For the best experience, open
https://m.samyuktakarnataka.in
on your mobile browser.

ಪಾದಯಾತ್ರೆ ಕನ್ನಡಿಗರ ಜನಧ್ವನಿಯಾಗಿ ಸಂಪನ್ನಗೊಂಡಿದೆ

04:34 PM Aug 10, 2024 IST | Samyukta Karnataka
ಪಾದಯಾತ್ರೆ ಕನ್ನಡಿಗರ ಜನಧ್ವನಿಯಾಗಿ ಸಂಪನ್ನಗೊಂಡಿದೆ

ಬೆಂಗಳೂರು: ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ನಡೆದ ಮೈಸೂರು ಚಲೋ ಬೃಹತ್ ಪಾದಯಾತ್ರೆ ಅಭೂತಪೂರ್ವ ಯಶಸ್ಸಿನೊಂದಿಗೆ ಕನ್ನಡಿಗರ ಜನಧ್ವನಿಯಾಗಿ ಸಂಪನ್ನಗೊಂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ನಡೆಸಿದ ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ ಹಾಗೂ ಇತರೆ ಹಗರಣಗಳ ವಿರುದ್ಧ ಭಾರತೀಯ ಜನತಾ ಪಕ್ಷ ಮತ್ತು ಜೆಡಿಎಸ್ ಜಂಟಿಯಾಗಿ ನಡೆಸಿದ ಏಳು ದಿನಗಳ ಬೃಹತ್ ಪಾದಯಾತ್ರೆ ಪ್ರತಿಭಟನೆ ಇಂದು ಮೈಸೂರಿನಲ್ಲಿ ಸಂಪೂರ್ಣಗೊಂಡಿದ್ದು, ಲಕ್ಷಾಂತರ ಕಾರ್ಯಕರ್ತರು ಕನ್ನಡಿಗರು ಭಾಗವಹಿಸಿ, ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಭಿವೃದ್ಧಿ ಮಾಡಬೇಕಾದ ಅನುದಾನವನ್ನು ಕಾಂಗ್ರೆಸ್ ಸರಕಾರದ ಸಚಿವರುಗಳೇ ಭ್ರಷ್ಟಾಚಾರ ನಡೆಸಿ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದು, ಸ್ವತಃ ಮುಖ್ಯಮಂತ್ರಿಗಳೇ ಹಗರಣದಲ್ಲಿ ತೊಡಗಿದ್ದಾರೆ. ಕಳೆದ ಒಂದೂವರೇ ವರ್ಷದಲ್ಲಿ ಇಡೀ ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ಗ್ಯಾರಂಟಿ ಹೆಸರಿನಲ್ಲಿ ಜನರ ದಿನನಿತ್ಯದ ಜೀವನಕ್ಕೆ ದುಬಾರಿಯಾಗುವಂತೆ ಬೆಲೆ ಏರಿಕೆ ಮಾಡಿ ಕಳ್ಳಾಟ ಆಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರವನ್ನು ಕಿತ್ತೆಸೆಯುವ ಸಮಯ ಬಂದಿದೆ. ಭ್ರಷ್ಟಾಚಾರ ಮಾಡುವ ಸರಕಾರಕ್ಕೆ ಶಿಕ್ಷೆ ಆಗುವವರೆಗೂ ನಮ್ಮ ಈ ಹೋರಾಟ ನಿಲ್ಲದು. ಕಳೆದ ಏಳು ದಿನಗಳಿಂದ ರಾಜ್ಯದ ಮೂಲೆ ಮೂಲೆಗಳಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ನಮಗೆ ಬೆಂಬಲ ಸೂಚಿಸಿದ್ದು, ರಾಜ್ಯದ ಜನತೆ ಎನ್‌ಡಿಎ ಮೈತ್ರಿ ಪಕ್ಷದ ಮೇಲೆ ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ. "ಮೈಸೂರು ಚಲೋ" ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ಹಗಲಿರುಳು ಶ್ರಮಿಸಿದ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಮುಖಂಡರಿಗೂ ಜನಪ್ರತಿನಿಧಿಗಳಿಗೂ ಹೃದಯಂತರಾಳದ ಧನ್ಯವಾದಗಳು ಎಂದಿದ್ದಾರೆ.

Tags :