್ಕೈದು ದಿನಬಿಟ್ಟು ರೀ… ಅಂದಾಗ ಅಲ್ಲಿಗೂ ಹೋಗಿ ಬಾ ಅಂದೆವು. ಮೊದಲು ವಾರಕ್ಕೆ ಒಂದು ದಿನ ಇದ್ದದ್ದು ಈಗ ವಾರದಲ್ಲಿ ನಾಲ್ಕು ಬಾರಿ ಟೂರ್ ಹೊಡೆಯುತ್ತಾರೆ. ನಮಗೆ ದಿನಾಲೂ ಅಡುಗೆ ಮಾಡಿ ಮಾಡಿ ಸಾಕಾಗಿ ಹೋಗಿದೆ. ಸುಮ್ಮನೇ ಹೋಗಿ ಬಂದರೆ ಆದೀತೆ? ಅವರಿಗೆ ಕೈ ಖರ್ಚು ಬೇಡವೇ…ನಮ್ಮನ್ನು ಕೇಳಲೇಬೇಕು ಅಂದುಕೊಂಡಿದ್ದೆವು. ಆದರೆ ನೀವು ಎರಡು ಸಾವಿರ ರೂ ಹಾಕಿದಾಗಲಂತೂ, ನಮ್ಮ ಜತೆ ಭಯಂಕರವಾಗಿ ನಡೆದುಕೊಳ್ಳತೊಡಗಿದ್ದಾರೆ. ತಾವು ಊರಿಗೆ ಹೋಗುವಾಗ… ಸಣ್ಣ ಹುಡುಗರ ಕೈಲಿ ಕೊಡುತ್ತಾರಲ್ಲ ಹಾಗೆ ಇಟ್ಟುಕೋ ಎಂದು ಇಪ್ಪತ್ತರ ಕೆಂಪು ನೋಟು ಕೊಟ್ಟು ಹೋಗುತ್ತಾರೆ. ಕೆಲವು ಸಲ ನಾವು ಮಾತಾಡುವುದನ್ನೇ ಬಿಟ್ಟಾಗ… ಬಿಟ್ಕೋ ಹೋಗ್ ಎಂದು ತಮ್ಮ ಪಾಡಿಗೆ ತಾವು ಇದ್ದರು. ಇದೀಗ ಆ ಯಮ್ಮನೂ ಅದೆಷ್ಟೋ ಎಂಟು ಸಾವಿರ ರೂ ಕೊಡುತ್ತೇನೆ ಅಂದಿದ್ದಾರಂತೆ. ಅದೇನಾದರೂ ಬರಲು ಶುರುವಾದರೆ…ನಮ್ಮ ಪಾಡು ಏನಾಗಬಹುದು? ನೀವು ಗಂಡಸಾಗಿರುವುದರಿಂದ ನಮ್ಮ ಕಡೆಯಿಂದ ಯೋಚನೆ ಮಾಡಿ. ಒಂದು ವೇಳೆ ನೀವು ಅವರಿಗೆ ಕೊಡುವುದೇ ಆದಲ್ಲಿ…ನಮ್ಮ ಅಕೌಂಟ್‌ಗೆ ಹಾಕಿ..ನಾವು ಅವರಿಗೆ ಕೊಟ್ಟು ಕಳುಹಿಸುತ್ತೇವೆ. ಒಂದು ವೇಳೆ ನೀವು ಅಷ್ಟೂ ಮಾಡದಿದ್ದರೆ…ನಿಮ್ಮ ದಾರಿ ನಿಮಗೆ-ನಮ್ಮ ದಾರಿ ನಮಗೆ…
ಲಕ್ಷಾಂತರ ಸಹಿಗಳಿವೆ….