For the best experience, open
https://m.samyuktakarnataka.in
on your mobile browser.

ಪರಂಪರೆಯ ಉಳಿವಿಗೆ ಮಠ-ಪೀಠಗಳೊಂದಿಗೆ ಸಮನ್ವಯ ಅಗತ್ಯ

11:56 PM Jun 07, 2024 IST | Samyukta Karnataka
ಪರಂಪರೆಯ ಉಳಿವಿಗೆ ಮಠ ಪೀಠಗಳೊಂದಿಗೆ ಸಮನ್ವಯ ಅಗತ್ಯ

ಮೈಸೂರು: ಭಾರತದ ಅಖಂಡತೆ ಮತ್ತು ಪರಂಪರೆಯ ಉಳಿವಿಗಾಗಿ ವಿವಿಧ ಮಠ-ಪೀಠಗಳೊಂದಿಗೆ ಸಮನ್ವಯ ಅಗತ್ಯ ಎಂದು ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀ ಸುಜಯನಿಧಿ ತೀರ್ಥ ಸ್ವಾಮೀಜಿ ಹೇಳಿದರು ಹೇಳಿದರು.
ಅವರು ಜೆಪಿ ನಗರದ ವಿಠಲಧಾಮದ ಭವ್ಯ ವೇದಿಕೆಯಲ್ಲಿ ಶ್ರೀ ಸೋಸಲೆ ವ್ಯಾಸರಾಜ ಮಠ ಆಯೋಜನೆ ಮಾಡಿರುವ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದ ಶುಕ್ರವಾರದ ವಿದ್ವತ್ ಸಭೆಯಲ್ಲಿ ಆಶೀರ್ವಚನ ನೀಡಿದರು.
ತತ್ವಗಳು ವಿಚಾರಗಳು ಮತ್ತು ಮಾರ್ಗಗಳು ವಿಭಿನ್ನವಾದರೂ ಹಿಂದುತ್ವದ ರಕ್ಷಣೆಗೆ ಮತ್ತು ಸನಾತನ ಪರಂಪರೆ, ಶಾಸ್ತ್ರ ವಿದ್ಯೆಯ ಅಳಿವು ಮತ್ತು ಉಳಿವಿಗಾಗಿ ಸೌಹಾರ್ದತೆ ಮತ್ತು ಬಾಂಧವ್ಯ ಅನಿವಾರ್ಯವಾಗಿದೆ.
ಮಠಗಳು ವಿದ್ಯಾರ್ಜನೆ ಗೆ ಹೆಚ್ಚಿನ ಮಹತ್ವ ನೀಡಬೇಕು. ಇದನ್ನು ವ್ಯಾಸ ತೀರ್ಥ ವಿದ್ಯಾಪೀಠ ಮಾಡಿ ತೋರಿಸಿ ಅದ್ವಿತೀಯ ಸ್ಥಾನದಲ್ಲಿ ಇದೆ ಎಂದರು. ಸನಾತನ ಪರಂಪರೆ ಶಾಸ್ತ್ರ ವಿದ್ಯೆ ಸಮಾಜದ ಅಭಿವೃದ್ಧಿಗೆ ಪೂರಕವಾಗಬೇಕು. ದೇಶದ ಸಮಗ್ರ ಪ್ರಗತಿಗೆ ಭದ್ರ ನೆಲೆಗಟ್ಟು ಆಗಬೇಕು ಎಂದವರು ಆಶಿಸಿದರು.
ಉತ್ತರಾದಿ ಮಠಾಧೀಶರಾದ ಸತ್ಯಾತ್ಮ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ವಿದ್ಯಾರ್ಥಿಗಳು ಶ್ರಮ ವಹಿಸಿ ಅಧ್ಯಯನ ಮಾಡಿರುವುದು ಒಂದೆಡೆಯಾದರೆ ಅವರಲ್ಲಿ ಧೈರ್ಯ , ಸದಾಚಾರ , ಸಂಸ್ಕಾರ, ನೈತಿಕತೆ ಮತ್ತು ಜೀವನ ಕ್ರಮದ ಮಾರ್ಗವನ್ನು ಕಲಿಯುವುದು ಗುರುವಿನ ಅನುಸರಣೆಯಿಂದ ಮಾತ್ರ. ಈ ನಿಟ್ಟಿನಲ್ಲಿ ಇಂದು ಸುಧಾಮಂಗಳ ಮಾಡುತ್ತಿರುವ ವಿದ್ಯಾರ್ಥಿಗಳಾದ ಸೌಮಿತ್ರಿ, ಸುಘೋಷ, ಪ್ರಣವ ಮತ್ತು ಹೊನ್ನಾಳಿ ಆಯಾಚಿತ ಶ್ರೀಶ ಆಚಾರ್ಯರು ವಿನಯತೆ ಪ್ರತೀಕವಾಗಿದ್ದಾರೆ ಎಂದರು.
ಶ್ರೀ ವ್ಯಾಸ ತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ ಡಿ.ಪಿ. ಮಧುಸೂದನಾಚಾರ್ಯರು ಮಾತನಾಡಿ ಪೇಜಾವರ ಶ್ರೀ ವಿಶ್ವೇಶ ತೀರ್ಥರು ನಮ್ಮ ವಿದ್ಯಾಪೀಠಕ್ಕೆ ಪ್ರಪ್ರಥಮವಾಗಿ ಸ್ಫೂರ್ತಿ ಮತ್ತು ಚೈತನ್ಯ ನೀಡಿದವರು ಎಂದು ಸ್ಮರಿಸಿದರು. ಕಳೆದ ಎಂಟು ವರ್ಷಗಳ ಹಿಂದೆ ಶ್ರೀ ವ್ಯಾಸ ತೀರ್ಥ ವಿದ್ಯಾಪೀಠ ತಿರುಮಕೂಡಲು ಕ್ಷೇತ್ರದಲ್ಲಿ ಆರಂಭವಾದಾಗ ಸ್ವತ: ನನ್ನ ತಾಯಿಯವರೇ ಎಲ್ಲ ಮಕ್ಕಳಿಗೂ ಅಡುಗೆ ಮಾಡಿ ಕೈ ತುತ್ತು ಹಾಕಿ ಬೆಳೆಸಿದರು. ವಿದ್ಯಾರ್ಥಿಗಳ ಸಮಗ್ರ ಕ್ಷೇಮ ಪಾಲನೆಯಲ್ಲಿ ಪ್ರತಿನಿತ್ಯವೂ ನೂರಾರು ಸಮಸ್ಯೆ ಎದುರಾದರು ಅವೆಲ್ಲವೂ ಗುರುಗಳ ಪರಮ ಅನುಗ್ರಹದಿಂದ ನಿವಾರಣೆಯಾಗಿ ಇಂದು ನಾಲ್ವರು ಪಂಡಿತರಾಗುವ ಮಟ್ಟದವರೆಗೆ ಸಂಸ್ಥೆ ಬೆಳೆದಿದೆ. ಇವುಗಳ ಹಿಂದೆ ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥರ ಪರಿಶ್ರಮ ಅಗಾಧವಾಗಿದೆ ಎಂದರು.
ವಿದ್ಯಾಪೀಠದ ವ್ಯವಸ್ಥಾಪಕ ಟ್ರಸ್ಟಿ ಶೇಷಗಿರಿ ಆಚಾರ್ಯ, ಹಿರಿಯ ವಿದ್ವಾಂಸ ಡಾ. ಎ.ವಿ. ನಾಗಸಂಪಿಗೆ, ನಿವೃತ್ತ ನ್ಯಾಯಾಧೀಶ ದಿನೇಶ ಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಸುರಂಜನ್ ಮಾತನಾಡಿದರು. ಸೋಸಲೆ ಶ್ರೀ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಬಡತನದ ಬೇಗೆಯಲ್ಲೂ ಕೈ ಹಿಡಿದ ವಿದ್ಯಾಪೀಠ:
ಸುಧಾ ಪರೀಕ್ಷೆ ಎದುರಿಸಿ ವಿದ್ವಾಂಸರ ಪ್ರಶಂಸೆಗೆ ಭಾಜನರಾದ ಹೊನ್ನಾಳಿ ಆಯಾಚಿತ ಶ್ರೀಶ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡು, ಬಡತನದ ಬೇಗೆಯಲ್ಲಿ ನಾನು ಇದ್ದರೂ, ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡರೂ ಸೋಸಲೆ ಶ್ರೀಗಳು ನನ್ನನ್ನು ಕೈಹಿಡಿದು ಅನ್ನ, ಆಹಾರವನ್ನು ನೀಡಿ ವಿದ್ಯಾದಾನ ಮಾಡಿದರು.
ಕಳೆದ ವರ್ಷ ನನ್ನ ಸಹೋದರಿಯ ವಿವಾಹ ಸಂದರ್ಭದಲ್ಲಿಯೂ ನಮ್ಮ ಬಡತನವನ್ನು ಕಂಡು ಸಂಪೂರ್ಣ ವಿವಾಹದ ಜವಾಬ್ದಾರಿಯನ್ನು ಮಠದಿಂದಲೇ ನಿರ್ವಹಿಸಿದ್ದನ್ನು ಜೀವನದಲ್ಲಿ ಮರೆಯಲಾಗದು ಇಂದು ನನಗೆ ಸುಧಾ ಪಂಡಿತ ಎಂಬ ಮಾನ್ಯತೆ ದೊರಕಿದ್ದರ ಹಿಂದೆ ಗುರುಗಳ ಅನುಗ್ರಹ ದೊಡ್ಡದಾಗಿದೆ ಎಂದರು.

