For the best experience, open
https://m.samyuktakarnataka.in
on your mobile browser.

ನಿರಂಜನ ಹಿರೇಮಠಗೆ ಬೆಚ್ಚಿಬೀಳಿಸಿದ ಆಟೋ ಚಾಲಕ!

04:52 AM May 28, 2024 IST | Samyukta Karnataka
ನಿರಂಜನ ಹಿರೇಮಠಗೆ ಬೆಚ್ಚಿಬೀಳಿಸಿದ ಆಟೋ ಚಾಲಕ

ಹುಬ್ಬಳ್ಳಿ: ತಮ್ಮ ಮಗಳ ಹತ್ಯೆಯಾದ ಬಳಿಕ ತೀವ್ರ ಆತಂಕಕ್ಕೊಳಗಾಗಿ ಪೊಲೀಸ್ ಭದ್ರತೆ ಪಡೆದಿರುವ ನೇಹಾ ಹಿರೇಮಠ ಅವರ ತಂದೆ ಕಾರ್ಪೊರೇಟರ್ ನಿರಂಜನ ಹಿರೇಮಠ ಅವರನ್ನು ಸೋಮವಾರ ಸಂಜೆ ಆಟೋ ಚಾಲಕ ಸತಾಯಿಸಿ ಬೆಚ್ಚಿಬೀಳಿಸಿದ್ದಾನೆ.
ಸೋಮವಾರ ಸಂಜೆ ಟೆಂಡರ್ ಶ್ಯೂರ್ ರಸ್ತೆಯ ಸಿದ್ದೇಶ್ವರ ಪಾರ್ಕ್ ಹತ್ತಿರ ನಿರಂಜನ ಹಿರೇಮಠ ತಮ್ಮ ಕಾರಿನಲ್ಲಿ ಹೊರಟಿದ್ದಾಗ ಆಟೋ ಚಾಲಕ ದಾರಿ ಬಿಟ್ಟಿಲ್ಲ. ದಾರಿ ಬಿಡದೇ ಇದ್ದಾಗ ಪಕ್ಕಕ್ಕೆ (ಸೈಡ್‌ಗೆ) ತೆಗೆದುಕೊಂಡು ಹೋಗಬೇಕೆಂದರೂ ಆಗಲೂ ಮತ್ತೆ ಕಾರಿಗೆ ಆಟೋ ಚಾಲಕ ಆಟೋ ತಿರುಗಿಸಿದ್ದನಂತೆ. ಹೀಗೆ ದಾರಿಯುದ್ದಕ್ಕೂ ಮಾಡಿಕೊಂಡು ಬಂದಿದ್ದಾನೆ. ರಸ್ತೆ ತುಂಬಾ ಬೇಕಾಬಿಟ್ಟಿ ಆಟೋ ಓಡಿಸಿಕೊಂಡು ಬರುತ್ತಿದ್ದುದನ್ನು ಕಂಡ ಸಾರ್ವಜನಿಕರು ಆಟೋ ಚಾಲಕನನ್ನು ಹಿಡಿದಿದ್ದಾರೆ. ಈ ವೇಳೆ ಗೊತ್ತಾಗಿದ್ದು ಆಟೋ ಚಾಲಕ ಸಂಪೂರ್ಣ ಪಾನಮತ್ತನಾಗಿದ್ದು, ನಿಲ್ಲಲು ಆಗದ ಸ್ಥಿತಿಯಲ್ಲಿದ್ದುದ್ದನ್ನು ಕಂಡು ಬುದ್ಧಿ ಹೇಳಿದ್ದಾರೆ.
ಇದೇ ವೇಳೆ ಸ್ಥಳಕ್ಕೆ ಬಂದ ಉತ್ತರ ಸಂಚಾರಿ ಠಾಣೆ ಪೊಲೀಸರು ಆಟೋ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆಯುವ ವೇಳೆ ನಿರಂಜನ ಹಿರೇಮಠ ಅವರು ಆಟೋ ಚಾಲಕನಿಂದ ತಮಗಾದ ಅನಿರೀಕ್ಷಿತ ಬೆಚ್ಚಿಬೀಳಿಸುವ ಅನುಭವ ಹೇಳಿಕೊಂಡು ಆತಂಕ ವ್ಯಕ್ತಪಡಿಸಿದ್ದಾರೆ.