For the best experience, open
https://m.samyuktakarnataka.in
on your mobile browser.

ಪಕ್ಷದ ಹಿತದೃಷ್ಟಿಯಿಂದ ವರಿಷ್ಠರ ತೀರ್ಮಾನಕ್ಕೆ ತಲೆಬಾಗಿದ್ದೇನೆ

06:46 PM Oct 20, 2024 IST | Samyukta Karnataka
ಪಕ್ಷದ ಹಿತದೃಷ್ಟಿಯಿಂದ ವರಿಷ್ಠರ ತೀರ್ಮಾನಕ್ಕೆ ತಲೆಬಾಗಿದ್ದೇನೆ

ಬೆಂಗಳೂರು: ಪಕ್ಷದ ಹಿತದೃಷ್ಟಿ, ಪ್ರಸ್ತುತ ರಾಜಕೀಯ ಹಿತದೃಷ್ಟಿ ಹಾಗೂ ಕ್ಷೇತ್ರದ ದೃಷ್ಟಿಯಿಂದ ನನ್ನ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಲು ನಿರ್ಧಾರ ಕೈಗೊಂಡಿರುವುದಾಗಿ ಹೈಕಮಾಂಡ್ ನಾಯಕರು ತಿಳಿಸಿದ್ದಾರೆ. ಪಕ್ಷ ನನ್ನ ಮೇಲೆ ಭರವಸೆ ಇಟ್ಟು ಜವಾಬ್ದಾರಿ ನೀಡಿದ್ದು, ಪಕ್ಷದ ನಿರ್ಧಾರಕ್ಕೆ ತಲೆ ಬಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಗ್ಗಾಂವಿ ಕ್ಷೇತ್ರಕ್ಕೆ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ
ಮನಸಲ್ಲಿ ಏನೇ ಇದ್ದರೂ ಪಕ್ಷಕ್ಕಾಗಿ, ಸಮಾಜಕ್ಕಾಗಿ, ಕಾರ್ಯಕರ್ತರಿಗಾಗಿ ಪಕ್ಷದ ತೀರ್ಮಾನಕ್ಕೆ ತಲೆ ಬಾಗುತ್ತೇನೆ.
ನಾನು ಎರಡು ದಿನ ಸಮಯ ಕೇಳಿದ್ದೆ, ಆದರೆ, ಸಮಯ ಕೊಡದೇ ಘೋಷಣೆ ಮಾಡಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನನಗೆ ಮಾತನಾಡಲು ಅವಕಾಶವೇ ನೀಡಲಿಲ್ಲ. ನಿಮ್ಮ ಮಗನಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದೇವೆ.
ಅಲ್ಲಿ ನಿಮಗೆ ಹೆಸರಿದೆ ಮತ್ತು ಗೆಲುವು ಮುಖ್ಯ. ಸರ್ವೆ ವರದಿ ಕೂಡ ಭರತ್ ಪರ ಇದೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ದೂರವಾಣಿ ಮೂಲಕ ಮಾತನಾಡಿ ಚುನಾವಣೆ ಎದುರಿಸಬೇಕು. ಚುನಾವಣೆ ಗೆಲ್ಲಬೇಕು ಎಂದರು. ಹೀಗಾಗಿ ನಾನು ವರುಷ್ಠರ ನಿರ್ಧಾರಕ್ಕೆ ತಲೆ ಬಾಗಿದ್ದೇನೆ. ಪಕ್ಷ ತೀರ್ಮಾನ ಮಾಡಿದೆ. ನಂಗೆ ಈ ಬಾರಿ ಭರತ್ ಗೆ ಟಿಕೆಟ್ ಬೇಡ ಅನ್ನುವುದು ಇತ್ತು. ಆದರೆ ಪಕ್ಷ ನಂಬಿಕೆ ಇಟ್ಟು ಅವಕಾಶ ಕೊಟ್ಟಿದೆ. ನಾ ಏನೇ ಆಗಿದ್ದರೂ ಅದಕ್ಕೆ ಪಕ್ಷ ಕಾರಣ. ವಿಶ್ವಾಸ ಇಟ್ಟು ಪಕ್ಷ ತೀರ್ಮಾನ ಮಾಡಿರುವಾಗ ನಾನು ಬೇಡ ಎನ್ನಲು ಆಗಲಿಲ್ಲ. ನನ್ನ ಮನಸ್ಸಿನ ಭಾವನೆ ಏನೇ ಇದ್ದರು, ಪಾರ್ಟಿಯೆ ತೀರ್ಮಾನ ಮಾಡಿರುವಾಗ ಒಪ್ಪಿದೆ‌ ಎಂದು ಹೇಳಿದರು.