ಪ್ರದರ್ಶಿನಿ:
ಇದೇ ಸಂದರ್ಭದಲ್ಲಿ ಸೋಸಲೆ ಮಠ ಆಯೋಜಿಸಿದ್ದ ವಿಶೇಷ ಪ್ರದರ್ಶಿನಿ ಗಮನ ಸೆಳೆಯಿತು. ವೇದ, ರಾಮಾಯಣ, ಮಹಾಭಾರತ ಶ್ರೀಮನ್ ನ್ಯಾಯ ಸುಧಾ, ವ್ಯಾಸತ್ರಗಳು ಮತ್ತು ಉಪನಿಷತ್ತಿನ ವರ್ಣ ಚಿತ್ರಗಳು ವೀಕ್ಷಕರ ಗಮನಸೆಳೆದವು. ಸಂಜೆ ವಿವಿಧ ಭಜನಾ ಮಂಡಳಿಗಳು ನಾದಸ್ವರ ವೇದಘೋಷ ದೊಂದಿಗೆ ಶೋಭಾ ಯಾತ್ರೆ ಸಂಪನ್ನಗೊಂಡಿತು. ಶ್ರೀ ವ್ಯಾಸರಾಜರಿಗೆ ಸಾಂಪ್ರದಾಯಿಕವಾಗಿ ದರ್ಬಾರ್ ಸಮರ್ಪಿಸಲಾಯಿತು. ವಿವಿಧ ಪೀಠಾಧೀಶರು ವ್ಯಾಸರಾಜರಿಗೆ ರತ್ನದ ಅಭಿಷೇಕ ಸಮರ್ಪಣೆ ಮಾಡಿ ಧನ್ಯತೆ ಮೆರೆದರು.