For the best experience, open
https://m.samyuktakarnataka.in
on your mobile browser.

ನ್ಯಾಯದ ತೀರ್ಪಿಗಾದರೂ ತಲೆಬಾಗಿ ಮುಖ್ಯಮಂತ್ರಿಗಳು ರಾಜೀನಾಮೆ ನೀಡಲಿ

04:33 PM Sep 24, 2024 IST | Samyukta Karnataka
ನ್ಯಾಯದ ತೀರ್ಪಿಗಾದರೂ ತಲೆಬಾಗಿ ಮುಖ್ಯಮಂತ್ರಿಗಳು ರಾಜೀನಾಮೆ ನೀಡಲಿ

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧದ ಸಾವಿರಾರು ಕೋಟಿ ರೂ. ಗಳ ಮುಡಾ ಹಗರಣದ ತನಿಖೆಗೆ ಪ್ರಾಸಿಕ್ಯೂಷನ್ ಅನುಮತಿ ನೀಡಿದ ಗೌರವಾನ್ವಿತ ರಾಜ್ಯಪಾಲರ ನಿರ್ಧಾರ ಸರಿಯಾಗಿದೆ ಎಂದು ಆದೇಶ ನೀಡಿದ ರಾಜ್ಯದ ಉಚ್ಚ ನ್ಯಾಯಾಲಯದ ತೀರ್ಪು ಸತ್ಯಕ್ಕೆ ಸಂದ ಜಯವಾಗಿದ್ದು ಸಿದ್ದರಾಮಯ್ಯನವರು ತನಿಖೆಯ ದೃಷ್ಟಿಯಿಂದ ಇನ್ನಾದರೂ ರಾಜೀನಾಮೆ ನೀಡಲಿ ಎಂದು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದರು.
ಮುಖ್ಯಮಂತ್ರಿಗಳ ಕುಟುಂಬದ ಪರವಾಗಿ ಅಕ್ರಮ ನಡೆದಿರುವುದು ದಾಖಲೆಗಳ ಸಮೇತ ಕಣ್ಣಿಗೆ ರಾಚುತ್ತಿದ್ದರೂ ನಾನ್ಯಾಕೆ ರಾಜೀನಾಮೆ ಕೊಡಲಿ? ಬೇಕಿದ್ದರೆ ರಾಜ್ಯಪಾಲರೇ ರಾಜೀನಾಮೆ ಕೊಡಲಿ ಎಂದು ಭಂಡತನ ಪ್ರದರ್ಶಿಸಿದ್ದ ಸಿದ್ದರಾಮಯ್ಯನವರು ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ನ್ಯಾಯಪೀಠವೇ ಸಿದ್ದರಾಮಯ್ಯನವರ ಅರ್ಜಿಯನ್ನು ತಿರಸ್ಕರಿಸಿದ್ದು, ಇನ್ನಾದರೂ ಭಂಡತನವನ್ನು ಬಿಟ್ಟು ತಮ್ಮ ವಿರುದ್ಧದ ತನಿಖೆಗೆ ಸಹಕರಿಸಲು ಹಾಗೂ ಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಉಳಿಸಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.
ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಒಂದೊಂದು ಹಗರಣಗಳಿಗೂ ನ್ಯಾಯಾಲಯದಿಂದ ಇಂತಹದೇ ತೀರ್ಪು ಬಂದಲ್ಲಿ ಇಡೀ ಸಚಿವ ಸಂಪುಟವೇ ರಾಜೀನಾಮೆ ನೀಡುವ ಸ್ಥಿತಿ ನಿರ್ಮಾಣವಾಗಲಿದ್ದು ಆ ಮೂಲಕ ಭ್ರಷ್ಟ ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ತೊಲಗುವುದು ಖಚಿತ ಎಂದು ಹೇಳಿದರು.

Tags :