ಅಲ್ಲದೆ ಸ್ಥಳೀಯವಾಗಿ ಪಕ್ಷದ ಕಾರ್ಯಕರ್ತರು ಸಹ ತಮ್ಮನ್ನು ಕೈ ಬಿಡಬೇಡಿ ಎಂದರು. ಕಾರ್ಯಕರ್ತರು ಸಹ ಭಾವನಾತ್ಮಕ ಮಾತು ಆಡಿದ್ದಾರೆ. ಮನಸ್ಸಿನಲ್ಲಿ ಏನೆ ಇದ್ದರೂ ಸಹ. ನಾನು ಪಕ್ಷಕ್ಕಾಗಿ ಸಮಾಜಕ್ಕೆ ಒಪ್ಪಿದ್ದೇನೆ. ಪಕ್ಷ ಬೇರೆ ಯಾರಿಗೇ ಸ್ಥಳೀಯವಾಗಿ ಟಿಕೆಟ್ ಕೊಟ್ಟರೂ ನಾನು ನನ್ನ ಮಗನ ರೀತಿಯಲ್ಲೇ ಕೆಲಸ ಮಾಡುತ್ತೇನೆ ಅಂದೆ. ಆದರೆ, ನನ್ನ ಮಾತನ್ನು ಒಪ್ಪದೇ ಇದು ಸರ್ವಸಮ್ಮತ ನಿರ್ಧಾರ, ಚುನಾವಣೆ ಗೆದ್ದು ಬನ್ನಿ ಅಂದಿದ್ದಾರೆ ಎಂದರು.
ಉಪ ಚುನಾವಣೆಯ ಸವಾಲಿನ ಕುರಿತು ಕೇಳಿದ ಪ್ರಶ್ನೆಗೆ ಈ ಬೈ ಎಲೆಕ್ಷನ್ ಸವಾಲು ಕೂಡಾ ಆಗಿದೆ, ಹಿಂದೆ ಅಧಿಕಾರದಲ್ಲಿರುವಾಗ, ಪ್ರತಿಪಕ್ಷದಲ್ಲಿ ಇರುವಾಗ ಅನೇಕ ಉಪಚುನಾವಣೆ ಎದುರಿಸಿ ಅನುಭವ ಇದೆ. ಪಕ್ಷ ನನ್ನ ಭರವಸೆ ಇಟ್ಟು ಮಗನಿಗೆ ಟಿಕೆಟ್ ಕೊಟ್ಟಿದೆ. ಪಕ್ಷದ ನಿರ್ಧಾರಕ್ಕೆ ನಾನು ತಲೆಬಾಗಬೇಕಾದ ಪ್ರಸಂಗ ಬಂದಿದೆ. ಪಕ್ಷದ ಈ ನಿರ್ಧಾರದಲ್ಲಿ ಎಲ್ಲ ರಾಜಕೀಯ ಮೀರಿದೆ. ಪಕ್ಷದ ತೀರ್ಮಾನ ಒಪ್ಪಲೇಬೇಕಾಯಿತು. ಕ್ಷೇತ್ರದ ಕಾರ್ಯಕರ್ತರ ಭಾವನೆಗಳಿಗೂ ಬೆಲೆ ಕೊಡಬೇಕು. ನಾವು ಗೆಲ್ಲಬೇಕು ಅಂತ ಕಾರ್ಯಕರ್ತರು ಹೇಳಿದ್ದಾರೆ. ಚುನಾವಣೆ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದರು.
ಕುಟುಂಬ ರಾಜಕಾರಣದ ಕುರಿತು ಕೇಳಿದ ಪ್ರಶ್ನೆಗೆ ಇದು ಉಪ ಚುನಾವಣೆ ಆಗಿರುವುದರಿಂದ ಇದು ವಿಶೇಷ ಸಂದರ್ಭವಾಗಿದೆ. ನಮ್ಮ ಪಕ್ಷ ಯಾವಾಗಲೂ ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು ಎಂದು ಹೇಳುತ್ತದೆ. ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾಸ ಇಟ್ಟು ಜವಾಬ್ದಾರಿ ಕೊಟ್ಟಾಗ ನಾನು ಹಿಂದೆ ಸರಿದರೆ ನನ್ನ ಜವಾಬ್ದಾರಿಯಿಂದ ಹಿಂದೆ ಸರಿದಂತಾಗುತ್ತದೆ. ಹೀಗಾಗಿ ನನ್ನ ಮನಸಲ್ಲಿ ಏನೇ ಭಾವನೆ ಇದ್ದರೂ, ನಾನು ತಲೆಬಾಗುವ ಪ್ರಸಂಗ ಬಂದಿದೆ. ನನಗೆ ಇಷ್ಟೆಲ್ಲ ಸ್ಥಾನ ಮಾನ ಸಿಗಲು ಪಕ್ಷ ಕಾರಣ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ತೀರ್ಮಾನಕ್ಕೆ ತಲೆ ನಾಗಿದ್ದೇನೆ ಎಂದು ಹೇಳಿದರು.
ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಗೊಂದಲದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚನ್ನಪಟ್ಟಣದಲ್ಲಿ ಗೆಲ್ಲುವ ದೃಷ್ಟಿಯಿಂದ ಎರಡೂ ಕಡೆಯೂ ಸಭೆಗಳಾಗುತ್ತಿವೆ. ಎನ್‌ಡಿಎ ಒಮ್ಮತದ ಅಭ್ಯರ್ಥಿ ಆಯ್ಕೆ ಆಗಲಿದೆ. ಚನ್ನಪಟ್ಟಣದಲ್ಲಿ ನಮ್ಮದೇ ಗೆಲುವು. ಡಿಸಿಎಂ ಡಿಕೆ ಶಿವಕುಮಾರ್ ಅವರು ಏನೇನೋ ಮಾತನಾಡುತ್ತಾರೆ, ಅದಕ್ಕೆಲ್ಲ ಉತ್ತರ ಕೊಡಲು ಆಗುವುದಿಲ್ಲ ಎಂದು ಹೇಳಿದರು.

Tags :