For the best experience, open
https://m.samyuktakarnataka.in
on your mobile browser.

ಪತ್ನಿ ಅಪಹರಣ ಪ್ರಕರಣ ಸುಖಾಂತ್ಯ

09:13 PM Jul 15, 2023 IST | Samyukta Karnataka
ಪತ್ನಿ ಅಪಹರಣ ಪ್ರಕರಣ ಸುಖಾಂತ್ಯ

ಗದಗ: ಜಿಲ್ಲೆಯ ನಾಗರಿಕರಲ್ಲಿ ತೀವ್ರ ಆತಂಕ ಮೂಡಿಸಿದ್ದ ಪತಿಯ ಕಣ್ಣಿಗೆ ಖಾರದ ಪುಡಿ ಎರಚಿ ಪತ್ನಿ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ.
ಮನೆಯವರ ವಿರೋಧದ ನಡುವೆ ಪ್ರೀತಿಸಿದ ಹುಬ್ಬಳ್ಳಿಯ ಯುವತಿಯನ್ನು ವಿವಾಹವಾಗಿದ್ದ ಗದಗನ ತಳಗೇರಿ ಯುವಕನನ್ನು ಥಳಿಸಿ, ಕಣ್ಣಿಗೆ ಖಾರದ ಪುಡಿ ಎರಚಿ ಯುವತಿಯನ್ನು ಅಪಹರಿಸಲಾಗಿತ್ತು. ಈ ಘಟನೆ ನಾಗರಿಕರಲ್ಲಿ ತೀವ್ರ ಆತಂಕವನ್ನುಂಟು ಮಾಡಿತ್ತು. ಪ್ರಸ್ತುತ ಯುವತಿ ತಾನೇ ಸ್ವತಃ ತನ್ನ ಪೋಷಕರೊಂದಿಗೆ ತೆರಳಿದ್ದಾಗಿ ಹೇಳಿದ್ದರಿಂದ ಪ್ರಕರಣ ಸುಖಾಂತ್ಯಗೊಂಡಿದೆಯೆಂದು ಎಸ್‌ಪಿ ಬಿ.ಎಸ್. ನೇಮಗೌಡ ಸಂಯುಕ್ತ ಕರ್ನಾಟಕಕ್ಕೆ ತಿಳಿಸಿದ್ದಾರೆ.
ಏನಾಗಿತ್ತು?: ನಗರದ ತಳಗೇರಿ ಓಣಿಯ ಅಭಿಷೇಕ ಹಾಗೂ ಹುಬ್ಬಳ್ಳಿಯ ಐಶ್ವರ್ಯಾ ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಇಬ್ಬರ ವಿವಾಹಕ್ಕೆ ಯುವತಿಯ ಮನೆಯಲ್ಲಿ ತೀವ್ರ ವಿರೋಧವಿತ್ತು. ಮನೆಯಲ್ಲಿನ ವಿರೋಧದ ಮಧ್ಯೆಯೇ ಈ ಜೋಡಿ ಕಳೆದ ದಿ. 23ರಂದು ಗದಗನ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ವಿವಾಹವಾಗಿತ್ತು. ಜುಲೈ ೧೪ ರಂದು ಗದಗನಲ್ಲಿ ಅದ್ದೂರಿಯಾಗಿ ವಿವಾಹದ ಆರತಕ್ಷತೆಯನ್ನು ನಿಗದಿಪಡಿಸಲಾಗಿತ್ತು. ಈ ಮಧ್ಯೆ ಯುವತಿಯ ಪಾಲಕರು ಯುವಕನ ಮನೆಗೆ ಬಂದು ಯುವಕನ ಮೇಲೆ ಹಲ್ಲೆ ನಡೆಸಿ ಯುವತಿಯನ್ನು ಕರೆದೊಯ್ದಿದ್ದರು.
ಈ ಬಗ್ಗೆ ಪತಿಯ ಪಾಲಕರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಪ್ರದೀಪ್ ವಿಚಾರಣೆ ನಡೆಸಿ, ಹುಡುಗಿಯನ್ನು ಮರಳಿ ಗದಗಕ್ಕೆ ಕರೆದುಕೊಂಡು ಬಂದಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಪೋಷಕರ ಜತೆಗೆ ತಾನೇ ತೆರಳಿದ್ದಾಗಿ ಹೇಳಿಕೆ ನೀಡಿದ್ದಾಳೆ.