For the best experience, open
https://m.samyuktakarnataka.in
on your mobile browser.

ಪಿ.ಡಿ.ಓ ಅಮಾನತು

09:58 AM Dec 20, 2023 IST | Samyukta Karnataka
ಪಿ ಡಿ ಓ ಅಮಾನತು

ಕಲಬುರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ತಿ ಯೋಜನೆಯಡಿ ಕಳಪೆ ಸಾಧನೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶುಚಿತ್ವ-ನೈರ್ಮಲ್ಯ ಕಾಪಾಡದೆ ಕರ್ತವ್ಯದಲ್ಲಿನ ನಿರ್ಲಕ್ಷ್ಯತನ, ಬೇಜವಬ್ದಾರಿತನ ಆರೋಪದ ಹಿನ್ನೆಲೆಯಲ್ಲಿ ಇಲಾಖೆ‌ ವಿಚಾರಣೆ ಕಾಯ್ದಿರಿಸಿ ಚಿತ್ತಾಪುರ ತಾಲುಕಿನ ರಾಂಪೂರಹಳ್ಳಿ ಗ್ರಾಮ ಪಂಚಾಯತ್ ಪಿ.ಡಿ.ಓ ಬಸವರಾಜ ಭಾಸಗಿ ಅವರನ್ನು ಅಮಾನತ್ತುಗೊಳಿಸಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು ಮಂಗಳವಾರ ಅದೇಶ ಹೊರಡಿಸಿದ್ದಾರೆ.

ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲ ಕಟ್ಟಡಗಳ ಸಮಗ್ರ ತೆರಿಗೆಯನ್ನು ನಡೆಸಿ ನಮೂನೆ- 9-ಎ ದಲ್ಲಿ ನಮೂದಿಸಲೂ ಸೂಚಿಸಿದರೂ ಪೂರ್ಣಗೊಳಿಸಿರುವುದಿಲ್ಲ, ನರೇಗಾ ಯೋಜನೆಯಡಿ ಗುರಿಗೆ ಎದುರಾಗಿ ಮಾನವ ದಿನಗಳ ಸೃಜಿಸುವಂತೆ ಹಲವಾರು ಬಾರಿ ಸೂಚಿಸಿದರೂ ಕೂಡ ಶೇ. 50ಕ್ಕಿಂತ ಕಡಿಮೆ ಪ್ರಗತಿ, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಗ್ರಾಮೀಣ ಸಮುದಾಯದಲ್ಲಿ ಶುಚಿತ ನೈರ್ಮಲ್ಯ ಕಾಪಾಡಲು ಬಿಟ್ಟುಹೋದ ಕುಟುಂಬಗಳ ಗುರುತಿಸುವಂತೆ ಸೂಚಿಸಿದರು ಅದನ್ನು ಪಾಲಿಸಿಲ್ಲ ಎಂದು ಚಿತ್ತಾಪೂರ ತಾಲೂಕ ಪಂಚಾಯತ್ ಇ.ಓ. ಅವರು ವರದಿ ನೀಡಿದ್ದರು.

ಇದಲ್ಲದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ರಾಂಪೂರಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ತರಕಸಪೇಟ ಗ್ರಾಮಕ್ಕೆ ಭೇಟಿ ನೀಡಿದ ಸಮಯದಲ್ಲಿ ಗ್ರಾಮದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸದಿರುವುದು ಮತ್ತು ಗ್ರಾಮದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮರ್ಪಕ ಸರಬರಾಜು ಮಾಡದೇ ಇರುವುದು ಕಂಡುಬಂದಿರುವುದರಿಂದ ಸದರಿ ಪಿ.ಡಿ.ಓ. ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸೂಚಿರುತ್ತಾರೆಂದು ಎಂದು ಇ.ಓ ಅವರು ವರದಿಯಲ್ಲಿ ಉಲ್ಲೇಖಿಸಿದರು.

ಚಿತ್ತಾಪುರ ತಾಲೂಕ ಪಂಚಾಯತ್ ಇ.ಓ ವರದಿ ಮೇರೆಗೆ ಶಿಸ್ತುಪಾಲನಾ ಅಧಿಕಾರಿಯಾಗಿರುವ ಜಿಲ್ಲಾ ಪಂಚಾಯತ್ ಸಿ.ಇ.ಓ. ಭಂವರ್ ಸಿಂಗ್ ಮೀನಾ ಅವರು ಇಲಾಖಾ‌ ವಿಚಾರಣೆ ಕಾಯ್ದಿರಿಸಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ)-1957ರ ನಿಯಮ 10(1)ಡಿ ಪ್ರಕಾರ ಬಸವರಾಜ ಭಾಸಗಿ ಅವರನ್ನು ಅಮಾನತ್ತುಗೊಳಿಸಿದ್ದಾರೆ.

ಅಮಾನತ್ತಿನ‌ ಅವಧಿಯಲ್ಲಿ ನೌಕರರು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ 98(ಎ) ಪ್ರಕಾರ ಜೀವನಾಂಶ, ಭತ್ಯೆ ಪಡೆಯಲು ಅರ್ಹರಾಗಿದ್ದು, ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.