ಪರಶುರಾಮ ಸಾವು-ಸಿಬಿಐ ತನಿಖೆಗೆ ಅಶೋಕ ಆಗ್ರಹ
ಕಾರಟಗಿ(ಕೊಪ್ಪಳ): ಪ್ರಾಮಾಣಿಕತೆಯ ಸೋಗು ಹಾಕಿ ಅಧಿಕಾರಿಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಭ್ರಷ್ಟಾಚಾರದಲ್ಲಿ ಮುಳುಗಿದ್ದು ಪರಿಣಾಮವಾಗಿ ಪ್ರಾಮಾಣಿಕ ಅಧಿಕಾರಿಗಳ ಸಾವನಪ್ಪುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದರು.
ಸೋಮನಾಳ ಗ್ರಾಮದ ಪಿಎಸ್ಐ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಕುಟುಂಬವನ್ನು ಭಾನುವಾರ ಭೇಟಿ ಮಾಡಿ, ಸಾಂತ್ವನ ಹೇಳಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪಿಎಸ್ಐ ಸಾವಿನ ಪ್ರಕರಣವನ್ನು ಗೃಹಮಂತ್ರಿಗಳು ಗಂಭಿರವಾಗಿ ಪರಿಗಣಿಸಬೇಕು. ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಸಿಐಡಿ ತನಿಖೆಗೆ ಪರಶುರಾಮ ಕುಟುಂಬದವರು ಹಾಗೂ ನಾವು ಯಾರು ಒಪ್ಪಲ್ಲ, ಸಿಬಿಐಗೆ ವಹಿಸಬೇಕು. ಕುಟುಂಬದವರ ಒತ್ತಾಯವೂ ಇದೆ ಆಗಿದೆ ಎಂದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಶಾಸಕ ಚನ್ನಾರೆಡ್ಡಿ ಹಾಗೂ ಅವರ ಮಗನನ್ನು ಬಂಧಿಸಬೇಕು. ಬಿಜೆಪಿ ಬಗ್ಗೆ ಮಾತಾಡೊ ರಾಹುಲ್ ಗಾಂಧಿ ಈ ಕುಟುಂಬದ ಬಗ್ಗೆ ಉತ್ತರ ಕೊಡಬೇಕು ಎಂದು ಸವಾಲು ಹಾಕಿದರು.
ಸರ್ಕಾರ ತಕ್ಷಣ ಈ ವರ್ಗಾವಣೆಗೆ ಸಹಿ ಮಾಡಿದ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಒಬ್ಬ ದಲಿತ ಅಧಿಕಾರಿಗೆ ಈ ರೀತಿ ಮಾಡಿರೋದು ನ್ಯಾಯವಾ?. ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ ಸರ್ಕಾರ ಇನ್ನೂ ವರದಿ ಬರೋ ಮೊದಲೇ ಗೃಹ ಸಚಿವರು ಸಿಓಡಿ ತನಿಖೆಗೆ ಆದೇಶಿಸಿದ್ದಾರೆ. ವರದಿ ಬಂದ ಮೇಲೆ ಗೃಹಸಚಿವರು ಮಾತಾಡಬೇಕಿತ್ತು. ಅವರದೇ ಸಮಾಜದ ಯುವಕನಿಗೆ ಅನ್ಯಾಯವಾದಾಗಲೂ ಜಾರಿಕೆಯ ಉತ್ತರ ಕೊಡಬಾರದಿತ್ತು ಎಂದು ಟೀಕಿಸಿದರು.
ಸ್ವರ್ಗಸ್ಥ ಪಿಎಸ್ಐ ಪರಶುರಾಮ ಅವರ ಮನೆಗೆ ಬಂದು ಕುಟುಂಬಸ್ಥರ ಜೊತೆ ಮಾತಾಡಿದ್ದೇನೆ. ಅವರ ಪತ್ನಿ ಒಂಭತ್ತು ತಿಂಗಳ ತುಂಬು ಗರ್ಭಿಣಿ, ದೂರು ಕೊಡಲು ಬಂದ ಗರ್ಭಿಣಿಗೆ ೧೪ ಗಂಟೆ ನ್ಯಾಯ ಕೊಡದೆ ಕಾಯಿಸಿರುವುದು ಸರ್ಕಾರದ ದುರಹಂಕಾರ ಎಂದು ದೂರಿದರು.